Uppper Krishna Project: ಎರಡ್ಮೂರು ತಿಂಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ತೀರ್ಪು ಬರಲಿದೆ- ನಂತರ ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಿಸುತ್ತೇವೆ- ಸಿಎಂ ಬಸವರಾಜ ಬೊಮ್ಮಾಯಿ

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ(Upper Krishan Project) ಮೂರನೇ ಹಂತದ(Stage Three) ಕಾಮಗಾರಿಗಳ(Works) ಅನುಷ್ಠಾನಕ್ಕೆ(Implementation) ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಬಳಿ ಹೆಚ್ಚಿಸಲಿದ್ದ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆ ಪೈಪ್ ವಿತರಣೆ ಜಾಲ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೊಡಗಾನೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರೈತರು, ಮುಖಂಡರು ಬೆಳ್ಳಿಗದೆ ನೀಡಿ ಗೌರವಿಸಿದರು

ರಾಜ್ಯ ಸರಕಾರ ಯುಕೆಪಿ ಹಂತ‌-3 ರ ಅನುಷ್ಟಾನಕ್ಕೆ ಬದ್ದವಾಗಿದೆ.  ಯುಕೆಪಿ ಹಂತ 3 ಪೂರ್ಣಗೊಳಿಸಲು ಈಗ ಕಾಲ ಕೂಡಿ ಬಂದಿದೆ.  ಅದಕ್ಕಾಗಿ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ.  ಮುಂಬರುವ ಎರಡು ಅಥವಾ ಮೂರು ತಿಂಗಳಲ್ಲಿ ಆದೇಶ ಬರಲಿದೆ ಎಂದು ಅವರು ತಿಳಿಸಿದರು.

ನಮ್ಮ‌ ರಾಜ್ಯದ ಪಾಲಿನ 130 ಟಿಎಂಸಿ ನೀರು ಸಿಗಲಿದೆ‌.  ಆದೇಶದ ನಂತರ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಲಾಗುವುದು.  ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಸುಮಾರು ರೂ. 30 ಸಾವಿರ ಕೋ. ಹಣದ ಅವಶ್ಯಕತೆ ಇದೆ.  ಆದೇಶ ಬಂದ ತಕ್ಷಣ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಒದಗಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಈ ಮುಂಚೆ ಇದೇ ಯೋಜನೆ ಸಂಬಂದ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣಾ ಅವರು ನ್ಯಾಯಲಯಕ್ಕೆ ಹೋಗಿ ಕ್ಷಮೆ ಕೇಳಿದ್ದರು ಎಂಬುದನ್ನು ಕೆಲವರು ನನಗೆ ಹೇಳಿದ್ದರು.  ಆದರೆ, ಇದು ರಾಜ್ಯದ ರೈತರ ವಿಷಯ.  ನಾನು ಕ್ಷಮೆ ಅಲ್ಲ, ಗಲ್ಲಿಗೇರಿಸಿದರೂ ಅದಕ್ಕೆ ಸಿದ್ದ ಎಂದಿದ್ದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿಗಾಗಿ ಎಷ್ಟೇ ಹಣ ಖರ್ಚಾದರೂ ಅದನ್ನು ಪೂರ್ಣಗೊಳಿಸಲು ಬದ್ಧನಾಗಿದ್ದೇನೆ ಎಂದು ವೇದಿಕೆಯಲ್ಲಿಯೇ ಘೋಷಿಸಿದ ಮುಖ್ಯಮಂತ್ರಿಗಳು, ಯಾರು ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುದು ಮುಖ್ಯ ಅಲ್ಲ.  ನಮಗೆ ರೈತರು ಮುಖ್ಯ.  ರೈತರು ಯಾವುದೇ ಪಕ್ಷಕ್ಕೆ ಸೇರಿಲ್ಲ.  ಎಲ್ಲ ಪಕ್ಷಗಳೂ ರೈತರಿಗೆ ಸೇರಿದ್ದು ಎಂದ ಹೇಳಿದರು.

ಇದನ್ನು ಓದಿ:

CM Irrigation Project: ಬಸವ ನಾಡಿನಲ್ಲಿ ಸಿಎಂ ಗೆ ಜೋಡೆತ್ತು, ಹಸು ಕಾಣಿಕೆ ನೀಡಿದ ರೈತರು- ಸಿಎಂ ಏನು ಹೇಳಿದ್ರು ಗೊತ್ತಾ?

ನೀರಾವರಿ ವಿಚಾರದಲ್ಲಿ  ವಿಜಯಪುರ ಜಿಲ್ಲೆಯ ತ್ಯಾಗ ದೊಡ್ಡದು.  ನೀರಾವರಿಗೆ ಜಮೀನು ಕಳೆದುಕೊಂಡ ರೈತರಿಗೆ ಅನಂತ ಪ್ರಣಾಮಗಳು.  ರೈತರು ತ್ಯಾಗ ಮಾಡದೇ ಇದ್ದರೇ ಉತ್ತರ ಕರ್ನಾಟಕದಲ್ಲಿ ನೀರಾವರಿ ಸಾಧ್ಯವಿರಲಿಲ್ಲ.  ಅಜ್ಜ, ಮುತ್ತಜ್ಜನ ಕಾಲದಿಂದ ಉಳಿಸಿಕೊಂಡು ಬಂದ ಜಮೀನನ್ನು ಈ ಜಿಲ್ಲೆಯ ಜನ ತ್ಯಾಗ ಮಾಡಿದ್ದಾರೆ.  ಅವರ ತ್ಯಾಗ ದೊಡ್ಡದು ಎಂದು ಸಿಎಂ ಶ್ಲಾಘಿಸಿದರು.

ನಾನು ನೀರಾವರಿ ಸಚಿವನಾದ ಮೇಲೆ ನ್ಯಾಯಾಧೀಕರಣದಿಂದಾಗಿ ನನ್ನ ಕೈ ಕಟ್ಟಿ ಹಾಕಲಾಗಿತ್ತು   ಅದರೂ, ಗುತ್ತಿ ಬಸವಣ್ಣ, ಮುಳವಾಡ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದೇವೆ.   ಆಲಮಟ್ಟಿ ಅಣೆಕಟ್ಟು ಎತ್ತರಿಸಿದಾಗ ಈ ಎಲ್ಲ ನೀರಾವರಿ ಯೋಜನೆಗಳು ಮತ್ತಷ್ಟು ಯಶಸ್ವಿಯಾಗಲಿವೆ ಎಂದು ಹೇಳಿದರು.

ನನಗೆ ಭಗೀರಥ ಆಗುವ ಕನಸು, ಮನಸ್ಸು ಎರಡೂ ಇಲ್ಲ.  ಆದರೆ ನನ್ನ ರೈತರು ಎಂದಿಗೂ ನೀರಿಗೆ ಕೈಯೊಡ್ಡಬಾರದು.  ಈ ಭೂತಾಯಿಗೆ ಹಸಿರು ಉಡಿಸಬೇಕೆಂಬುದಷ್ಟೇ ನನ್ನ ಕನಸು,  ನಾವೆಲ್ಲ ನಿಮ್ಮ ಶಕ್ತಿ, ನಿಮ್ಮ ಬೆಂಬಲದಿಂದ ಆಯ್ಕೆಯಾದವರು.  ನಿಮ್ಮ ಬೇಡಿಕೆಗೆ ನ್ಯಾಯ ಕಲ್ಪಿಸುವುದು ನಮ್ಮ ಜವಾಬ್ದಾರಿ.  ಬೂದಿಹಾಳ- ಪೀರಾಪುರ ಯೋಜನೆಯ ಮೂಲಕ ರೂ. 50 ಸಾವಿರ ಎಕರೆಗೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ.  ಬೂದಿಹಾಳ ಪೀರಾಪೂರ ಏತ ನೀರಾವರಿಯನ್ನು ಕಾಲಮಿತಿಯಲ್ಲಿ‌ ಮುಗಿಸಿ ನೀರು ಕಲ್ಪಿಸಲಾಗುವುದು.  ಅಡ್ಡಿಗಲ್ಲು ಹಾಕಿದ ಮಾತ್ರಕ್ಕೆ‌ ನಮಗೆ ಸಮಾಧಾನ ಇಲ್ಲ.  ಯಾವಾಗ ರೈತರ ಜಮೀನಿಗೆ ನೀರು ಹರಿಯುವುದೋ ಆಗ ನಮಗೆ ಸಮಾಧಾನ.  ಅಲ್ಲಿಯವರೆಗೆ ವಿಶ್ರಮಿಸಲ್ಲ ಎಂದು ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಭಾಷಣದಲ್ಲಿ ತಿಳಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಗೋಮಾತೆಗೆ ಪೂಜೆ ಸಲ್ಲಿಸಿದರು.  ಅಲ್ಲದೇ, ಬಳಿಕ ಪೀರಾಪುರ- ಬೂದಿಹಾಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದರು.

Leave a Reply

ಹೊಸ ಪೋಸ್ಟ್‌