Earthquake Reason: ವಿಜಯಪುರ ಭೂಕಂಪಕ್ಕೆ ಕಾರಣ ಬಿಚ್ಚಿಟ್ಟ ವಿಜ್ಞಾನಿ ಜಗದೀಶ- ಭೂಕಂಪನ ಬಗ್ಗೆ ಭಯ ಬೇಡ ಎಂದು ಧೈರ್ಯ ಹೇಳಿದ ವಿಜ್ಞಾನಿ

ವಿಜಯಪುರ: ಭೂಕಂಪನದ ಬಗ್ಗೆ ಭಯ ಬೇಡ.  ಆದರೆ, ಜಾಗರೂಕರಾಗಿರಬೇಕು ಎಂದು ಕರ್ಣಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಜಗದೀಶ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪದೇಪದೆ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಧೈರ್ಯ ಹೇಳಲು ಮತ್ತು ಭೂಕಂಪನ ಮಾಪನ ಕೇಂದ್ರ ಆರಂಭಿಸಿ, ಭೂಕಂಪನದ ಮೇಲೆ ಹೆಚ್ಚಿನ ನಿಗಾ(ಕ್ಲೋಸ್ ಮಾನಿಟರಿಂಗ್) ವಹಿಸಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ತಂಡವು ವಿಜಯಪುರ ಜಿಲ್ಲೆಯ ಬಸನವ ಬಾಗೇವಾಡಿ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜಿಲ್ಲಾಡಳಿತದ ಮನವಿ ಮೇರೆಗೆ ವಿಜಯಪುರಕ್ಕೆ ಆಗಮಿಸಿರುವ ವೈಜ್ಞಾನಿಕ ಅಧಿಕಾರಿಗಳಾದ ಎಸ್.ಜಗದೀಶ ಹಾಗೂ ಕಿರಿಯ ವೈಜ್ಞಾನಿಕ ಅಧಿಕಾರಿಗಳಾದ ಡಾ. ರಮೇಶ ದಿಕ್ಪಾಲ್ ಅವರು ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಜಿ. ಪಂ. ಸಿಇಓ ರಾಹುಲ ಶಿಂಧೆ ಅವರ ಜೊತೆ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಮೊದಲಿಗೆ ಉಕ್ಕಲಿ ಗ್ರಾಮಕ್ಕೆ ತೆರಳಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಆರಂಭಿಸಿದರು. ಬಳಿಕ ಉಕ್ಕಲಿ, ಹೆಗಡ್ಯಾಳ ಮತ್ತು ಮದಬಾವಿ ಗ್ರಾಮಗಳಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.

ಭೂಕಂಪನ ಹಿನ್ನೆಲೆಯಲ್ಲಿ ನಾನಾ ಅಧಿಕಾರಿಗಳು ವಿಜಯಪುರ ಜಿಲ್ಲಾಯ ನಾನಾ ಗ್ರಾಮಗಳಿಗೆ ಭೇಟಿ ನೀಡಿ ನಜರಲ್ಲಿ ಧೈರ್ಯ ತುಂಬಿದರು

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ, ಸಾಮಾಜಿಕ ಜಾಲತಾಣಗಳಲ್ಲಿರುವ ಸಂದೇಶಗಳನ್ನು ನೋಡಿ ಭೂಕಂಪನದ ಬಗ್ಗೆ ಜಿಲ್ಲೆಯ ಜನರು ಆತಂಕಪಡಬೇಕಿಲ್ಲ.  ಭೂಕಂಪನ ಆಗುತ್ತಿದೆ ಎನ್ನುವ ಭಯಾನಕ ಸಂದೇಶಗಳನ್ನು ನಂಬಬೇಡಿ.  ಸ್ವಲ್ಪಮಟ್ಟಿಗಿನ ಭೂಕಂಪನವಾದರು ಸಹ ಅದು ದಾಖಲಾಗಬೇಕು ಎಂಬುದನ್ನು ತಿಳಿಯುವುದಕೋಸ್ಕರವೇ ಉಕ್ಕಲಿ ಗ್ರಾಮದಲ್ಲಿ ಭೂಕಂಪನ ಮಾಪನ ಕೇಂದ್ರ ಹಾಕಿದ್ದೇವೆ.  ಇನ್ಮೆಲೆ ಸಣ್ಣ ಪ್ರಮಾಣದಲ್ಲಿ ಭೂಕಂಪನವಾದರೂ ಇಲ್ಲಿ ಅದು ದಾಖಲಾಗುತ್ತದೆ,  ಆ ಮಾಹಿತಿ ಆಧರಿಸಿ ನಾವು ಅಧ್ಯಯನ ಮಾಡುತ್ತೇವೆ ಎಂದು ತಿಳಿಸಿದರು.

ಭೂಕಂಪನಕ್ಕೆ ಕಾರಣ ಬಿಚ್ಚಿಟ್ಟ ಜಗದೀಶ

ಇದೇ ವೇಳೆ,  ಭೂಮಿ ಕೆಳಗಡೆ ಮಣ್ಣಿನ ಪದರುಗಳಿರುತ್ತವೆ.  ಎರಡು ಪದರುಗಳ ಮಧ್ಯೆ ಏನಾದರೂ ವ್ಯತ್ಯಾಸವಾದಾಗ ಭೂಮಿಯ ಕೆಳಗಡೆಯಿಂದ ಗಡಗಡ ಶಬ್ದ ಕೇಳಿ ಬರುತ್ತದೆ.  ಭೂಮಿಯ ಕೆಳಗಡೆ ಆಗುವ ವ್ಯತ್ಯಾಸವು ನಮಗೆ ಭೂಮಿಯ ಮೇಲೆ ಕಂಡು ಬರುತ್ತದೆ.  ಹೀಗೆ ಭೂಕಂಪನ ಅನುಭವ ಬಂದಾಗ ಜನರು ಮನೆಯೊಳಗಿದ್ದರೆ ಕೂಡಲೇ ಹೊರಗಡೆ ಬರಬೇಕು.   ಮನೆಯಿಂದ ಬೇಗನೇ ಹೊರಗೆ ಬರಲು ಆಗದೇ ಇದ್ದರೆ ಮನೆಯಲ್ಲಿರುವ ಟೇಬಲ್ ಕೆಳಗಡೆ ಹೋಗಿ ರಕ್ಷಣೆ ಮಾಡಿಕೊಳ್ಳಬೇಕು. ಭೂಕಂಪನದ ಅವಧಿ 2 ರಿಂದ 3 ಸೆಕೆಂಡ್ ಮಾತ್ರ ಇರುತ್ತದೆ.  ಇದಕ್ಕಿಂತ ಹೆಚ್ಚಿಗೆ ಇರುವುದಿಲ್ಲ.  ತಲೆಯ ಮೇಲೆ ಏನೂ ಬೀಳದ ಹಾಗೆ ರಕ್ಷಣೆ ಮಾಡಿಕೊಳ್ಳಬೇಕು.  ವಿದ್ಯುತ್ ಟ್ರಾನ್ಸಪರ್ಮರ್, ದೊಡ್ಡ ದೊಡ್ಡ ಕಟ್ಟಡಗಳಿಂದ ದೂರ ಇರಬೇಕು.  ಆಯಾ ಗ್ರಾಮಗಳ ಯುವಕರು ನಾಲ್ಕೆದು ತಂಡಗಳನ್ನು ಮಾಡಿಕೊಂಡು ಜಾಗೃತಿ ಮೂಡಿಸಬೇಕು. ಭೂಕಂಪನ ಆಗುವುದು ಸರ್ವಸಾಧಾರಣ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯೊಳಗೆ ನುಗ್ಗಿ ಅದು ಮಣ್ಣಿನ ಪದರುಗಳಲ್ಲಿ ಸೇರಿ ಮಣ್ಣಿನ ಪದರುಗಳಲ್ಲಿ ವ್ಯತ್ಯಾಸವಾಗಿ ಭೂಮಿಯಿಂದ ಗಡಗಡ ಶಬ್ದ ಕೇಳಿ ಬಂದು ಭೂಕಂಪನದ ಅನುಭವವಾಗುತ್ತದೆ.  ಇದರಿಂದ ಆತಂಕಪಡಬೇಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭೂಕಂಪನದಂಥ ಸಂದರ್ಭದಲ್ಲಿ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಸುಳ್ಳು ಸಂದೇಶ ಹರಿಬಿಡುತ್ತಾರೆ.  ಸುಳ್ಳು ಸುದ್ದಿಗಳಿಗೆ, ಸುಳ್ಳು ಸಂದೇಶಗಳಿಗೆ ಗಮನ ಕೊಡಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಉಕ್ಕಲಿಯಲ್ಲಿ ಭೂಕಂಪನ ಕೇಂದ್ರ ಹಾಕಿದ್ದೇವೆ. ಇದರಿಂದ ನಮಗೆ ಇನ್ಮೇಲೆ ವರದಿ ಬರುತ್ತದೆ. ಈ ವರದಿಯನ್ನು ಪರಿಶೀಲಿಸಲಾಗುವುದು. ಈ ವರದಿ ಆಧರಿಸಿ ಹೆಚ್ಚಿನ ಕೆಲಸ ಏನು ಮಾಡಬೇಕು ಎನ್ನುವ ಬಗ್ಗೆ, ಕೆಲವು ಸಂಸ್ಥೆಗಳಿAದ ಅಧ್ಯಯನದಂತಹ ಪ್ರಕ್ರಿಯೆ ನಡೆಯುತ್ತದೆ ಎಂದು ಜಗದೀಶ ಇದೇ ಸಂದರ್ಭದಲ್ಲಿ ತಿಳಿಸಿದರು.

ಇವರಿಗೂ ಮುಂಚೆ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ, ನಗರ ಮತ್ತು ಇನ್ನೀತರ ಕಡೆಗಳಲ್ಲಿ ಭೂಮಿ ಕಂಪನ ಆಗುತ್ತಿದೆ.  ಈ ಬಗ್ಗೆ ರಾಜ್ಯಮಟ್ಟದ ವರದಿ ನೋಡಿದ್ದು, ಯಾವುದೇ ರೀತಿಯಲ್ಲಿ ಭಯಪಡುವ ರೀತಿಯಲ್ಲಿ ಇಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ಚರ್ಚೆಯಾಗಿ ಜನರು ಭಯಪಡುವಂತಾಗಿದೆ.  ಭೂಕಂಪನದ ಬಗ್ಗೆ ಜಿಲ್ಲಾಡಳಿತವು ಗಂಭೀರವಾಗಿ ತೆಗೆದುಕೊಂಡಿದೆ.  ಜಿಲ್ಲಾಡಳಿತವು ಜನತೆಯ ಪರವಾಗಿದೆ. ಜಿಲ್ಲೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಜ್ಞಾನಿಗಳನ್ನು ಕರೆಯಿಸಿ ಉನ್ನತ ಮಟ್ಟದಲ್ಲಿ ಅಧ್ಯಯನ ನಡೆಸಲಾಗುವುದು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಭೂಕಂಪನ ಬಗ್ಗೆ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದರು. ಭೂಕಂಪನದಿAದ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯೇನಾಗಿದ್ದರೆ ಆ ಬಗ್ಗೆ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ತಿಳಿಸಿದರು.

ಭೂಕಂಪನವು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದೆ.  ಮಳೆಯ ಬಗ್ಗೆ ನಾವು ಮುಂಜಾಗ್ರತೆ ತೆಗೆದುಕೊಳ್ಳಬಹುದು.  ಆದರೆ, ಭೂಕಂಪನದ ಬಗ್ಗೆ ತಕ್ಷಣ ತಿಳಿಯುವುದಿಲ್ಲ. ಹಾಗಂತ ನಾವುಗಳು ಭಯಪಡಬೇಕಿಲ್ಲ. ವಿಜಯಪುರ ಜಿಲ್ಲೆಯು ಗಟ್ಟಿ ಶಿಲೆ ಹೊಂದಿದೆ.  ಕಡಿಮೆ ಮತ್ತು ಮಧ್ಯಮ ಪ್ರಮಾಣದಲ್ಲಿ ಭೂಕಂಪನವಾಗುವ ಪ್ರದೇಶ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.  ಆದಾಗ್ಯ ಪದೇಪದೆ ಭೂಕಂಪನವಾಗುತ್ತಿರುವುದರಿಂದ ಹೆಚ್ಚಿನ ಅಧ್ಯಯನ ಮಾಡಲು ವಿಜ್ಞಾನಿಗಳನ್ನು ಕರೆಯಿಸಿದ್ದೇವೆ. ವಿಜ್ಞಾನಿಗಳು ಮಾಹಿತಿ ನೀಡಿದ ಪ್ರಕಾರ ನಾವುಗಳು ಭಯಪಡುವಂತದ್ದೇನಿಲ್ಲ.  ಆದರೆ, ಜಾಗೃತರಾಗಿರಬೇಕು. ಭೂಕಂಪನದಂತಹ ಸಂದರ್ಭದಲ್ಲಿ ಬಯಲು ಜಾಗಕ್ಕೆ ಬಂದು ರಕ್ಷಣೆ ಮಾಡಿಕೊಳ್ಳಬೇಕು ಎಂದು ಡಾ. ವಿಜಯಮಹಾಂತೇಶ ಬಿ, ದಾನಮ್ಮನವರ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ, ಜಿಲ್ಲಾ ವಿಪತ್ತು ಘಟಕದ ಅಧಿಕಾರಿ ರಾಕೇಶ ಜೈನಾಪುರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌