Doni Flood: ಸಾತಿಹಾಳ ಬಳಿ ಪ್ರವಾಹದಲ್ಲಿಯೇ ಬಸ್ ಸಂಚಾರ- ನಡು ನೀರಿನಲ್ಲಿಯೇ ಶಾಲಾ ಮಕ್ಕಳನ್ನು ಹೊತ್ತೊಯ್ದ ಪೋಷಕರು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಅಲ್ಪವಿರಾಮ ಸಿಕ್ಕಿದ್ದರೂ ಡೋಣಿ ನದಿಯಲ್ಲಿ ಪ್ರವಾಹ ಮುಂದುವರೆದಿದೆ. 

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಬಳಿ ಹುಟ್ಟುವ ಡೋಣಿ ನದಿ ಮಳೆ ಬಂದಾಗಲೆಲ್ಲ ಪ್ರವಾಹದ ನೀರಿನ ಜೊತೆಗೆ ಎರೆಮಣ್ಣನ್ನೂ ಜೊತೆಗೆ ತೆಗೆದುಕೊಂಡು ಹೋಗುವುದರಿಂದ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.  ಈ ನದಿ ಪ್ರತಿ ಬಾರಿ ತನ್ನ ಪಥವನ್ನು ಬದಲಿಸುತ್ತ ರೈತರ ಹೊಸ ಹೊಸ ಹೊಲಗಳಿಗೆ ನುಗ್ಗುತ್ತ ಬೆಳೆಯನ್ನೂ ಹಾಳು ಮಾಡುತ್ತಿದೆ.

ಸಾತಿಹಾಳ ಡೋಣಿ ಸೇತುವೆ ಮೇಲೆ ಪ್ರವಾಹದ ನೀರಿನಲ್ಲಿಯೇ ಸಂಚರಿಸಿದ ಸರಕಾರಿ ಬಸ್ ವಾಲಿರುವುದು

ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ

ಡೋಣಿ ನದಿ ಪ್ರವಾಹದಿಂದಾಗಿ ಸೇತುವೆ ನೀರಿನಲ್ಲಿ ಮುಳುಗಿದ್ದರೂ ಲೆಕ್ಕಿಸದೇ ಸರಕಾರಿ ಬಸ್ ಚಾಲಕ ಬಸ್ಸನ್ನು ಚಲಾಯಿಸಿದ ಘಟನೆ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿ ನಡೆದಿದೆ.  ಬಸ್ಸಿನಲ್ಲಿ ಪ್ರಯಾಣಿಕರಿದ್ದರೂ ಹುಂಬ ಧೈರ್ಯ ಮಾಡಿದ ಬಸ್ ಚಾಲಕ ಜಲಾವೃತವಾಗಿರುವ ಸೇತುವೆಯ ಮೇಲೆ ಬಸ್ ಚಲಾಯಿಸಿದ್ದಾನೆ.  ಒಂದು ಸಂದರ್ಭದಲ್ಲಿ ಈ ಬಸ್ಸು ಸೇತುವೆಯಿಂದ ವಾಲಿತ್ತಾದರೂ ನಂತರ ಅದನ್ನು ನಿಯಂತ್ರಿಸಿದ ಚಾಲಕ ಬಸ್ಸನ್ನು ಮತ್ತೋಂದು ಬದಿಗೆ ಸುರಕ್ಷಿತವಾಗಿ ತಂದಿದ್ದಾನೆ.

ಜಲಾವೃತವಾಗಿದ್ದ ಸೇತುವೆ ಮೇಲೆ ಬಸ್ ಬರುತ್ತಿದ್ದನ್ನು‌ ಕಂಡು ಭಯಭೀತರಾದ ಸ್ಥಳೀಯರು ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ತೊನಶ್ಯಾಳ ಬಳಿ ಡೋಣಿ ಪ್ರವಾಹದ ನೀರಿನಲ್ಲಿಯೇ ರಸ್ತೆ ದಾಟುತ್ತಿರುವ ವಿದ್ಯಾರ್ಥಿನಿಯರು

ನಾನಾ ತಾಲೂಕುಗಳಲ್ಲಿ ಸಂಕಷ್ಟ ತಂದ ಡೋಣಿ ನದಿ ಪ್ರವಾಹ

ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಮೂಲಕ ಜಿಲ್ಲೆಯನ್ನು ಪ್ರವೇಶಿಸುವ ಡೋಣಿ ನದಿ ತಿಕೋಟಾ, ಬಬಲೇಶ್ವರ, ವಿಜಯಪುರ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಮತ್ತು ತಾಳಿಕೋಟೆ ತಾಲೂಕಿನ ಮೂಲಕ ಹರಿಯುತ್ತದೆ.

ತೊನಶ್ಯಾಳ ಬಳಿ ಪ್ರವಾಹದ ನೀರಿನಲ್ಲಿಯೇ ಮಕ್ಕಳನ್ನು ಹೊತ್ತುಕೊಂಡು ಮನೆಗೆ ಕರೆದೊಯ್ಯುತ್ತಿರುವ ಪೋಷಕರು

ಈ ತಾಲೂಕುಗಳಲ್ಲಿ ಈಗ ಡೋಣಿ ನದಿ ಉಕ್ಕಿ ಹರಿಯುತ್ತಿದೆ.  ಇದರಿಂದಾಗಿ ಬಬಲೇಶ್ವರ ತಾಲೂಕಿನ ತೊನಶ್ಯಾಳ ಗ್ರಾಮ ಹಳೆ ಮತ್ತು ಹೊಸ ಊರುಗಳ ಸಂಪರ್ಕ ಕಡಿತಗೊಂಡಿದೆ.  ಡೋಣಿ ನದಿ ಪ್ರವಾಹದ ನೀರಿನಲ್ಲಿಯೇ ಗ್ರಾಮಸ್ಥರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂಡಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಗಮನಾರ್ಹವಾಗಿದ್ದವು.  ಈ ಗ್ರಾಮಗಳನ್ನು ಸಂಪರ್ಕಿಸುವ ಎರಡೂ ಬದಿ ರಸ್ತೆಗಳು ಜಲಾವೃತವಾಗಿರುವುದರಿಂದ ವಿದ್ಯಾರ್ಥಿಗಳೂ ಕೂಡ ನೀರಿನಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.  ಈ ಗ್ರಾಮಕ್ಕೆ ಸೇತುವೆಯನ್ನು ನಿರ್ಮಿಸಲಾಗಿದೆಯಾದರೂ ಆ ಸೇತುವೆಗಳು ಹಳ್ಳಕ್ಕಿಂತ ಕೆಳಮಟ್ಟದಲ್ಲಿರುವುದು ವಿಪರ್ಯಾಸವಾಗಿದೆ.  ನಾಲ್ಕೈದು ಅಡಿಯಷ್ಟು ‌ನಿಂತಿರುವ ಪರಿಣಾಮ ಜನರ ಓಡಾಟಕ್ಕೆ ತೊಂದರೆ ಎದುರಾಗಿದೆ.  ತುರ್ತು ಕೆಲಸಗಳಿಗೆಗಾಗಿ ಇಲ್ಲಿನ ಜನತೆ ಪ್ರವಾಹದ ನೀರಿನಲ್ಲಿ ಸೊಂಟದ ವರೆಗೆ ನೀರಿದ್ದರೂ ಲೆಕ್ಕಿಸಲೇ ಸಂಚರಿಸುತ್ತಿದ್ದಾರೆ.  ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಪ್ರವಾಹ ಇಳಿಮುಖವಾಗುವ ಸಾಧ್ಯತೆ ಇದೆ.

ಡೋಣಿ ನದಿ ಪ್ರವಾಹದ ನೀರಿನಲ್ಲಿ ಬೈಕ್ ಹೊತ್ತೊಯ್ದ ತೊನಶ್ಯಾಳ ಗ್ರಾಮಸ್ಥರು

ಈ ಮಧ್ಯೆ, ಜನರ ಸಂಕಷ್ಟಗಳಿಗೆ ಸ್ಪಂದಿಸಿರುವ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ವಿಜಯಪುರ ಜಿಲ್ಲಾಧಿಕಾರಿ, ತಿಕೋಟಾ ಹಾಗೂ ಬಬಲೇಶ್ವರ ತಹಸೀಲ್ದಾರರನ್ನು ಸಂಪರ್ಕಿಸಿ ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.

ಡಿಸಿ ಡಾ. ದಾನಮ್ಮನವರ, ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಭೇಟಿ

ಈ ಮಧ್ಯೆ, ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ತಿಕೋಟಾ ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ ಮತ್ತು ಬಬಲೇಶ್ವರ ತಹಸೀಲ್ದಾರ ಸಂತೋಷ ಮ್ಯಾಗೇರಿ ಅವರು ಡೋಣಿ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕ ಎಂ. ಬಿ. ಪಾಟೀಲ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿರುವ ತಿಕೋಟಾ ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ

ವಿಜಯಪುರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಿಕೋಟಾ, ಬಬಲೇಶ್ವರ ಮತ್ತು ವಿಜಯಪುರ ತಾಲೂಕಿನಲ್ಲಿ ಡೋಣಿ ನದಿ ಪ್ರವಾಹ ಉಂಟಾಗಿದೆ.  ಈ ಪ್ರವಾಹದಿಂದಾಗಿ ಸುಮಾರು 1520.60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕೃಷಿ ಮತ್ತು ತೋಟಗಾರಿಗೆ ಬೆಳೆಗಳು ಜಲಾವೃತವಾಗಿವೆ.  ಪ್ರವಾಹ ಇಳಿಕೆಯಾದ ನಂತರ ಜಂಟಿ ಸಮೀಕ್ಷೆ ಕಾರ್ಯ ಕೈಗೊಳಳಾಗುವುದು.  ಈಗಾಗಲೇ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಡೋಣಿ ನದಿ ಪ್ರವಾಹಕ್ಕೆ ಒಳಗಾದ ಸಾರವಾಡ, ಧನ್ನಾಯಳ ಮತ್ತು ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಪುತ್ರ ಬಸನಗೌಡ ಪಾಟೀಲ ಕೂಡ ಡೋಣಿ ನದಿ ಪ್ರವಾಹ ಪೀಡಿತ ಕೋಟ್ಯಾಳ, ಧನ್ಯಾಳ, ದಾಸ್ಯಾಳ, ಸಾರವಾಡ ಮತ್ತು ತೊನಶ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದಾರೆ.

Leave a Reply

ಹೊಸ ಪೋಸ್ಟ್‌