Flag Yatnal: ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವೂ ದೊಡ್ಡದಲ್ಲ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ, ದೇಶ ವಿಭಜನೆಯ ಘೋರ ನೆನಪಿನ ದಿನಾಚರಣೆ ಕಾರ್ಯಕ್ರಮ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ‌ದೇಶಕ್ಕೆ ಮಾನ್ಯ ನರೇಂದ್ರ ಮೋದಿಜಿಯವರು ಪ್ರಧಾನ ಮಂತ್ರಿಗಳಾಗಿರುವುದು ನಮ್ಮೆಲ್ಲರ
ಸುದೈವವಾಗಿದೆ. ಭಾರತ ದೇಶದ ಅಭಿವೃದ್ಧಿಯ ಮಾದರಿಯು ಈಗ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ದೇಶಕ್ಕಾಗಿ ಅನೇಕ ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ದೇಶಾಭಿಮಾನ ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದ ಶಾಸಕರು, ರಾಷ್ಟ್ರಧ್ವಜ ನಮ್ಮ ದೇಶಕ್ಕೆ ಶ್ರೇಷ್ಠವಾಗಿದೆ. ‌ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವು ದೊಡ್ಡದಲ್ಲ ಎಂದು ಅವರು ತಿಳಿಸಿದರು.

ಹರ್ ಘರ್ ತಿರಂಗಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಗಳ ಮೇಲೆ ರಾಷ್ಟ್ರ ಧ್ವಜ ಕಂಡು ಸಂತೋಷವಾಯಿತು ಎಂದು ಶಾಸಕರು ಹೇಳಿದರು.

ದೇಶ ವಿಭಜನೆಯ ಘೋರ ನೆನಪಿನ ದಿನಾಚರಣೆ ಕಾರ್ಯಕ್ರಮವನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದರು

ಒಂದು ಕಾಲದಲ್ಲಿ ಭಾರತ ದೇಶವು ಬರೀ ಭೌಗೋಳಿಕವಾಗಿ ವಿಭಜನೆಯಾಗಲಿಲ್ಲ. ಕೋಟ್ಯಂತರ ಜನರ ರಕ್ತ ಹರಿಯಿತು. ನಮ್ಮ ದೇಶದ ಮೇಲೆ ಹೇಗೆ ದಬ್ಬಾಳಿಕೆಯಾಯಿತು ಎಂಬುದರ ಬಗ್ಗೆ ಇಂದಿನ ಯುವಪೀಳಿಗೆಯು ಅರಿಯಬೇಕು. ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಮಾತನಾಡಿ, ಒಡೆದು ಆಳುವ ನೀತಿ ಅನ್ವಯ ಬ್ರಿಟಿಷರು ನಮ್ಮ‌ ದೇಶದಲ್ಲಿನ ಜನರ ಭಾವನೆಗಳನ್ನು ಒಡೆದರು. ಆ ಕಾಲದಲ್ಲಿ ದೇಶವು ಭೌಗೋಳಿಕವಾಗಿ ವಿಭಜನೆಯಾಗುವುದರ ಜೊತೆಗೆ ಜನರು ಸಹ ವಿಭಜನೆ ಆಗುವಂತಹ ದುಸ್ಸಾಹಸ‌ ಘಟನೆ ನಡೆಯಿತು. ಇದರಿಂದಾಗಿ ಒಂದು ಭಾಗದ ಜನರು ಮತ್ತೊಂದೆಡೆ ಸ್ಥಳಾಂತರವಾಗಬೇಕಾದ ಸ್ಥಿತಿ ಬಂದಿತು. ಇದು ಯುದ್ದಕ್ಕಿಂತ ಘೋರ ನೋವಿನ ಸಂಗತಿಯಾಗಿದೆ. ದೇಶ ವಿಭಜನೆಯ ಈ ಹಿಂಸಾ ಕೃತ್ಯದಲ್ಲಿ 5 ರಿಂದ 10 ಲಕ್ಷ ಜನರು ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಹೇಳಿದರು.

ಮಹಾತ್ಮರ ತ್ಯಾಗ ಸ್ಮರಣೆಗಾಗಿ, ಮಹಾನ್ ನಾಯಕರ ದೇಶಪ್ರೇಮವನ್ನು ಇಂದಿ‌ ಯುವಪೀಳಿಗೆಗೆ ಪರಿಚಯಿಸಬೇಕು ಎಂದು ಪ್ರಧಾನ ಮಂತ್ರಿಗ ನರೇಂದ್ರ ಮೋದೀಜಿಯವರು ತಿಳಿಸಿದಂತೆ ದೇಶದೆಲ್ಲೆಡೆ ಈ ದಿನಾಚರಣೆ ನಡೆಯುತ್ತಿದೆ. ಉಪನಿಷತ್ತಿನಲ್ಲಿ ಹೇಳಿದ ಶಾಂತಿಮಂತ್ರವನ್ನು ನಾವುಗಳು ಪಾಲನೆ ಮಾಡಬೇಕು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.

ಎಸ್ಪಿ ಎಚ್. ಡಿ. ಆನಂದಕುಮಾರ ಮಾತನಾಡಿ, ನಮ್ಮ ಯುವಪೀಳಿಗೆಯು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶ ವಿಭಜನೆಯ ಸಂದರ್ಭದಲ್ಲಿ ಎಷ್ಟು ಜನ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಎಷ್ಟು ಜನ ನೋವುಂಡಿದ್ದಾರೆ ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರಧಾನ ಮಂತ್ರಿಗಳು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಯಾವ ರೀತಿಯ ಅಹಿತಕರ ಘಟನೆಗಳು ಸಂಭವಿಸಿವೆ ಎಂಬುದರ ಬಗ್ಗೆ, ಮಹಾತ್ಮರು ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಬಗ್ಗೆ ಜನತೆಗೆ ತಿಳಿಸಲು ಪ್ರಧಾನ ಮಂತ್ರಿ ನರೇಂದ್ರ‌ ಮೋದಿಯವರ ಸೂಚನೆಯ ಮೇರೆಗೆ ಇಂಥ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಸ್ವಾಗತಿಸಿದರು.

ಈ ಸಮಾರಂಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪಿ. ಯಲ್ಲಮ್ಮ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮನಗೌಡ ಕನ್ನೋಳ್ಳಿ, ರಾಜಶೇಖರ ದೈವಾಡೆ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌