ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿ. ಎಲ್. ಡಿ. ಇ. ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಸ್ವಾತಂತ್ರ್ಯ ದಿನವನ್ನು ವಿನೂತನವಾಗಿ ಆಚರಿಸಲಾಯಿತು.
75 ವರ್ಷ ಮೇಲ್ಪಟ್ಟ 75 ಜನ ಹಿರಿಯ ನಾಗರಿಕರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. 75 ವರ್ಷ ಮೇಲ್ಪಟ್ಟ ನಿವೃತ್ತ ಅಧಿಕಾರಿಗಳು, ಸಿಬ್ಬಂದಿ, ರೈತರು, ಜನಸಾಮಾನ್ಯರನ್ನು ಅದರಲ್ಲೂ 20ಕ್ಕೂ ಹೆಚ್ಚು ಮಹಿಳೆಯರನ್ನು ಗುರುತಿಸಿ ಗೌರವಿಸಿದ್ದು ವಿಶೇಷವಾಗಿತ್ತು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಲೇಜ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 75 ವರ್ಷ ಮೇಲ್ಪಟ್ಟ 75 ಜನ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಅಪೋಲೊ, ಪವಮಾನ, ಶ್ರೀಕಾಂತ ಎಜೆನ್ಸಿ ಮತ್ತು ಮನ್ಮತಯ್ಯ ಸ್ವಾಮಿ ಔಷಧ ಕಂಪನಿಗಳ ವತಿಯಿಂದ ಔಷಧಿಗಳ ಕಿಟ್ಗಳನ್ನು ವಿತರಿಸಲಾಯಿತು.
![](https://basavanadu.com/wp-content/uploads/2022/08/WhatsApp-Image-2022-08-16-at-5.28.15-PM.jpeg)
ಬಿ. ಎಲ್. ಡಿ. ಇ. ಆಸ್ಪತ್ರೆಯ ವೈದ್ಯರ ತಂಡ ಉಚಿತ ಆರೋಗ್ಯ ತಪಾಸಣೆ ನಡೆಸಿದರು.
ಇದಕ್ಕೂ ಮುಂಚೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಮತ್ತು ಹಿರಿಯ ನಾಗರಿಕ ಸೇವಾ ಬಳಗದ ಮುಖಂಡ ಸಂಗು ಸಜ್ಜನ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ನಾನಾ ಹೋರಾಟಗಾರರು ತಮ್ಮ ತ್ಯಾಗ ಮತ್ತು ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ಅಂಥ ಮಹನೀಯರನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಆರ್.ಬಿ.ಕೊಟ್ನಾಳ ಮಾತನಾಡಿ ಹಿರಿಯರಿಗೆ ಗೌರವ ನೀಡುವುದು ಭಾರತೀಯ ಸಂಪ್ರದಾಯವಾಗಿದೆ. ಅದರಂತೆ ಕಾಲೇಜಿನ ವತಿಯಿಂದ ಹಿರಿಯ ನಾಗರಿಕರಿಗೆ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ, ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಜಿರಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಆನಂದ ಅಂಬಲಿ, ಬಿ. ಎಲ್. ಡಿ. ಇ. ಸಂಸ್ಥೆಯ ಸಿ.ಎಫ್.ಓ. ದೇವೇಂದ್ರಕುಮಾರ ಅಗರವಾಲ, ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಶಿವಕುಮಾರ, ಕಾಲೇಜಿನ ಮುಖ್ಯ ಪ್ರಾಧ್ಯಾಪಕ ಡಾ. ಬಿ. ಶಿವಕುಮಾರ ಉಪಸ್ಥಿತರಿದ್ದರು.
ಡಾ. ಸಂತೋಷ ಕರಜಗಿ ಸ್ವಾಗತಿಸಿದರು. ಡಾ. ಎಸ್.ಜಡ್.ಇನಾಮದಾರ ಕಾಲೇಜಿನ ವಿದ್ಯಾರ್ಥಿಗಳಾದ ತೃಪ್ತಿ ಹುನ್ನೂರ ಮತ್ತು ಸಂಜನಾ ಕಮತಗಿ ನಿರೂಪಿಸಿದರು. ಡಾ. ಶ್ರೀಪಾದ ಪೋದ್ದಾರ ವಂದಿಸಿದರು.