ಡಾ. ಬಾಬು ಜಗಜೀವನರಾಮ ಅವರ ಬದುಕು, ಸಾಧನೆ ನಮ್ಮೆಲ್ಲರ ಬಾಳಿಗೆ ಬೆಳಕು- ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ಹಸಿರು(Green) ಕ್ರಾಂತಿಯ(Revolutioner) ಹರಿಕಾರ ಎಂದೇ ಖ್ಯಾತರಾಗಿದ್ದ ದಲಿತರ ಆಶಾಕಿರಣ ಡಾ. ಬಾಬು ಜಗಜೀವನರಾಮ(Dr. Babu Jagajivanaram) ಅವರ ಬದುಕು(Life) ಹಾಗೂ ಸಾಧನೆ(Achievement) ನಮ್ಮೆಲ್ಲರ ಬಾಳಿಗೆ ಬೆಳಕಿನಂತಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಹೇಳಿದ್ದಾರೆ. 

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ ಅವರ 115 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರದಲ್ಲಿ ಡಾ. ಬಾಬು ಜಗಜೀವನರಾಮ ಅವರ 115ನೇ ಜಯಂತಿಯನ್ನು ಆಚರಿಸಲಾಯಿತು

ದಲಿತರ ಬದುಕಿಗೆ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಂತೆ ಡಾ. ಬಾಬು ಜಗಜೀವನರಾಮ ಅವರ ಕೊಡುಗೆಯೂ ಅಪಾರವಾಗಿದೆ.  ಅಂದು ಅವರು ಕಂಡ ಕನಸು ಇಂದಿಗೂ ನನಸಾಗಿಲ್ಲ.  ಅಲ್ಲಲ್ಲಿ ಇಂದಿಗೂ ಅಸ್ಪೃಶ್ಯತೆ ತಾಂಡವವಾಡುತ್ತಿದೆ.  ಈ ಅರ್ಥದಲ್ಲಿ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ದಲಿತರ ಬದುಕು ಹಸನಾಗಲು ಶಿಕ್ಷಣ ಒಂದೇ ಮಾರ್ಗವಾಗಿದೆ.  ಪ್ರತಿಯೊಬ್ಬರೂ ಶಿಕ್ಷಣವಂತರಾಗುವುದು ಬಹಳ ಅವಶ್ಯಕವಾಗಿದೆ.  ಶಿಕ್ಷಣದ ಮೂಲಕ ನಾವು ನಮ್ಮ ಬದುಕು ಕಟ್ಟಿಕೊಳ್ಳಬೇಕು.  ಎಲ್ಲರೂ ಶಿಕ್ಷಣವಂತರಾಗಬೇಕು ಎಂದು ಡಾ. ದೇವಾನಂದ ಚವ್ಹಾಣ ಹೇಳಿದರು.

ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮಾತನಾಡಿ, ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಡಾ. ಬಾಬು ಜಗಜೀವನರಾಮ ಅವರಂಥ ಮಹಾನುಭಾವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಅದರ ವಿರುದ್ಧ ಹೋರಾಡಿದ್ದಾರೆ.  ಸಮಾನತೆಗಾಗಿ ಹಗಲಿರುಳೆನ್ನದೇ ಶ್ರಮಿಸಿದ್ದಾರೆ ಎಂದು ಹೇಳಿದರು.

ದಲಿತರ ಸರ್ವ ಸ್ವತಂತ್ರಕ್ಕೆ ಹಾಗೂ ಪ್ರಗತಿಗೆ ಶಿಕ್ಷಣ ಒಂದೇ ಸೂತ್ರವಾಗಿದ್ದು, ಆದ್ದರಿಂದ ಪ್ರತಿಯೊಬ್ಬರೂ ಸುಶಿಕ್ಷಿತರಾಗುವುದರ ಜೊತೆಗೆ ಇತರರೂ ಶಿಕ್ಷಿತರಾಗುವಂತೆ ಪ್ರೇರೇಪಿಸಬೇಕು.   ದಲಿತರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿಸಿ, ಅವರು ಸಮಾಜದ ಆಸ್ತಿಯಾಗುವಂತೆ, ದೇಶಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವಂತೆ ಮಕ್ಕಳ ಬದುಕು ರೂಪಿಸಬೇಕು ಎಂದು ಅವರು ಪಿ. ಸುನೀಲಕುಮಾರ ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಮಹಿಳಾ ವಿವಿಯ  ಲಕ್ಷ್ಮೀದೇವಿ ಅಲಕೋಡ, ಡಾ. ಬಾಬು ಜಗಜೀವನರಾಮ ಅವರ ಮಾರ್ಗದಲ್ಲಿ ನಡೆದಾಗ ಮಾತ್ರ ಅವರು ಜಯಂತಿಗೆ ನಿಜವಾದ ಅರ್ಥ ಬರುತ್ತದೆ.  ಅವರ ಜೀವನ ಎಲ್ಲರಿಗೂ ಆದರ್ಶವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲೂ ಅಳವಡಿಕೊಳ್ಳಬೇಕು ಎಂದು ಹೇಳಿದರು.

ದೇಶದಲ್ಲಿ ಅಸ್ಪೃಶ್ಯತೆಯ ನಿವಾರಣೆ ಹಾಗೂ ಅಸ್ಪೃಶ್ಯರ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಡಾ. ಬಿ. ಆರ್. ಅಂಬೇಡ್ಕರ್ ಅವರಂತೆ ಡಾ. ಬಾಬು ಜಗಜೀವನರಾಮ ಅವರ ಕೊಡುಗೆಯೂ ಅಪಾರವಾಗಿದೆ.  ಡಾ. ಬಾಬು ಜಗಜೀವನರಾಮ ಅವರ ಮೇಲೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಭಾವ ಇರುವುದನ್ನು ನಾವು ಕಾಣಬಹುದಾಗಿದೆ.  ಡಾ. ಬಾಬು ಜಗಜೀವನರಾಮ ಅವರ ಹೋರಾಟ ಹಾಗೂ ಸಂಘಟನಾತ್ಮಕ ಮನೋಭಾವದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಅವರ ಪ್ರಭಾವ ಎದ್ದು ಕಾಣುತ್ತದೆ.  ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದಲ್ಲಿ ದಲಿತರಿಗೆ ಉದ್ಯೋಗದ ಹಕ್ಕಿನ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಪರಿಶಿಷ್ಟ ಜಾತಿಯ ಪ್ರಗತಿ ಪರ ರೈತ ಸುಭಾಸ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.  ಅಲ್ಲದೇ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ತಲಾ ಮೂರು ಜನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿ, ಪಂ. ಸಿಇಒ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿ. ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಡಿಎಸ್‌ಎಸ್‌ ಮುಖಂಡರಾದ ಅಡಿವೆಪ್ಪ ಸಾಲಗಲ, ಅಭಿಷೇಕ ಚಕ್ರವರ್ತಿ, ಸಿದ್ಧು ರಾಯಣ್ಣವನರ, ಭೀಮರಾಯ ಜಿಗಜಿಣಗಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌