Doctors Experience: ನೈಜ ಜೀವನದ ಅನುಭವದಿಂದ ಶ್ರೇಷ್ಠ ವೈದ್ಯರಾಗಲು ಸಾಧ್ಯ- ಡಾ. ಆರ್. ಎಸ್. ಮುಧೋಳ

ವಿಜಯಪುರ: ವೈದ್ಯರಾಗುವವರು ಕೇವಲ ಪುಸ್ತಕದಿಂದ ತಿಳಿದುಕೊಂಡರೆ ಸಾಲದು. ನೈಜ ಜೀವನದ ಅನುಭವದಿಂದ ಕಲಿತುಕೊಂಡರೆ ಶ್ರೇಷ್ಠ ವೈದ್ಯರಾಗಲು ಸಾಧ್ಯ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು.

ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ್ ವೈದ್ಯಕೀಯ ಆಸ್ಪತ್ರೆ, ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಿಂದ ವಿಜಯಪುರ ನಗರ ಹೊರ ವಲಯದಲ್ಲಿರುವ ರಂಭಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕುಟುಂಬ ದತ್ತು ಪಡೆಯುವ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

ಗ್ರಾಮೀಣ ಕುಟುಂಬದ ಸದಸ್ಯರನ್ನು ದತ್ತು ಪಡೆದು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಿದ್ಯಾರ್ಥಿಗಳಿಗೆ ಸೇರಿದೆ. ವೈದ್ಯಕೀಯ ಸೇವೆಯೊಂದಿಗೆ ಕುಟುಂಬದ ಆರೋಗ್ಯ ರಕ್ಷಣೆಯ ಕಾಳಜಿ ಇರುತ್ತದೆ. ವಿದ್ಯಾರ್ಥಿಗಳು ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಸ್ಥಿತಿಗಳನ್ನು ಕಲೆ ಹಾಕಿ, ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಗ್ರಾಮೀಣ ಪ್ರದೇಶದ ರೋಗಿಗಳಿಗೆ ಆರೋಗ್ಯದ ವಿಚಾರದಲ್ಲಿ ಬಿ ಎಲ್ ಡಿ ಇ ಆಸ್ಪತ್ರೆ ಸಂಪೂರ್ಣ ಸಹಕಾರಿವಿದೆ ಎಂದು ಅವರು ಭರವಸೆ ನೀಡಿದರು.

ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಎಂ. ಸಿ.‌ ಯಡವಣ್ಣವರ ಮಾತನಾಡಿ, ಈ ಕಾರ್ಯಕ್ರಮ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪ್ರಯತ್ನ. ಪುಸ್ತಕದಿಂದ ಕಲಿಯುವುದಕ್ಕಿಂತ ಸಮುದಾಯದ ಸ್ಥಿತಿಗತಿಗಳ ಮೇಲೆ ಹೇಗೆ ಆರೋಗ್ಯ ನಿರ್ಧಾರವಾಗುತ್ತದೆ. ಅದಕ್ಕಾಗಿ ವೈದ್ಯ ವಿದ್ಯಾರ್ಥಿಗಳು ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡಿ ಪ್ರಾಯೋಗಿಕವಾಗಿ ಅರ್ಥೈಸಿಕೊಂಡು ಸಮಾಜಮುಖಿ ವೈದ್ಯರಾಗಲು ಸಾಧ್ಯ ಎಂದು ಹೇಳಿದರು.

ಪ್ರತಿ ವಿದ್ಯಾರ್ಥಿಗೆ ಎರಡು ಕುಟುಂಬಗಳನ್ನು ದತ್ತು ಕೊಡಲಾಗುತ್ತದೆ. ಇಂದು 200 ವಿದ್ಯಾರ್ಥಿಗಳಿಗೆ 400 ಕುಟುಂಬಗಳನ್ನು ದತ್ತು ಕೊಡಲಾಗಿದೆ ಎಂದು ಡಾ. ಎಂ. ಸಿ. ಯಡವಣ್ಣವರ ಹೇಳಿದರು.

ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣೆ ಅಧಿಕಾರಿ ಡಾ. ಕವಿತಾ ದೊಡಮನಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿ. ಎ. ಹಿತ್ತನಹಳ್ಳಿ, ಗ್ರಾಮದ ಹಿರಿಯ ಮುಖಂಡ ಬಾಪುಗೌಡ ಪಾಟೀಲ, ಡಿ. ಎ.‌ ಪಾಟೀಲ, ಎ. ಜಿ. ಲಿಂಗದಳ್ಳಿ, ಯೋಗಾಪುರ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಡಾ. ಪೂಜಾ ತೊದಲಬಾಗಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌