Govt Job@49: ಆತ್ಮೀಯ ರಾಜಕುಮಾರನನ್ನು ಪ್ರೀತಿಯಿಂದ ಸನ್ಮಾನಿಸಿ ಸಂತಸಪಟ್ಟ ಸ್ನೇಹಿತರು

ವಿಜಯಪುರ: ಇದು ವ್ಯಕ್ತಿಯಲ್ಲಿರುವ ಒಳ್ಳೆಯತನ, ಪರೋಪಕಾರಕ್ಕೆ ಹಿತೈಷಿಗಳ ಶುದ್ಧ ಮನಸ್ಸಿನ ಶುಭ ಹಾರೈಕೆಗಳು ಹಾಗೂ ತಾಯಿಯ ಶುಭಾಶಿರ್ವಾದಕ್ಕೆ ಸಿಕ್ಕ ತಕ್ಕ ಪ್ರತಿಫಲ.

ಸದಾ ಪರೋಪಕಾರದಲ್ಲಿ ಸಂತಸ ಕಾಣುತ್ತ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತಚಾಗಿ ಸ್ನೇಹಿತರ ಬಳಗವನ್ನು ಸಂಪಾದಿಸಿರುವ ವ್ಯಕ್ತಿಗೆ ದಶಕದ ನಂತರ ಸಿಕ್ಕ ಸರಕಾರಿ ಕೆಲಸದ ಸಂಭ್ರಮಾಚರಣೆ ಎಂದರೂ ತಪ್ಪಲ್ಲ.

ರಾಜಕುಮಾರ ಎಸ್. ಕುಮಾನಿ ಅವರನ್ನು ಸನ್ಮಾನಿಸಿ ಗೌರವಿಸಿದ ಗೆಳೆಯರು

ಇಂಥ ಅಪರೂಪದ ಮತ್ತು ಪ್ರೀತಿಯ ಚಿಕ್ಕದಾದ ಕಾರ್ಯಕ್ರಮ ಬಸವ ನಾಡು ವಿಜಯಪುರ ನಗರದ ಜಲನಗರದಲ್ಲಿರುವ ಶಿವಶರಣೆ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆಯಿತು. ಜಲನಗರ ಗೆಳೆಯರು ಆಯೋಜಿದ್ದ ಈ ವಿಶೇಷ ಕಾರ್ಯಕ್ರಮ ಗಮನ ಸೆಳೆಯುವಂತಿತ್ತು.
ಈ ಮುಂಚೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಸುಮಾರು ಒಂದು‌ ದಶಕಕ್ಕೂ ಹಿಂದೆ ಅಂದರೆ 2007 ರಲ್ಲಿ ಕೆ ಪಿ ಎಸ್ ಸಿ ಆಯೋಜಿಸಿದ್ದ ಕೆಇಎಸ್(ಕರ್ನಾಟಕ‌ ಎಂಜಿನಿಯರಿಂಗ್ ಸರ್ವಿಸ್) ಪರೀಕ್ಷೆ ಬರೆದು ಪಾಸಾಗಿದ್ದರು. ಆದರೆ, ಅಂದಿನ ಆಡಳಿತ ಕೈಗೊಂಡ ಒಂದು ನಿರ್ಧಾರ ಇವರ ಸರಕಾರಿ‌ ನೌಕರಿ ತಪ್ಪಿಸಿತ್ತು. ಅಂದಿನ ಸರಕಾರದ ನಿರ್ಧಾರದ ವಿರುದ್ಧ ಮತ್ತು ನ್ಯಾಯ ಒದಗಿಸಲು ಆಗ್ರಹಿಸಿ ರಾಜಕುಮಾರ ಕುಮಾನಿ ಸೇರಿ ಪರೀಕ್ಷೆ ಪಾಸಾಗಿದ್ದ ಐದು ಜನ ಅಭ್ಯರ್ಥಿಗಳು ರಾಜ್ಯ ಹೈಕೋರ್ಟಿನ ಮೊರೆ ಹೋಗಿದ್ದರು. 2021ರಲ್ಲಿ ಈ ಪ್ರಕರಣ ಇತ್ಯರ್ಥ ಪಡಿಸಿದ ನ್ಯಾಯಾಲಯ ಐದೂ ಜನರಿಗೆ ಸರಕಾರಿ ನೌಕರಿ ನೀಡುವಂತೆ ಆದೇಶ ಮಾಡಿತ್ತು.

ಇದೇ ತಿಂಗಳು ಜೂ. 1 ರಂದು ರಾಜಕುಮಾರ ಅವರ ತಾಯಿ ದಿ. ಪ್ರೇಮಾವತಿ ಸಿದ್ರಾಮಪ್ಪ ಕುಮಾನಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವಿತ್ತು. ಆ ದಿನ‌ ಕುಮಾನಿ‌ ಕುಟುಂಬದವರು ದಿ. ಪ್ರೇಮಾವತಿ ಸಿದ್ರಾಮಪ್ಪ ಕುಮಾನಿ ಅವರ ನೆನಪಿನಲ್ಲಿ ವಿಜಯಪುರ ತಾಲೂಕಿನ ಹೊನ್ನಳ್ಳಿಯಲ್ಲಿ ನಿರ್ಮಿಸಿದ ಅಮ್ಮನ ಮಂದಿರ ಉದ್ಘಾಟನೆಯಾಗಿತ್ತು. ಮೇ 31 ರಂದು ಸರಕಾರ ನೌಕರಿ ನೇಮಕಾತಿ ಆದೇಶ ನೀಡಿತ್ತು. ಜೂ. 1ರಂದು ತಾಯಿಯ ಸಂಸ್ನರಣೆ ದಿನವೇ ರಾಜಕುಮಾನ‌ ಸಿದ್ರಾಮಪ್ಪ ಕುಮಾನಿ ಅವರು ಬೆಂಗಳೂರಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದರು.

ರಾಜಕುಮಾರ ಎಸ್. ಕುಮಾನಿ ಅವರಿಗೆ ಈಗ 49 ವರ್ಷ. ಇಂಥ ಹಿರಿಯ ವಯಸ್ಸಿನಲ್ಲಿ ಸರಕಾರಿ ನೌಕರಿ ಅದರಲ್ಲೂ ಎಇಇ ಕೆಲಸ ಸಿಕ್ಕ ಹಿನ್ನೆಲೆಯಲ್ಲಿ ಜಲನಗರದ ಸ್ನೇಹಿತರು ಸ್ಮರಣೀಯ ಕಾರ್ಯಕ್ರಮ ಆಯೋಜಿಸಿ ಕುಮಾನಿ ಅವರ ಹಳೆಯ ಸ್ನೇಹಿತರನ್ನೂ ಆಹ್ವಾನಿಸಿದ್ದರು.

ಈ ಸಂದರ್ಭದಲ್ಲಿ ರಾಜಕುಮಾರ ಎಸ್. ಕುಮಾನಿ ಅವರನ್ನು ಆತ್ಮೀಯವಾಗಿ ಸನ್ನಾನಿಸಿದ ಗೆಳೆಯರು ತಮಗೇ ನೌಕರಿ ಸಿಕ್ಕಷ್ಟು ಸಂತೋಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ರು ಕುಮಾನಿ ಸಹಪಾಠಿ ಶ್ರೀಹರಿ ಗೊಳಸಂಗಿ ಸ್ನೇಹಿತ ರಾಜಕುಮಾರ ಅವರ ಗುಣಗಾನ ಮಾಡಿದರು. ತನ್ನೆದುರು ಕಷ್ಟ ಹೇಳಿಕೊಂಡು ಬರುವ ಜನರಿಗೆ ಯಾವುದೇ ಯೋಚನೆ ಮಾಡದೇ ತಮ್ಮ ಕಿಸೆಯಲ್ಲಿರುವ ಹಣ ನೀಡುವ ಹೃದಯ ಶ್ರೀಮಂತ ಗೆಳೆಯನ ಭವಿಷ್ಯ ಉಜ್ವಲವಾಗಿರಲಿ. ದೇವರು ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಹೇಳಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾರನಾಡಿದ ರಾಜಕುಮಾರ ಸಿದ್ರಾಮಪ್ಪ ಕುಮಾನಿ, ತಾವು ಈ ಹುದ್ದೆಗೇರಲು ಪೋಷಕರು ಮತ್ತು ಸ್ನೇಹಿತರ ಶುಭಾಶೀರ್ವಾದಗಳೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ರವಿ ಸಕ್ರಿ ಮತ್ತು ರವಿ ನಾಯಕ ಮಾತನಾಡಿದರು.

ವೇದಿಕೆಯಲ್ಲಿ ಸೋಮನಾಥ ಸೂಳಿಭಾವಿ, ರಾಜು ಗಣಿ, ಪುಟ್ಟು ಸಾವಳಗಿ ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ವಾರಣಾಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌