Journalists Tagadur: ಕಾರ್ಯ ಮರೆತವರು ಪತ್ರಕರ್ತರ ಸಂಘಕ್ಕೆ ಬೇಕಾಗಿಲ್ಲಃ- ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯ ಮರೆತವರು ಬೇಕಾಗಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸ್ಪಷ್ಟಪಡಿಸಿದ್ದಾರೆ. 

ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಹೆಸರೇ ಸೂಚಿಸಿದಂತೆ ಸಂಘದಲ್ಲಿ ಕಾರ್ಯನಿರತರಿಗೆ ಅವಕಾಶವಿದೆ.  ಕಾರ್ಯ ಮರೆತವರು ನಮಗೆ ಬೇಕಾಗಿಲ್ಲ.  ಅಂಥವರ ಅವಶ್ಯಕತೆಯೂ ನಮಗಿಲ್ಲ ಎಂದು ಖಾರವಾಗಿ ಹೇಳಿದರು.

ಕಾರ್ಯನಿರತ ಯಾವ ಪತ್ರಕರ್ತರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.  ಸಂಘದ ಸದಸ್ಯತ್ವದ ಕಾರ್ಡ ಬಯಸುವವರು ತಾವು ನಿಜವಾಗಿಯೂ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.  ಸರಕಾರ ರೇಷನ್ ಕಾರ್ಡ ವಿತರಿಸಿದಂತೆ ಎಲ್ಲರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡಲು ಸಾಧ್ಯವಿಲ್ಲ.  ಕ್ರಿಯಾಶೀಲವಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಮಾತ್ರ ಸಂಘದ ಗುರುತಿನ ಚೀಟಿ(ಐಡಿ ಕಾರ್ಡ) ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾ ದಿಗ್ಗಜರಾದ ಡಿವಿಜಿ ಹುಟ್ಟು ಹಾಕಿದ ಹಾಗೂ ಎಚ್. ಎಸ್. ದೊರೆಸ್ವಾಮಿ, ಜಯಶೀಲರಾವ ಅವರಂಥ ಅನೇಕ ಮಹನೀಯರು ಮುನ್ನಡೆಸಿಕೊಂಡು ಬಂದ ಸಂಘಟನೆ ಇದಾಗಿದೆ.  ಇದು ಇಂದು ನಿನ್ನೆ ಹುಟ್ಟಿಕೊಂಡಂಥ ಸಂಘಟನೆಯಲ್ಲ.  ಈ ಸಂಘಟನೆಗೆ ಅದರದೇ ಆದ ಒಳ್ಳೆಯ ಹಿನ್ನೆಲೆ ಮತ್ತು ಇತಿಹಾಸವಿದೆ.  ಸಂಘದ ಸದಸ್ಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂಥ ಒಂದು ಬಲಿಷ್ಠ ಹಾಗೂ ಕ್ರಿಯಾಶೀಲ ಪತ್ರಕರ್ತರ ಸಂಘಟನೆ ಇದಾಗಿದೆ.  ಸಂಘದ ಐಡಿ ಕಾರ್ಡ ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಗಳಿಸಲು, ಮತ್ತಿನ್ನಾವುದೋ ದಂಧೆ ನಡೆಸಲು ಯಾವತ್ತು ಅವಕಾಶ ಮಾಡಿಕೊಡುವುದಿಲ್ಲ ಎಂದು ಶಿವಾನಂದ ತಗಡೂರು ಎಚ್ಚರಿಕೆ ನೀಡಿದರು.

ಬದ್ಧತೆಯಿಂದ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಈ ಸಂಘದಲ್ಲಿ ಅವಕಾಶವಿದೆಯೇ ಹೊರತು ಕಾರ್ಯ ಮರೆತವರಿಗಲ್ಲ.  ಐಡಿ ಕಾರ್ಡಗಾಗಿ ಝೆರಾಕ್ಸ್ ಪೇಪರ ಪ್ರಿಂಟ್ ಮಾಡುವುದನ್ನು ನಾವು ನೋಡಿದ್ದೇವೆ.  ಪತ್ರಕರ್ತರೆಂದು ಹೇಳಿಕೊಳ್ಳುವ ಇಂಥವರಿಗೆ ಯಾವ ಕಾರಣಕ್ಕೂ ಸಂಘದ ಸದಸ್ಯತ್ವ ನೀಡಬಾರದು ಎಂದು ಸಂಘದ ಪದಾಧಿಕಾರಿಗಳಿಗೆ ಶಿವಾನಂದ ತಗಡೂರು ಸೂಚ್ಯವಾಗಿ ಹೇಳಿದರು.

ಈ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು.

 

 

Leave a Reply

ಹೊಸ ಪೋಸ್ಟ್‌