Earthquake DC: ವಿಜಯಪುರ ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ: ಭಯಭೀತರಾಗದಂತೆ ಸಾರ್ವಜನಿಕರಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನವಿ

ವಿಜಯಪುರ: ಜಿಲ್ಲೆಯ ಕನ್ನೂರ ಸೇರಿದಂತೆ ನಾನಾ ಕಡೆ ಬೆಳಿಗ್ಗೆ ಸಂಭವಿಸಿದ 4.4 ತೀವ್ರತೆಯ ಲಘು ಭೂಕಂಪನ ಕುರಿತು ಖಚಿತ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಭಯಪಡಬಾರದು ಎಂದು ಜಿಲ್ಲಾಧಿಕಾರಿ  ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.

ಭೂಕಂಪನದ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರ ಬೆಂಗಳೂರಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಭೂಕಂಪನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪ್ರದೇಶದ ಗಡಿ ಪ್ರದೇಶದ ವಿವಿಧೆಡೆ ಈ ಲಘು ಭೂಕಂಪನ ಸಂಭವಿಸಿದೆ. ಜುಲೈ 9ರಂದು ಬೆಳಗಿನ 6.22ರ ಸುಮಾರಿನ ಅವಧಿಯಲ್ಲಿ ಕನ್ನೂರಿನ ಉತ್ತರ-ಪಶ್ಚಿಮ ಭಾಗದಲ್ಲಿ 10 ಕಿ.ಮೀ ಆಳದಲ್ಲಿ 4.4 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ. ಈ ಕಂಪನದ ತೀವ್ರತೆಯು ವಿಜಯಪುರ ತಾಲೂಕಿನ ಮಖಾನಪುರ ಗ್ರಾಮ ಪಂಚಾಯಿತಿಯ ಶಿರನಳ್ಳಿ ಗ್ರಾಮ ಉತ್ತರ ಭಾಗದಲ್ಲಿ, ತಿದಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೋಮನಾಳ ಗ್ರಾಮದ ಪಶ್ಚಿಮ ಉತ್ತರ ಭಾಗದಲ್ಲಿ, ವಿಜಯಪುರ ಸಿಟಿಯ ಉತ್ತರ ಭಾಗದಲ್ಲಿ, ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಗೋಚರಿಸಿದೆ. ಭೂಕಂಪನದ ಕೇಂದ್ರ ಬಿಂದುವಿನಿಂದ ಸುತ್ತಲಿನ 30 ರಿಂದ 40 ಕಿ.ಮೀ ವ್ಯಾಪ್ತಿಯಲ್ಲಿ ಸಹ ಭೂಮಿ ಕಂಪಿಸಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರ ಬೆಂಗಳೂರು ಇವರಿಂದ ಮಾಹಿತಿ ಲಭ್ಯವಾಗಿದೆ.

ಭೂಕಂಪನ ಹಿನ್ನೆಲೆಯಲ್ಲಿ ನಾನಾ ಗ್ರಾಮಗಳಿಗೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು

ಬೆಳಿಗ್ಗೆ ಭೂಕಂಪನದ ಅನುಭವ ಉಂಟಾಗಿ ಭಾರಿ ಸದ್ದು ಕೇಳಿ ಬಂದಿದೆ ಎಂದು ಜನರು ತಿಳಿಸುತ್ತಿದ್ದಾರೆ. ಭೂಕಂಪನ ಎಂದಾಕ್ಷಣ ಜನರು ಸಹಜವಾಗಿ ಭಯಭೀತರಾಗುತ್ತಾರೆ. ಆದರೆ, ಭೂಕಂಪನವು ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯಲ್ಲಿ ದಾಖಲಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕಪಡಬಾರದು ಎಂದು ಜಿಲ್ಲೆಯ ಜನರಲ್ಲಿ ಜಿಲ್ಲಾಧಿಕಾರಿಗಳು ಧೈರ್ಯ ತುಂಬಿದ್ದಾರೆ. ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ ಅವರಿಗೆ ಭೂಕಂಪನದ ಬಗ್ಗೆ ಖಚಿತಪಡಿಸಿಕೊಂಡು, ಪರಿಶೀಲಿಸಿ ವರದಿ ನೀಡಲು ಸಹ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಳೆಯಿಂದ ಹಾನಿ ಇಲ್ಲ

ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಯಾವುದೇ ಹಾನಿ ಉಂಟಾಗಿಲ್ಲ  ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಅನುದಾನದ ಕೊರತೆಯಿಲ್ಲ. ಮಳೆ ಮತ್ತು ಪ್ರವಾಹದಿಂದ ಹಾನಿಯಾದಲ್ಲಿ ಪರಿಹಾರಕ್ಕೆ ತಕ್ಷಣಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

Earthquake 4.9 magnitude?: ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಮಹಾರಾಷ್ಟ್ರದಲ್ಲೂ ಅನುಭವ- ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ?

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿಗಳ ಸೂಚನೆಯಂತೆ, ಭೂಕಂಪನ ಸ್ಥಳಕ್ಕೆ ಇಂಡಿ ಸಹಾಯಕ ಆಯುಕ್ತರಾದ ರಾಮಚಂದ್ರ ಗಡಾದಿ ಮತ್ತು ಕನ್ನೂರ ಗ್ರಾಮಕ್ಕೆ ವಿಜಯಪುರ ತಹಸೀಲ್ದಾರ ಸಿದ್ದರಾಮ ಬೋಸಗಿ ಅವರು ಭೇಟಿ ನೀಡಿ ಮಾಹಿತಿ ಪಡೆದರು. ಭೂಕಂಪನ ಹಿನ್ನೆಲೆಯಲ್ಲಿ ಹಾನಿಯ ಬಗ್ಗೆ ವಿಚಾರಿಸಿದರು. ಭೂಕಂಪನದ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಬಾರದು ಎಂದು ಧೈರ್ಯ ತುಂಬಿದರು. ವಿಜಯಪುರ ತಹಸೀಲ್ದಾರರು ವಿಜಯಪುರ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಹಾನಿಯ ಬಗ್ಗೆ ವಿಚಾರಿಸಿದರು.

24 ಗಂಟೆಯಲ್ಲಿ 9.12 ಮಿ.ಮೀ ಮಳೆ: ಜುಲೈ 8ರ ಬೆಳಗ್ಗೆ 8ರಿಂದ ಜುಲೈ 9ರ ಬೆಳಗಿನ 8 ಗಂಟೆವರೆಗಿನ 24 ಗಂಟೆಯ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 9,12 ಮೀ ಮೀ ನಷ್ಟು ಮಳೆ ಸುರಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ರಾಕೇಶ ಜೈನಾಪುರೆ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬಬಲೇಶ್ವರ ತಾಲೂಕಿನಲ್ಲಿ 15.4ರಷ್ಟು, ಇಂಡಿ ತಾಲೂಕಿನಲ್ಲಿ 15.1ರಷ್ಟು ಮತ್ತು ನಿಡಗುಂದಿ ತಾಲೂಕಿನಲ್ಲಿ 10.9ರಷ್ಟು ಸುರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌