Canal Water: ಆಲಮಟ್ಟಿ, ನಾರಾಯಾಪುರ ಜಲಾಷಯಗಳಿಂದ ಕಾಲುವೆಗಳಿಗೆ ನೀರು ಬಿಡುಗಡೆ- ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧಾರ

ವಿಜಯಪುರ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ತಕ್ಷಣದಿಂದಲೇ ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನಡೆದ ಕೆ ಬಿ ಜೆ ಎನ್ ಎಲ್ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈಗ ಲಭ್ಯವಿರುವ ನೀರಿನ ಲೆಕ್ಕಾಚಾರದ ಬಗ್ಗೆ ಚರ್ಚಿಸಿದ ಬಳಿಕ, ಮುಂಗಾರು ಹಂಗಾಮಿಗೆ ಈಗಿನಿಂದಲೇ ಅನ್ವಯವಾಗುವಂತೆ ಎರಡೂ ಜಲಾಷಯಗಳಿಂದ ಕಾಲಯವೆಗಳಿಗೆ ನೀರು ಹರಿಸಲು ಸಮಿತಿಯ ಅಧ್ಯಕ್ಷ ಮತ್ತು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರ ಸಮ್ಮುಖದಲ್ಲಿ ಹಾಗೂ ಕೃಷ್ಣಾ ಕೊಳ್ಳದ ಶಾಸಕರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಮುಂಗಾರು ಹಂಗಾಮಿಗೆ ಕೃಷ್ಣ ಮೇಲ್ದಂಡೆ ಯೋಜನೆಯಡಿ ಈಗ ನೀರಿನ ಲಭ್ಯತೆಯ ಬಗ್ಗೆ ಚರ್ಚೆ ನಡೆಯಿತು. ಆಲಮಟ್ಟಿ ಮತ್ತು ನಾರಾಯಣಪುರ ಎರಡೂ ಜಲಾಶಯಗಳಲ್ಲಿ 97.491 ಟಿಎಂಸಿ ನೀರು ಸಂಗ್ರಹವಿದೆ. ಮುಂಗಾರು ಹಂಗಾಮಿನ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರು ಅಗತ್ಯವಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ 13 ಟಿಎಂಸಿ ನೀರು ಬೇಕಾಗುತ್ತದೆ. ಎರಡೂ ಜಲಾಷಯಗಳು ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರಿ ಬೇಕಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹಣೆಯಾಗಿದೆ. ಮುಂಗಾರು ಹಂಗಾಮಿಗೆ ಅಗತ್ಯ ಇರುವ ನೀರಿನ ಪ್ರಮಾಣವು ಜಲಾಶಯದಲ್ಲಿ ಸಂಗ್ರಹಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತು ಮುಂಬರುವ ದಿನಗಳಲ್ಲಿ ಬರುವ ಒಳಹರಿವನ್ನು ಗಮನದಲ್ಲಿರಿಸಿಕೊಂಡು 2022-23 ರ ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲ, ಆಣಿಕಟ್ಟು ಹಾಗೂ ಮುಖ್ಯ ಸ್ಥಾವರಗಳ ಕ್ಲೋಜರ್ ಅವಧಿಯ ಕಾಮಗಾರಿಗಳ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಮುಂಗಾರು ಹಂಗಾಮಿಗೆ ನೀರು ಪೂರೈಸಬಹುದಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಸಭೆಗೆ ತಿಳಿಸಿದರು.

ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು, ಅಧಿಕಾರಿಗಳು

ನಮ್ಮ. ನಮ್ಮ ಕ್ಷೇತ್ರಗಳಲ್ಲಿ ಜೀವ ಜಲದ ಅಭಾವವಿದೆ. ರೈತರು ನೀರು ಕೇಳುತ್ತಿದ್ದಾರೆ. ಕಾಲುವೆಗಳಿಗೆ ಈ ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿದ್ದ ಶಾಸಕರಾದ ಅಮರೇಗೌಡ ಬಯ್ಯಾಪುರ, ರಮೇಶ ಭೂಸನೂರ, ಶಿವನಗೌಡ ನಾಯಕ, ರಾಜುಗೌಡ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ ಮತ್ತು ಇತರರು ಸಭೆಗೆ ಮನವರಿಕೆ ಮಾಡಿದರು.

ಈ ಸಭೆಯಲ್ಲಿದ್ದ ಹಾಜರಿದ್ದ ನೀರಾವರಿ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚಿಸಿದ ಬಳಿಕ,
ಎಲ್ಲ ಶಾಸಕರ ಒಮ್ಮತದ ಅಭಿಪ್ರಾಯ ಆಧರಿಸಿ,
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಒಳಹರಿವು ಇರುವವರೆಗೆ ಮಳೆಯನ್ನು ಆಧಾರಿಸಿ, ಸತತವಾಗಿ ಹಾಗೂ ಒಳಹರಿವು ಸ್ಥಗಿತವಾದ ನಂತರ 14 ದಿನ ಚಾಲೂ ಹಾಗೂ 8 ದಿನ ಬಂದ ಪದ್ಧತಿ ಅನುಸರಿಸಿ ಈಗಿನಿಂದಲೇ ಮುಂಗಾರು ಹಂಗಾಮಿಗೆ ಜಲಾಶಯಗಳಿಂದ ನೀರು ಪೂರೈಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.  ಮುಂಗಾರು ಮುಗಿದ ಕೂಡಲೇ ಕ್ಲೋಸರ್ ವರ್ಕ ಪೂರ್ಣಗೊಳಿಸಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ರೈತ ಬಾಂಧವರಲ್ಲಿ ಮನವಿ

ಸಮಸ್ತ ಅಚ್ಚುಕಟ್ಟು ರೈತ ಬಾಂಧವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ನೀರು ಪೋಲಾಗದಂತೆ ಹಿತಮಿತ ಬಳಸಲು ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳೊಂದಿಗೆ ಸಹಭಾಗಿತ್ವ ನೀಡಲು ಇದೆ ವೇಳೆ ಸಚಿವರಾದ ಸಿ. ಸಿ.‌ ಪಾಟೀಲ ರೈತ ಬಾಂಧವರಲ್ಲಿ ಮನವಿ ಮಾಡಿದರು.

ನವೆಂಬರ್ ಅತ್ಯಂಕ್ಕೆ ಸಭೆ

ನವೆಂಬರ್ 2022ರಲ್ಲಿ ಎರಡೂ ಜಲಾಶಯಗಳ ಸಂಗ್ರಹಣೆಯನ್ನು ಗಮನದಲ್ಲಿರಿಸಿಕೊಂಡು 2022-23ನೇ ವರ್ಷದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಈ ಸಭೆಯಲ್ಲಿ ತೀರ್ಮಾನ‌ ಕೈಗೊಳ್ಳಲಾಯಿತು.

ಈ‌ ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಎ. ಎಸ್. ಪಾಟೀಲ ನಡಹಳ್ಳಿ, ಬಸನಗೌಡ ದದ್ದಲ, ಡಿ.‌ ಎಸ್. ಹೂಲಗೇರಿ, ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಕೆ ಬಿ ಜೆ ಎನ್ ಎಲ್ ಮುಖ್ಯ ಎಂಜಿನಿಯರ್ ಎಚ್.‌ ಸುರೇಶ, ಅಧೀಕ್ಷಕ ಎಂಜಿನಿಯರ್ ಬಿ
‌ಬಸವರಾಜ, ಆಟೆಕಟ್ಟು ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಮೋಹನ ಆರ್. ಹಲಗತ್ತಿ ಸೇರಿದಂತೆ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌