MLC Election: ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಡೆಯಿಂದ ಹಣ ಹಂಚಿಕೆ ಆರೋಪ- ಡಿಸಿ, ಎಸ್ಪಿಗೆ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ದೂರು ಸಲ್ಲಿಕೆ

ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಕಡೆಯವರಿಂದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಹತಾಶೆಯಲ್ಲಿ ಹಣ ಹಂಚುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ ಸದಸ್ಯ ಮತ್ತು ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದ ಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ ಮತ್ತು ವಿಜಯ ಜೋಶಿ ಅವರ ಜೊತೆ ತೆರಳಿ ಅರುಣ ಶಹಾಪುರ ದೂರು ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ನೀಡಿರುವ ದೂರಿನ ಪ್ರತಿ

ಇದಕ್ಕೂ ಮೊದಲು ವಿಜಯಪುರ ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅರುಣ ಶಹಾಪುರ, ವಿಜಯಪುರ ನಗರದಲ್ಲಿ ಮಹಾರಾಷ್ಟ್ರದ ಪಾಸಿಂಗ್ ಹೊಂದಿರುವ ವಾಹನದಲ್ಲಿ ಕೆಲವರು ತಲಾ ರೂ. 1000 ಮೌಲ್ಯದ ನೋಟುಗಳನ್ನು ಪಾಕೀಟಿನಲ್ಲಿ ಇಟ್ಟುಕೊಂಡು ಹೊರಟಿದ್ದಾಗ ಮಾಧ್ಯಮದವರ ಕೈಗೆ ಸಿಲುಕಿಕೊಂಡಿದ್ದಾರೆ.  ಆ ದೂರಿನ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಆ ವಾಹನವನ್ನು ಸೀಜ್ ಮಾಡಿದ್ದಾರೆ.  ಇನ್ನೂ ಆರೇಳು ವಾಹನಗಳು ವಿಜಯಪುರ ನಗರದಲ್ಲಿ ಮತ್ತು ಸುಮಾರು 14 ವಾಹನಗಳು ಜಿಲ್ಲೆಯಲ್ಲಿ ಈ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಈಗ ಪೊಲೀಸರು ಸೀಜ್ ಮಾಡಿರುವ ವಾಹನದಲ್ಲಿರುವ ವ್ಯಕ್ತಿಗಳು ಬಾಯಿ ಬಿಟ್ಟಿರುವ ಮಾಹಿತಿ ಇದೆ ಎಂದು ತಿಳಿಸಿದರು.

ಚುನಾವಣೆ ಆಯೋಗ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.  ಈಗ ಸೀಜ್ ಮಾಡಿರುವ ವಾಹನದಲ್ಲಿ ಏನೆಲ್ಲ ಸಿಕ್ಕಿವೆ ಎಂಬುದನ್ನು ಚುನಾವಣೆ ಆಯೋಗವೇ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ವೀಕ್ಷಕರಾದ ಮೌನಿಶ್ ಮುದ್ಗಲ್ ಮತ್ತು ಚುನಾವಣೆ ಆಧಿಕಾರಿಗಳು ಒಳ್ಳೆಯವರಿದ್ದಾರೆ.  ಚುನಾವಣೆ ಆಯೋಗ, ಕಾರ್ಯಾಂಗ, ಪೊಲೀಸ್ ಅಧಿಕಾರಿಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ.  ಸೂಕ್ತ ಕ್ರಮ ಕೈಗೊಂಡು ಇದನ್ನು ಮಟ್ಟ ಹಾಕುತ್ತಾರೆ ಎಂಬ ವಿಶ್ವಾಸವಿದೆ.  ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು.  ಅಲ್ಲದೇ, ಬೆಳಗಾವಿಯಲ್ಲಿ ಆರ್ ಓ ಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ

ಶಿಕ್ಷಕರ ಚಳವಳಿ ಪವಿತ್ರವಾಗಿದೆ.  ಎಲ್ಲ ವೃತ್ತಿಗಳನ್ನು ಬಿಟ್ಟು ಶಿಕ್ಷಕರಿಗಾಗಿಯೇ ವಿಧಾನ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.  ಆದರೆ, ತಾವು ಹಾಳಾಗುವುದಲ್ಲದೇ ಈ ಕ್ಷೇತ್ರವನ್ನೂ ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ.  ಶಿಕ್ಷಕರು ಜಾಗೃತರಾಗಿದ್ದಾರೆ.  ಇವರ ಬಂಡವಾಳವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇಂಥ ಕೃತ್ಯದಲ್ಲಿ ತೊಡಗಿರುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದರು.

ಲಂಗು ಲಂಗಾಮಿಲ್ಲದೇ ಹಣ ಹಂಚುವ ಕೆಲಸವನ್ನು ನಿಲ್ಲಿಸದಿದ್ದರೆ ಪ್ರಜಾತಂತ್ರದ ವ್ಯವಸ್ಥೆಗೆ ಮೋಸವಾಗುತ್ತದೆ.  ಅಧಿಕಾರಿಗಳು ಕ್ರಮ ಕೈಗೊಳ್ಳುವ ವಿಶ್ವಾಸವಿದೆ.  ಬಿಜೆಪಿಯ ಐದು ಸಂಘಟನಾತ್ಮಕ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಈ ಹಣ ಹಂಚುವ ಪ್ರಕ್ರಿಯೆಯನ್ನು ಯಾವುದೇ ಹೆದರಿಕೆಯಿಲ್ಲದೇ ಮುಂದಾಗಿ ನಿಲ್ಲಿಸಬೇಕು ಎಂದು ಕರೆ ನೀಡಿದರು.

ವಾಹನದಲ್ಲಿ ಹಣ ಮಾತ್ರ ಸಿಕ್ಕಿಲ್ಲ. ಹತಾಶೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಈ ರೀತಿ ಯಾವುದೇ ಲಂಗು ಲಗಾಮಿಲ್ಲದೇ, ಹೆದರಿಕೆ ಇಲ್ಲದೇ, ಸಂಕೋಚ ಇಲ್ಲದೇ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ.  ಶಿಕ್ಷಕರ ಕ್ಷೇತ್ರ ಪವಿತ್ರವಾಗಿದೆ.  ಹಣ ಹಂಚುವವರಿಗೆ ಮಾನ, ಮರ್ಯಾದೆ ಇದೆಯೋ ಇಲ್ಲವೋ ಗೋತ್ತಿಲ್ಲ.  ಆದರೆ, ಶಿಕ್ಷಕರು ತಾವು ರಾಷ್ಟ್ರ ನಿರ್ಮಾಪಕರು ಎಂಬುದನ್ನು ಅರಿತುಕೊಳ್ಳಬೇಕು.  ಯಾವ್ಯಾವ ವಾಹನದಲ್ಲಿ ಈ ರೀತಿ ಹಣ ಹಂಚಲಾಗುತ್ತಿದೆಯೋ ಅದನ್ನು ವಿಡಿಯೋ ರೆಕಾರ್ಡ್ ಮಾಡಬೇಕು.  ಶಿಕ್ಷಕರಿಗೆ ನೇರವಾಗಿ ಫೋನಾಯಿಸಿ ನಾವು ನಿಮ್ಮನ್ನು ಬಂದು ಭೇಟಿಯಾಗುತ್ತೇವೆ.  ಗುರುಕಾಣಿಕೆ ನೀಡುತ್ತೇವೆ ಎಂದು ನಾಚಿಕೆ ಇಲ್ಲದೇ ಹೇಳುವ ಕೆಲಸ ಮಾಡಿದ್ದಾರೆ.  ಆ ಎಲ್ಲ ಕರೆಗಳನ್ನು ಗುರುತಿಸಿ ಕರೆ ಮಾಡಲಾದ ನಂಬರ್ ಗಳನ್ನು ಚುನಾವಣೆ ಆಯೋಗಕ್ಕೆ ದೂರು ನೀಡಿ ಎಂದು ಶಿಕ್ಷಕರ ಸಕಮುದಾಯಕ್ಕೆ ಕರೆ ನೀಡುವುದಾಗಿ ಅರುಣ ಶಹಾಪುರ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌