KUWJ Felicitation: ಪತ್ರಕರ್ತರ ಸಂಘದಿಂದ ಮೋಹನ ಕುಲಕರ್ಣಿ ಅವರಿಗೆ ಸನ್ಮಾನ

ವಿಜಯಪುರ: ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ನೇಮಕರಾದ ಹಿರಿಯ ಪತ್ರಕರ್ತ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಅವರನ್ನು ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮತ್ತು ಇತರ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಚೂರಿ, ಬಹಳ ವರ್ಷಗಳ ನಂತರ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಯಲ್ಲಿ ಸರಕಾರ ವಿಜಯಪುರ ಜಿಲ್ಲೆಗೆ ಪ್ರಾತಿನಿದ್ಯ ನೀಡಿದೆ. ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದು ನಮ್ಮೆಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

ಸಮಿತಿ ಸದಸ್ಯರಾಗಿ ಮೋಹನ ಕುಲಕರ್ಣಿ ಅವರು ತಮ್ಮ ಅವಧಿಯಲ್ಲಿ ಈ ಭಾಗದ ಅರ್ಹ ಪತ್ರಕರ್ತರಿಗೆ ಮಾಧ್ಯಮ ಮಾನ್ಯತಾ ಕಾಡ್೯ ಸೇರಿದಂತೆ ಸರಕಾರದ ಇತರ ಸೌಳಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಂಗಮೇಶ ಟಿ. ಚೂರಿ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ. ಕೆ. ಕುಲಕರ್ಣಿ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಸಲಹಾ ಸಮಿತಿ ಸದಸ್ಯರಾದ ಶರಣು ಮಸಳಿ, ಸೀತಾರಾಮ ಕುಲಕರ್ಣಿ, ರಾಜು ಕೊಂಡಗೂಳಿ, ದೇವೇಂದ್ರ ಹೆಳವರ, ಸಚೇಂದ್ರ ಲಂಬು ಮಾತನಾಡಿ, ಇಪ್ಪತ್ತು ವರ್ಷಗಳ ನಂತರ ಮಾಧ್ಯಮ ಮಾನ್ಯತೆ ಸಮಿತಿಯಲ್ಲಿ ಈ ಜಿಲ್ಲೆಗೆ ಅವಕಾಶ ದೊರೆತಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ರಾಹುಲ ಆಪ್ಟೆ, ಸಹಖಜಾಂಚಿ ದೀಪಕ ಶಿಂತ್ರೆ, ಸಂಘದ ಸದಸ್ಯರಾದ ಗಿರಿಜಾ ಕನಮಡಿ, ದೇವಪ್ಪ ಮೇತ್ರಿ, ನಿಂಗಪ್ಪ ಸಂಗಾಪೂರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌