Swamiji Injured: ಇಳಕಲ್ ಬಳಿ ಬಸ್ ಅಪಘಾತ- ವನಶ್ರೀ ಸಂಸ್ಥಾನ ಮಠದ ಶ್ರೀಗಳಿಗೆ ಗಾಯ- ಆತಂಕ ಬೇಡ ಎಂದು ಸ್ವಾಮೀಜಿ ವಿಡಿಯೋ ಸಂದೇಶ

ವಿಜಯಪುರ: ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ವಿಜಯಪುರದ ವನಶ್ರೀ ಸಂಸ್ಥಾನ ಮಠದ ಶ್ರೀಗಳಿಗೆ ಪೆಟ್ಟಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. 

ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಬಳಿ ಇರುವ ವನಶ್ರೀ ಸಂಸ್ಥಾನ ಮಠದ ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರುಗಳು ವಿಜಯಪುರದಿಂದ ಹರಿಹರ ಪೀಠಕ್ಕೆ ತೆರಳುತ್ತಿದ್ದರು.  ಸೋಮವಾರ ರಾತ್ರಿ ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ವಿ ಆರ್ ಎಲ್ ಬಸ್ ಇಳಕಲ್ ಸಮೀಪ ಅಪಘಾತಕ್ಕೀಡಾಗಿದೆ.  ಈ ಅಪಘಾತದಲ್ಲಿ ಡಾ. ಜಯಬಸವ ಕುಮಾರ ಸ್ವಾಮೀಜಿಗಳಿಗೆ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಸ್ವಲ್ಪ ಪೆಟ್ಟಾಗಿದೆ.

ಅದೃಷ್ಟವಶಾತ್ ಶ್ರೀಗಳು ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.  ಈಗ ಶ್ರೀಗಳು ಚೇತರಿಸಿಕೊಂಡಿದ್ದು, ಭಕ್ತರಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀಗಳು ಮತ್ತು ಭಕ್ತರು ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.

ವನಶ್ರೀ ಸಂಸ್ಥಾನ ಮಠದ ಗುರುಗಾಣಿಗ ಪೀಠದ ಜಗದ್ಗುರು ಶ್ರೀ ಜಯಬಸವ ಕುಮಾರ ಸ್ವಾಮೀಜಿ

ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಶ್ರೀಗಳು ಅಲ್ಲಿಂದಲೇ ವಿಡಿಯೋ ಸಂದೇಶ ಕಳುಹಿಸಿದ್ದಾರೆ.  ಅಪಘಾತದಲ್ಲಿ ಕತ್ತು ಹಾಗೂ ಬೆನ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಚಿಕಿತ್ಸೆ ಪಡೆಯುತ್ತಿದ್ದೇನೆ.  ನಾಲ್ಕೈದು ದಿನಗಳಲ್ಲಿ ಗುಣಮುಖ ಆಗಲಿದ್ದೇನೆ.  ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ.  ಶೀಘ್ರ ಗುಣಮುಖನಾಗಿ ಭಕ್ತರ ಸೇವೆಗೆ ಶೀಘ್ರ ಮರಳಲಿದ್ದೇನೆ.  ಅಲ್ಲಿಯವರೆಗೂ ಎಲ್ಲ ಭಕ್ತರು ಸಹಕರಿಸಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಈ ಅಪಘಾತದಲ್ಲಿ ಗಾಯಗೊಂಡ ಸಹ ಪ್ರಯಾಣಿಕರು ಕೂಡ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಶ್ರೀಗಳು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಭಕ್ತರೊಬ್ಬರು ಕೂಡ ಶ್ರೀಗಳ ಜೊತೆಯಲ್ಲಿದ್ದು ಶ್ರೀಗಳ ಆರೋಗ್ಯದ ಬಗ್ಗೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

Leave a Reply

ಹೊಸ ಪೋಸ್ಟ್‌