Alamatti Arrest: ಮಹಿಳಾ ವೇ಼ಷ ಧರಿಸಿ ಅಲಮಟ್ಟಿ ಡ್ಯಾಂ‌ ಪ್ರವೇಶಿಸಲು ಯತ್ನಿಸಿದ ಯುವಕ ಪೊಲೀಸರ ವಶ

ವಿಜಯಪುರ: ಮಹಿಳೆಯರ ವೇಷ ಧರಿಸಿ ಆಲಮಟ್ಟಿ ಜಲಾಶಯ ಪ್ರವೇಶಿಸಲು ಯತ್ನಿಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ಬೆಳಗಿನ ಜಾವ ಬುರ್ಖಾ ಧರಿಸಿದ ಮಹಿಳೆ ಒಬ್ಬರು ಜಲಾಶಯದ ಆವರಣ ಪ್ರವೇಶಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ನಿರತರಾಗಿರುವ ಪೊಲೀಸರು ಇಷ್ಟು ಬೇಗ ಡ್ಯಾಂ ಒಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅವನನ್ನು ವಾಪಸ್ ಕಳುಹಿಸಿದ್ದರು.

ಪೊಲೀಸರ ವಶದಲ್ಲಿರುವ ಯುವಕ‌ ಕಿಶೋರ ಮಲ್ಲಿಕಾರ್ಜುನ ಸ್ವಾಮಿ

ಈ ಸಂದರ್ಭದಲ್ಲಿ ಮಹಿಳೆಯ ಧ್ವನಿಯನ್ನು ಕೇಳಿದ ಪೊಲೀಸರು ಇದು ಮಹಿಳೆಯ ದ್ವನಿಯಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು. ನಂತರ ಆ ಮಹಿಳೆ ಮೇಲೆ ನಿಗಾ ವಹಿಸಿದ್ದರು.

ಕೆಲ ಸಮಯದ ಬಳಿಕ ಆ ಬುರ್ಖಾದಾರಿ ಮಹಿಳೆ ಪಕ್ಕದಲ್ಲಿರುವ ಮುಳ್ಳು ಕಂಟಿಗಳ ಕಡೆಗೆ ಹೋಗಿದ್ದಳು. ‌ವಾಪಸ್ಸು ಬರುವಾಗ ಬುರ್ಖಾ ತೆಗೆದು ಆಚೆ ಬಂದಿದ್ದನ್ನು ಗಮನಿಸಿದ ಪೊಲೀಸರು ಬುರ್ಖಾ ಧರಿಸಿದ್ದು ಮಹಿಳೆ ಅಲ್ಲ. ಬುರ್ಖಾ ಧರಿಸಿ ಬಂದಿದ್ದು ಪುರುಷ ಎಂಬ ಸಂಶಯ ನಿಜವಾಗಿದೆ. ಆಗ ಕೂಡಲೇ ಆ ಯುವಕನನ್ನು ವಶಕ್ಕೆ ಪಡೆದ ಕೆ ಐ ಎಸ್ ಎಫ್ ಪೊಲೀಸರು ಹಿರಿಯ ಸಿಬ್ಬಂದಿಗಳ ಗಮನಕ್ಕೆ ಈ ವಿಷಯ ತಂದಿದ್ದಾರೆ. ನಂತರ ಕೆ ಐ ಎಸ್ ಎಫ್ ಪೊಲೀಸರು ಆ ಯುವಕನನ್ನು ಆಲಮಟ್ಟಿ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ.

ಹಾಸನ‌ ಜಿಲ್ಲೆಯ ಸಕಲೇಶಪುರದ ಯುವಕ

ಯುವಕನನ್ನು ವಶಕ್ಕೆ ಪಡೆದ ಆಲಮಟ್ಟಿ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಯುವಕ ತಾನು ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಕಿಶೋರ್ ಮಲ್ಲಿಕಾರ್ಜುನ ಸ್ವಾಮಿ ಎಂದು ಹೇಳಿಕೊಂಡಿದ್ದಾನೆ.

ಕಾರಣ ಕೇಳಿ ದಂಗಾದ ಪೊಲೀಸರು

ತನ್ನಲ್ಲಿ ಹೆಣ್ಣುತನ ಬೆಳೆಯುತ್ತಿದೆ. ಹೀಗಾಗಿ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿದ್ದೇನೆ‌. ತಾನು ಬೇಡ ಎಂದರೂ ತನ್ನ ಮನೆಯವರು ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒತ್ತಡ ಹೇಳುತ್ತಿದ್ದಾರೆ. ಆದ್ದರಿಂದ ಮನೆ ಬಿಟ್ಟು ಬಂದಿದ್ದಾಗಿ ಕಿಶೋರ್ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಸಧ್ಯಕ್ಕೆ ಬುರ್ಖಾ ಧರಿಸಿ‌ ಬಂದಿದ್ದ ಯುವಕ‌ ಆಲಮಟ್ಟಿ ಪೊಲೀಸರ ವಶದಲ್ಲಿದ್ದಾನೆ. ಆತನ ವಿಚಾರಣೆಯನ್ನು‌ ಪೊಲೀಸರು‌ ಮುಂದುವರೆಸಿದ್ದಾನೆ.

ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply

ಹೊಸ ಪೋಸ್ಟ್‌