Psychiatrist Ramadurg: ಪೋಷಕರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆಯಿದೆ- ಮನೋವೈದ್ಯ ಡಾ. ಸಂತೋಷ ರಾಮದುರ್ಗ

ವಿಜಯಪುರ: ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಲ್ಲಿ ಆಗುವ ಮಾನಸಿಕ ಬದಲಾವಣೆಗಳು ಸಹಜವಾಗಿ ಬೇರೆಯಾಗಿರುತ್ತವೆ. ಆದ್ದರಿಂದ ಮಹಿಳೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ. ಸಂತೋಷ ರಾಮದುರ್ಗ ಹೇಳಿದರು.

ವಿಜಯಪುರ ತಾಲೂಕಿನ ತೊರವಿ ಬಳಿ ಇರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಬಿ ಎಲ್ ಡಿ ಇ ಡೀಮ್ಡ್ ವಿವಿಯ ಮಾನಸಿಕ, ಸಾಮಾಜಿಕ ಆಪ್ತ ಸಮಾಲೋಚನೆ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಮಹಿಳೆ ಮತ್ತು ಮಾನಸಿಕ ಆರೋಗ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆ ಹತ್ತಿರ ಬಂದಾಗ ವಿದ್ಯಾರ್ಥಿಗಳಲ್ಲಿ ಹುಟ್ಟುವ ಭಯ ಧನಾತ್ಮಕವಾಗಿ ಇದ್ದಾಗ ಭಾರ ಎನಿಸುವುದಿಲ್ಲ. ಆರಂಭಿಕ ಹಂತದಿಂದ, ಕ್ರಮಬದ್ಧವಾಗಿ ಪೂರ್ವ ತಯಾರಿ ಮಾಡಿಕೊಂಡರೆ ಭಯ ಕಡಿಮೆಯಾಗುತ್ತದೆ. ಒಮ್ಮೆ ಓದಿದ ವಿಷಯ ಕಾಲು ಭಾಗ ಮಾತ್ರ ನೆನಪಿರುತ್ತದೆ. ಪೂರ್ಣವಾಗಿ ನೆನಪಿಡಲು ಪದೇ ಪದೇ ಮನನ ಮಾಡಿಕೊಳ್ಳಬೇಕು. ಓದಿದ್ದನ್ನು ಕಥೆ ರೂಪದಲ್ಲಿ ನೆನಪಿಟ್ಟುಕೊಳ್ಳುವುದು ಉತ್ತಮ. ಪರೀಕ್ಷೆ ಸಂದರ್ಭದಲ್ಲಿ ಊಟದ ಪದ್ಧತಿ, ನಿದ್ರೆ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ನಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯವನ್ನು ಅರಿತಿರಬೇಕು. ವಿಭಕ್ತ ಕುಟುಂಬದ ಮಕ್ಕಳಿಗೆ ಹೊಂದಾಣಿಕೆ ಕಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂಥ ಸಂದರ್ಭದಲ್ಲಿ ಆಪ್ತ ಸಮಾಲೋಚನೆಗೆ ಒಳಗಾಗುವುದು ಉತ್ತಮ ಎಂದು ಡಾ. ಸಂತೋಷ ರಾಮದುರ್ಗ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ ಎಲ್‌ ಡಿ ಇ ಡೀಮ್ಡ್ ವಿವಿ ಯ ಮನೋರೋಗ ವಿಭಾಗದ ಸ್ಥಾನಿಕ ವೈದ್ಯೆ ಡಾ. ಲಕ್ಷ್ಮಿದೇವಿ ಪಾಟೀಲ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೇ, ಖಿನ್ನತೆ, ಮುಟ್ಟಿನ ಸಮಯದಲ್ಲಿ ಆಗುವ ಸಮಸ್ಯೆಗಳು, ಮುಂಗೋಪವನ್ನು ನಿಯಂತ್ರಿಸುವ ಕ್ರಮಗಳ ಕುರಿತು ಚರ್ಚಿಸಿದರು.

ಈ ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿವಿ ಯ ಮಾನಸಿಕ, ಸಾಮಾಜಿಕ ಆಪ್ತ ಸಮಾಲೋಚನೆ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ಲಕ್ಷ್ಮಿ ತೆಲ್ಲೂರ, ಸಮಾಜ ವಿಜ್ಞಾನ ನಿಕಾಯದ ಡೀನ ಪ್ರೊ. ಡಿ. ಎಂ. ಮದರಿ, ವಿವಿಯ ನಾನಾ ನಿಕಾಯಗಳ ಡೀನರು, ನಾನಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಅಶ್ವಿನಿ ಕೆ. ಎನ್. ನಿರೂಪಿಸಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಬಿ.ಎಲ್.ಡಿ.ಇ (ಡಿ.ಯು) ಮಾನಸಿಕ, ಸಾಮಾಜಿಕ ಆಪ್ತ ಸಮಾಲೋಚನಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ‘ಮಹಿಳೆ ಮತ್ತು ಮಾನಸಿಕ ಆರೋಗ್ಯ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಮಾಜ ವಿಜ್ಞಾನ ನಿಕಾಯದ ಡೀನ ಪ್ರೊ. ಡಿ.ಎಂ. ಮದರಿ ಉದ್ಘಾಟಿಸಿದರು.

Leave a Reply

ಹೊಸ ಪೋಸ್ಟ್‌