ವಿಜ್ಞಾನದ ಹೊಸ ಆವಿಷ್ಕಾರಗಳು ಜ್ಞಾನ ಪ್ರಸಾರಕ್ಕೆ ಅನುಕೂಲ- ಪ್ರೊ. ಬಿ. ಜಿ. ಮೂಲಿಮನಿ.

ವಿಜಯಪುರ: ವಿಜ್ಞಾನ ಮತ್ತು ತಂತ್ರಜ್ಞಾನ+Science and Technology) ಕ್ಷೇತ್ರದಲ್ಲಿನ ಆವಿಷ್ಕಾರಗಳಿಂದ(Research) ಪ್ರತಿದಿನವೂ ವಿಜ್ಞಾನದಲ್ಲಿ ಹೊಸ ಹೊಸ ಪ್ರಯೋಗಗಳು(Experiments) ನಡೆಯುತ್ತಿವೆ. ಇದು ಜ್ಞಾನವನ್ನು ಪಸರಿಸಲು ಸಹಾಯಕವಾಗಿದೆ ಎಂದು ಕರ್ನಾಟಕ(Karnataka) ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ(Academy) ಸದಸ್ಯರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ+University) ನಿವೃತ್ತ ಕುಲಪತಿ ಪ್ರೊ. ಬಿ. ಜಿ. ಮೂಲಿಮನಿ ಹೇಳಿದ್ದಾರೆ.

ಪ್ರೊ. ಬಿ. ಜಿ. ಮೂಲಿಮನಿ

ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ(ವಿಜ್ಞಾನ ಪ್ರಸಾರ, ನವದೆಹಲಿ) ಸಹಯೋಗದಲ್ಲಿ ಆಯೋಜಿಸಿದ್ದ ವಿಜ್ಞಾನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಯುವಜನತೆಯಲ್ಲಿ ಜ್ಞಾನ ಬೆಳೆಯುತ್ತಿದೆ ಹೊರತು ಬುದ್ಧಿವಂತಿಕೆ ಬೆಳೆಯುತ್ತಿಲ್ಲ. ಜ್ಞಾನದ ಜೊತೆ ಬುದ್ಧಿವಂತಿಕೆಯನ್ನು ಬೆಳೆಸಿಕೊಂಡಾಗ ಮಾತ್ರ ಸಾಧಿಸಲು ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.

ಪ್ರಪಂಚದಾದ್ಯಂತ ವಿಜ್ಞಾನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮದ ಮೂಲಕ ಪ್ರತಿಬಿಂಬಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಜನಸಾಮಾನ್ಯರನ್ನು ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಭಾಗದ ಜನರನ್ನು ತಲುಪಲು ಇದು ಸಹಕಾರಿಯಾಗಿದೆ ಎಂದು ಅವರು ಪ್ರೊ. ಬಿ. ಜಿ. ಮೂಲಿಮನಿ‌ ಹೇಳಿದರು.

ಡಾ. ಟಿ. ವಿ. ವೆಂಕಟೇಶ್ವರನ್

ಹಿರಿಯ ವಿಜ್ಞಾನಿ ಹಾಗೂ ನವದೆಹಲಿಯ ವಿಜ್ಞಾನ ಪ್ರಸಾರದ ವಿಜ್ಞಾನ ಸಂವಹನ ವಿಭಾಗದ ಮುಖ್ಯಸ್ಥ ಡಾ. ಟಿ. ವಿ. ವೆಂಕಟೇಶ್ವರನ್ ಮಾತನಾಡಿ, ಭಾರತ ಸಂವಿಧಾನದ 51 ಎಎಚ್ ಪ್ರಕಾರ ಪ್ರತಿ ನಾಗರಿಕರು ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಪರಿಶೀಲನೆ ಗುಣ ಹೊಂದಿರಬೇಕು ಎಂದು ತಿಳಿಸಿದೆ. ಸಾರ್ವಜನಿಕ ಸ್ಥಳದಲ್ಲಿನ ಸೂಕ್ತ ನಡುವಳಿಕೆಯನ್ನು ವಿಜ್ಞಾನ ನಿರ್ಧರಿಸುತ್ತದೆ ಎಂದು ತಿಳಿಸಿದರು.

ಯಾವುದೇ ವಿಷಯವನ್ನಾಗಲಿ ಮೊದಲು ವಿಚಾರಣೆ ನಡೆಸಿ ನಂತರ ಅದನ್ನು ಪರಿಶೀಲಿಸಿದ ಬಳಿಕ ಒಪ್ಪಿಕೊಳ್ಳಬೇಕು. ವಿಜ್ಞಾನವು ಮಾನವತಾವಾದದ ಆಧಾರವಾಗಿರಬೇಕು. ಆಗ ಮಾತ್ರ ವಿಜ್ಞಾನದ ಜೊತೆಗೆ ಮಾನವೀಯತೆಯನ್ನು ಬೆಳೆಸಲು ಸಾಧ್ಯ ಎಂದು ಹೇಳಿದರು.

ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವ ಎಂ. ಎನ್. ಚೋರಗಸ್ತಿ, ಮಾಧ್ಯಮಗಳು ನಮ್ಮ ದಿನನಿತ್ಯ ಜೀವನದ ಭಾಗವಾಗಿ ಹೋಗಿವೆ. ಪತ್ರಿಕೋದ್ಯಮದಲ್ಲಿ ಹೊಸ ಹೊಸ ವಿಷಯಗಳ ಬಗ್ಗೆ ಬಿಂಬಿಸಿದಾಗ ಮಾತ್ರ ಅದು ಓದುಗರನ್ನು, ಕೇಳುಗರನ್ನು ಹಾಗೂ ವೀಕ್ಷಕರನ್ನು ತನ್ನತ್ತ ಸೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನದ ಕುರಿತ ಬರವಣಿಗೆಗಳು ಜಗತ್ತಿಗೆ ಬೆಳಕು ನೀಡುತ್ತವೆ ಎಂದು ಹೇಳಿದರು.

ಜಗತ್ತು ವೇಗವಾಗಿ ಬೆಳೆಯಲು ವಿಜ್ಞಾನ ಮತ್ತು ತಂತ್ರಜ್ಞಾನ ಕಾರಣವಾಗುತ್ತವೆ. ಆದ್ದರಿಂದ ವಿಜ್ಞಾನ ಮತ್ತು ಆವಿಷ್ಕಾರಗಳ ಕುರಿತ ವಿಷಯಗಳನ್ನು ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.

ಮೈಸೂರಿನ ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಹಾಗೂ ಕುತೂಹಲಿ ನಿಯತಕಾಲಿಕೆಯ ಸಂಪಾದಕ ಎ. ಎಸ್.‌ ಕೆ. ವಿ. ಶರ್ಮಾ ಹಾಗೂ ತಾಂತ್ರಿಕ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ, ಈ-ಜ್ಞಾನ ವೆಬ್ ನಿಯತಕಾಲಿಕೆಯ ಸಂಪಾದಕ ಟಿ. ಜಿ. ಶ್ರೀನಿಧಿ ಮತನಾಡಿದರು.

ಈಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ನಾನಾ ವಿಭಾಗಗಳ ಸಂಶೋಧನೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರಗೌಡ ಕಾಕಡೆ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿ ದೀಪಾ ತಟ್ಟಿಮನಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನಾ ಕೋಲಾರ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಸಂದೀಪ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌