ಬಸವ ನಾಡಿನಲ್ಲಿ ರಂಗಪಂಚಮಿ ರಂಗಿನಲ್ಲಿ ಮಿಂದೆದ್ದು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಕಮಲ ಪಡೆಯ ಕಲಿಗಳು

ವಿಜಯಪುರ: ಬಸವನಾಡು(Basavanadu) ಖ್ಯಾತಿಯ ವಿಜಯಪುರದಲ್ಲಿ ಹೋಳಿ ಹುಣ್ಣಿಮೆಯಾಗಿ(Holi Honnime) ಐದನೇ ದಿನಕ್ಕೆ ನಡೆಯುವ ರಂಗ ಪಂಚಮಿ(Ranga Panchami), ಬಣ್ಣದಾಟ(Colour Celebration) ಗಮನ ಸೆಳೆಯಿತು.  ಹಿರಿಯರು, ಕಿರಿಯರೆನ್ನದೆ, ಮಹಿಳೆಯರು(Women) ಪುರುಷರೆನ್ನದೇ(Men) ಎಲ್ಲರೂ ಸಾಮೂಹಿಕವಾಗಿ ಬಣ್ಮದಾಟದಲ್ಲಿ ತೊಡಗುವ ಮೂಲಕ ರಂಗ ಪಂಚಮಿಗೆ ರಂಗೀನ ಮೆರಗು ನೀಡಿದರು.

ವಿಜಯಪುರದಲ್ಲಿ ರಂಗಪಂಚಮಿ ಆಚರಿಸಿದ ಬಿಜೆಪಿ ಕಾರ್ಯಕರ್ತರು

ಮಾನವೀಯ ಮೌಲ್ಯಗಳನ್ನು ಸಾರುವ, ದುಷ್ಟ ವಿಚಾರಗಳನ್ನು ಸುಡುವ ಹೋಳಿ ಹಣ್ಣಿಮೆಯ ರಂಗಮ ಪಂಚಮಿ ಪ್ರತಿಯೊಂದು ಮನಸ್ಸನು ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿತು.  ಜಾತಿ- ಭೇದಗಳಿಲ್ಲದೇ ಜನರು ರಂಗ ಪಂಚಮಿ ಸಂಭ್ರಮದಲ್ಲಿ ತೇಲಾಡಿದರು.  ಬಸವ ನಾಡು ವಿಜಯಪುರ ನಗರದ ಸಾರ್ವಜನಿಕ ರಸ್ತೆಗಳಲ್ಲಿ ಯುವ ಸಮುದಾಯ ಡಿಜೆ ಸದ್ದು ಹಾಗೂ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು.

ವಿಜಯಪುರ ನಗರದ ಗೋದಾವರಿ ಹೊಟೆಲ್ ಹತ್ತಿರದಲ್ಲಿ ಬಿಜೆಪಿ ಘಟಕದಿಂದ ರಂಗಪಂಚಮಿ ರಂಗೋತ್ಸವ ಆಯೋಜಿಸಲಾಗಿತ್ತು.  ಬೆಳಿಗ್ಗೆ ಒಂದೆಡೆ ಸೇರಿದ ಎಲ್ಲ ಬಿಜೆಪಿ ಕಾರ್ಯಕರ್ತರು ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.  ಡಿಜೆ ಶಬ್ದ ಕಿವಿ ಗಡಚಿಕ್ಕುತ್ತಿದ್ದರೆ, ಅಲ್ಲಿ ಸೇರಿದ್ದ ಕಮಲ ಪಡೆಯ ಕಲಿಗಳು ಡ್ಯಾನ್ಸ್ ಮಾಡುತ್ತ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.  ಕೆಲವರು ಶಿಳ್ಳೆ ಹಾಕುತ್ತ ಸಂಭ್ರಮಿಸಿದರೆ, ಮತ್ತೆ ಕೆಲವರು ಪರಸ್ಪರ ಆಲಂಗಿಸಿಕೊಂಡು ಶುಭ ಕೋರಿದರು.

ಪುರುಷರಿಗಿಂತ ನಾವೇನೂ ಕಡಿಮೆಯಿಲ್ಲ ಎಂಬಂತೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರೂ ಕೂಡ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದರು.  ವಿಜಯಪುರ ನಗರದ ನಗರದ ಶಿವಾಜಿ ವೃತ್ತದಲ್ಲಿ ಜಮಾಯಿಸಿದ್ದ ಯುವಕರು ತಮಟೆ ಬಾರಿಸಿ, ಟಪ್ಪಾಂಗುಚ್ಚಿ ಹೆಜ್ಜೆ ಹಾಕಿದರು.  ಕೆಲವರು ಬೈಕ್‌ಗಳಲ್ಲಿ ಹಲಗೆ ಬಾರಿಸುತ್ತ, ಸಿಳ್ಳೆ ಹಾಕುತ್ತ, ಕೇಕೆ ಹೊಡೆಯುತ್ತ ನಗರ ಸುತ್ತಿದರು.  ಈ ವೇಳೆ ಯುವತಿಯರೂ ನಾವೇನು ಕಮ್ಮಿ ಎನ್ನುವಂತೆ ಗೆಳತಿಯರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿ ಖುಷಿ ಪಟ್ಟರು.

ಇನ್ನುಳಿದಂತೆ ವಿಜಯಪುರ ನಗರದ ನಾನಾ ಬಡಾವಣೆಗಳಲ್ಲಿಯೂ ಚಿಣ್ಣರಾದಿಯಾಗಿ ಹಿರಿಯರೂ ಕೂಡ ರಂಗಪಂಚಮಿ ರಂಗದಾಟದಲ್ಲಿ ತೊಡಗಿದ್ದರು.  ಇನ್ನುಳಿದಂತೆ ವಿವಿಧ ಬಡಾವಣೆಗಳಲ್ಲಿ ಮಹಿಳೆಯರೂ ಅಕ್ಕಪಕ್ಕದ ಮನೆಯವರಿಗೆ ಬಣ್ಣ ಹಚ್ಚುವ ಮೂಲಕ ಸಂಭ್ರಮಾಚರಿಸಿದರು.  ಬಿಜೆಪಿ ವತಿಯಿಂದ ಆಯೋಜಿಸಿದ್ದ ರಂಗಪಂಚಮಿ ಕಾರ್ಯಕ್ರಮದಲ್ಲಿ ಮುಖಂಡರಾದ ರಾಜು‌ ಮಗಿಮಠ, ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ, ಪ್ರಕಾಶ ಅಕ್ಕಲಕೋಟ, ಭೀಮಾಶಂಕರ ಹದನೂರ, ರಾಜು ಬಿರಾದಾರ, ಡಾ. ಸುರೇಶ ಬಿರಾದಾರ, ವಿಜಯ ಜೋಶಿ, ರಾಜೇಶ ತಾವಸೆ, ರಾಜೇಂದ್ರ ವಾಲಿ, ಶಿಲ್ಪಾ ಕುದರಗೊಂಡ ಸೇರಿದಂತೆ ಹಲವಾರು ಜನ ಮುಖಂಡರು ಪಾಲ್ಗೋಂಡರು.  ಅಲ್ಲದೇ, ಡಿಜೆ ಶಬ್ದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಹೋಳಿ ಹುಣ್ಣಿಮೆ ಭಾರತೀಯರ ಪಾಲಿಗೆ ಪವಿತ್ರ ಹಬ್ಬ.  ದುಃಖ, ದುಮ್ಮಾನಗಳನ್ನು ಮರೆತು ಹೊಸ ವರ್ಷ ಯುಗಾದಿಯನ್ನು ಬಣ್ಣದಾಟದಲ್ಲಿ ತೊಡಗುವ ಮೂಲಕ ಭಾರತೀಯರ ಹೊಸ ವರ್ಷ ಯುಗಾದಿಯನ್ನು ಸ್ವಾಗತಿಸುವ ಹಬ್ಬವೂ ಆಗಿದೆ.  ಈ ಹಬ್ಬವನ್ನು ಈ ಬಾರಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಜೊತೆಗೂಡಿ ಸಂಭ್ರಮದಿಂದ ಆಚರಿಸುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ ಎಂದು ಬಿಜೆಪಿ ಮುಹಿಳಾ ಮೋರ್ಚಾ ಮುಖಂಡೆ ಶಿಲ್ಪಾ ಕುದರಗೊಂಡ ಸಂತಸ ವ್ಯಕ್ತಪಡಿಸಿದರು.

Leave a Reply

ಹೊಸ ಪೋಸ್ಟ್‌