Journalists Pension: ಪತ್ರಕರ್ತರ ಮಾಸಾಶನ ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ನಾತಿ, ಶ್ರೀಗಳು, ಸಚಿವರು

ಪತ್ರಕರ್ತರ ಹಲವಾರು ಬೇಡಿಕೆಗಳಿವೆ. ಪತ್ರಕರರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯ ಅವಶ್ಯಕತೆ ಇದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವ ಸಮಿತಿ ರಚಿಸಲು ನಾಳೆಯೇ ಆದೇಶ ಹೊರಡಿಸಲಾಗುವದು. ಅದಕ್ಕಿರುವ ನಿಯಮಗಳನ್ನು ಸರಳೀಕರಣಗೊಳಿಸಲಾಗುವುಎಂದು ಅವರು ತಿಳಿಸಿದರು.

ವಿಧಾನ ಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳ ಭಾಗ. ನಾಡು ಕಟ್ಟಲು ನಿಮ್ಮ ಶಕ್ತಿ ಬಳಕೆಯಾಗಲಿ. ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುವ ಸ್ಥಿತಪ್ರಜ್ಞತೆ ಇದ್ದಾಗ ರಾಜಕಾರಣಿ ಯಶಸ್ವಿಯಾಗಲು ಸಾಧ್ಯ. ಇವೆರಡರ ಮಧ್ಯೆ ಇರುವ ಸತ್ಯವನ್ನು ಕಂಡುಕೊಂಡು ಮುಂದೆ ಸಾಗಬೇಕು. ಇಂಥ ಕಾರ್ಯಕ್ರಮಗಳನ್ನು ಪ್ರೆಸ್ ಕ್ಲಬ್ ಹೆಚ್ಚಾಗಿ ಮಾಡಬೇಕು ಎಂದು ಸಿಎಂ ಹೇಳಿದರು.

ಪ್ರೆಸ್ ಕ್ಲಬ್ ಸಾಮಾನ್ಯವಾಗಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುತ್ತಾರೆ. ಬ್ಯುಸಿನೆಸ್ ಐಕಾನ್ ಅವಾರ್ಡ್ ಕೊಡುತ್ತಾರೆ ಎಂದಾಗ ಆಶ್ಚರ್ಯವಾಯಿತು. ಪ್ರೆಸ್ ಕ್ಲಬ್ ತನ್ನ ಸಾಮಾಜಿಕ ಹೊಣೆಗಾರಿಕೆ ಯನ್ನು ಹೆಚ್ಚಿಸಿಕೊಂಡಿದೆ. ಬ್ಯುಸಿನೆಸ್ ನಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಅವಾರ್ಡ್ ಕೊಡುವುದು ವಿಶೇಷ ಎಂದು ತಿಳಿಸಿದ ಅವರು ಪ್ರಶಸ್ತಿ ಪಡೆದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಇದು ವಿಶೇಷ ಪ್ರಶಸ್ತಿ. ಟೀಕೆಗಾರರಿಂದ ಪ್ರಶಸ್ತಿ ಪಡೆಯುವುದು ಸುಲಭವಲ್ಲ. ಅವರಿಂದ ಪ್ರಶಸ್ತಿ ಪಡೆದಿರುವುದು ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಿ ಎಂದು ನಿರೂಪಿಸುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಅವಿನಾಭಾವ ಸಂಬಂಧ

ರಾಜಕಾರಣಿಗಳು ಮತ್ತು ಮಾಧ್ಯಮದವರಿಗೂ ಅವಿನಾಭಾವ ಸಂಬಂಧವಿದೆ. ಅವರನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ಅವರು ಇರಲಾಗುವುದಿಲ್ಲ. ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿಯಲು ನಿಮ್ಮ ಅಗತ್ಯವಿದೆ. ಮಾಧ್ಯಮಗಳಿಲ್ಲದೆ ಜನರಿಗೆ ನಾವು ತಲುಪಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ನಿಮ್ಮ ಅನ್ಯೋನ್ಯ ಸಂಬಂಧ ಅವಶ್ಯಕ ಮತ್ತು ಅನಿವಾರ್ಯ. ಹಾಗಂತ ಅದು ಒಂದೇ ಮಾರ್ಗದ ಟ್ರಾಫಿಕ್ ಅಲ್ಲ. ನಮ್ಮನ್ನು ಬಿಟ್ಟರೆ ನಿಮಗೆ ಸುದ್ದಿಗಳಿಲ್ಲ. ನೀವು ಕ್ರೀಡೆ, ಸಿನಿಮಾ ಎಂದು ಸುದ್ದಿ ಹಾಕಿದರೂ ಮೊದಲ ಪುಟದಲ್ಲಿ ನಾವೇ ಬೇಕು. ರಾಜಕಾರಣವೇ ಇಲ್ಲದ ದಿನವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ವಾಹಿನಿಗಳ ಟಿ ಆರ್ ಪಿಗಳು ಹಾಗೂ ರಾಜಕಾರಣಿಗಳ ಮಹತ್ವ ಕಡಿಮೆಯಾಗುತ್ತದೆ. ನಾವು ಹೇಳಿ ಮಾಡಿಸಿದ ಜೋಡಿ. ಒಟ್ಟಿಗೇ ಬಾಳಬೇಕೆಂದು ಬೊಮ್ಮಾಯಿ ತಿಳಿಸಿದರು.

ಅಂತ:ಕರಣದಿಂದ ಕೆಲಸ ಮಾಡಿ

ಕಾಲ ಬದಲಾಗಿದೆ. ತಂತ್ರಜ್ಞಾನ ಮುಂದುವರೆದಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಈಗ ತಂತ್ರಾಂಶ ಜ್ಞಾನವಾಗಿದೆ. ಡಿಜಿಟಲ್ ಪ್ರಪಂಚಕ್ಕೆ ಬಂದಿದ್ದೇವೆ. ಡಿಜಿಟಲ್ ಪ್ರಪಂಚಕ್ಕೆ ಹೊರತಾಗಿ ಯಾರೂ ಇಲ್ಲ. ಹಳ್ಳಿಯ ಜನರಿಂದ ಹಿಡಿದು ಆಡಳಿಗಾರರಿಗೆ, ಉನ್ನತ ಮಟ್ಟದವರೆಗೂ ಡಿಜಿಟಲ್ ಜ್ಞಾನದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ನಾವು ಕೆಲವು ಮೂಲಭೂತ ವಿಷಯ ಮರೆಯಬಾರದು. ತತ್ವಜ್ಞಾನ ದಿಂದ ತಂತ್ರಾಂಶ ಜ್ಞಾನಕ್ಕೆ ಬದಲಾವಣೆ ಆಗಿದೆ. ಆದರೆ ತತ್ವಜ್ಞಾನದ ಮಾರ್ಗದರ್ಶನ ಹಾಗೂ ಅದರ ಮಹತ್ವವನ್ನು ಮರೆಯಬಾರದು. ಖಾಸಗೀಕರಣ, ಉದಾರೀಕರಣ ಹಾಗೂ ಜಾಗತೀಕರಣವಾಗಿದೆ. ಇವುಗಳ ಮಧ್ಯೆ ಅಂತ:ಕರಣವನ್ನು ಕಡಿಮೆಯಾಗಿದೆ. ಅಂತ:ಕರಣವನ್ನು ಇಟ್ಟುಕೊಂಡು ನಾವು ಕೆಲಸ ಮಾಡಬೇಕು. ಬಡವರಿಗಾಗಿ ಮನಮಿಡಿಯುವ ಕೆಲಸಗಳನ್ನು ಮಾಡಬೇಕು. ನಮ್ಮ ಬದುಕಿನಲ್ಲಿ ಹಿಂತಿರುಗಿ ನೋಡಿದಾಗ ಯಾವ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದೇವೆ? ಯಾವ ಸಾಧನೆಯ ಕುರುಹುಗಳನ್ನು ಬಿಟ್ಟು ಹೋಗಿದ್ದೆವು? ಎನ್ನುವುದು ಬಹಳ ಮುಖ್ಯ. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ ಎಂದಿದ್ದಾರೆ. ಬದುಕು ಎಷ್ಟು ಉತ್ಕೃಷ್ಟವಾಗಿ ಇರಬೇಕೆಂದರೆ, ನೀವು ದೈಹಿಕವಾಗಿ ಇಲ್ಲದಿದ್ದರೂ ನಿಮ್ಮ ಸಾಧನೆಗಳ ಬಗ್ಗೆ ಸದಾ ಕಾಲ ಜಗತ್ತು ಮಾತನಾಡಬೇಕು ಎಂದು ಅವರು ತಿಳಿಸಿದರು.

ಬದುಕು ದೊಡ್ಡದು

ಇಲ್ಲಿ ಹಲವಾರು ಸಣ್ಣ ವಯಸ್ಸಿನ ಸಾಧನೆ ಮಾಡಿರುವುದನ್ನು ನೋಡಿದ್ದೇನೆ. ಆದರೆ ಬದುಕು ಅದಕ್ಕಿಂತ ದೊಡ್ಡದಿದೆ. ಆ ದೊಡ್ಡ ಬದುಕಿಗೆ ಇನ್ನಷ್ಟು ಸಾಧನೆ ನಿಮಗೆ ಮೆರಗು ನೀಡಲಿ ಎಂದು ಸಿಎಂ‌ ಹೇಳಿದರು.

ನಿರೀಕ್ಷೆಗಳಿಲ್ಲದ ಮಾನವೀಯ ಸೇವೆ

ಬೆಂಗಳೂರು ಪ್ರೆಸ್ ಕ್ಲಬ್ ಗೆ ಐದಾರು ದಶಕಗಳ ಇತಿಹಾಸವಿದೆ. ಇಲ್ಲಿ ಕರ್ನಾಟಕದ ಆಗುಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತದೆ. ಬೆಳಿಗ್ಗೆಯಿಂದ ರಾಜಕಾರಣಿಗಳ ಕೆಲಸವನ್ನು ಇಲ್ಲಿ ರಾತ್ರಿ ಚರ್ಚೆಯಾಗುತ್ತದೆ. ಪತ್ರಕರ್ತರು ಜೀವನದ ಹಲವಾರು ವಿಚಾರಗಳ ಬಗ್ಗೆ ಬರೆಯುತ್ತಾರೆ. ಸಾವಿರಾರು ಕೋಟಿ ರೂ.ಗಳ ಬಗ್ಗೆ ಬರೆಯುತ್ತಾರೆ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ಅವರ ಕುಟುಂಬಗಳು, ನಾಟಕದಲ್ಲಿ ಶ್ರೀಮಂತನ ಪಾತ್ರ ಮಾಡಿ ಬಣ್ಣ ಒರೆಸಿಕೊಂಡಾಗ ಇರುವಂತೆ ಇರುತ್ತದೆ. ಆದರೆ ನಿಮ್ಮದು ನಿರೀಕ್ಷೆಗಳಿಲ್ಲದ ಮಾನವೀಯ ಸೇವೆ. ಪತ್ರಕರ್ತ ಜೀವನ ಬಹಳಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಇದೊಂದು ಸಾಹಸ. ಸಾಧಿಸುವ ಹಂಬಲವಿರುತ್ತದೆ. ದೇಶಕ್ಕಾಗಿ ಸೇವೆ ಮಾಡಿರುತ್ತೀರಿ. ಪತ್ರಕರ್ತರ ವೃತ್ತಿಗೆ ಗೌರವ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಕೆ. ಗೋಪಾಲಯ್ಯ, ಯಡಿಯೂರು ಶ್ರೀ ಗುರುದೇವದತ್ತ ಪೀಠದ ಶ್ರೀ ಸಂತೋಷ್ ಗುರೂಜಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌