Irrigation Karjol: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪಂಪಗಳ ದುರಸ್ತಿಗೆ ಕ್ರಮ: ಸಚಿವ ಗೋವಿಂದ ಎಂ. ಕಾರಜೋಳ

ವಿಜಯಪುರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪಂಪುಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಲ ಸಂಪನ್ಮೂಲ ಸಚಿವರಾದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಇಂಡಿ ತಾಲೂಕಿನ ರೈತರ ಹೊಲಗಳಿಗೆ ನೀರುಣಿಸುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಎಲ್ಲ ಆರೂ ಪಂಪುಗಳು 2015 ರಿಂದ ದುರಸ್ತಿಯಾಗದೆ ನಿಷ್ಕ್ರಿಯಗೊಂಡಿದ್ದವು. ಇದರಿಂದಾಗಿ ಕಾಲುವೆಯ ಕೊನೆ ಭಾಗಕ್ಕೆ ಹಾಗೂ ಕಾಲುವೆಯ ಬಹುತೇಕ ಪ್ರದೇಶಕ್ಕೆ ನೀರು ಪೂರೈಕೆ ಆಗದೆ ವ್ಯತ್ಯಯ ಉಂಟಾಗಿತ್ತು. ಈಗ ಆರು ಪಂಪುಗಳ ಪೈಕಿ ನಾಲ್ಕು ಪಂಪುಗಳು ದುರಸ್ತಿಯಾಗಿ ಕಾರ್ಯಾರಂಭ ಮಾಡಿವೆ. ಇನ್ನೂ ಒಂದು ಪಂಪು ಸ. 6 ರಂದು ದುರಸ್ತಿಯಾಗಿ ಯೋಜನಾ ಪ್ರದೇಶ ತಲುಪಲಿದೆ. ಸೆ. 7ರಂದು ಈ‌ ಪಂಪನ್ನು ಕೂಡಾ ಚಾಲನೆ ಮಾಡಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಪಂಪುಗಳನ್ನು ಕೇವಲ ಆರು ತಿಂಗಳಲ್ಲಿ ತ್ವರಿತಗತಿಯಲ್ಲಿ ದುರಸ್ತಿ ಮಾಡಿಸಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾರ್ಯಾರಂಭ ಮಾಡಿಸಲಾಗಿದೆ. ಈ ಪಂಪುಗಳನ್ನು ದುರಸ್ತಿ ಮಾಡಿದ ಕಂಪನಿಗೆ ಮುಂದಿನ ಐದು ವರ್ಷಗಳ ಜಾಲ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಕಂಪನಿಯು ಯೋಜನಾ ಪ್ರದೇಶದಲ್ಲಿ ತನ್ನ ಒಬ್ಬರು ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರನ್ನು ಒದಗಿಸಿ ಪಂಪುಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಜವಾಬ್ದಾರಿ ವಹಿಸಿಕೊಂಡಿದೆ. ಈಗ ಮೂರು ಪಂಪುಗಳು ಕಾರ್ಯಾರಂಭ ಮಾಡಿವೆ. ಮುಂದಿನ 15 ದಿನಗಳಲ್ಲಿ ಎಲ್ಲಾ ಆರು ಪಂಪುಗಳು ಕಾರ್ಯ ಆರಂಭ ಮಾಡುವಂತೆ ಕ್ರಮ ಕೈಗೊಳ್ಳಲು ಸಚಿವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಜಲಸಂಪನ್ಮೂಲ‌ ಸಚಿವ ಗೋವಿಂದ ಎಂ. ಕಾರಜೋಳ‌ ಅವರ ಕಚೇರಿಯ ಪ್ರಕಟಣೆ ತಿಳಿಸಲಾಗಿದೆ.

Leave a Reply

ಹೊಸ ಪೋಸ್ಟ್‌