School Ganesha: ಗಣೇಶನ ವಿಚಾರಕ್ಕೆ ಗದ್ದಲ- ಶಾಲೆಯ ಹೊರಗೆ ಪಾಠ ಕೇಳಿದ ವಿದ್ಯಾರ್ಥಿಗಳು- ಪೊಲೀಸರ ಮಧ್ಯಸ್ಥಿಕೆಯಿಂದ ಬಗೆಹರಿದ ಸಮಸ್ಯೆ

ವಿಜಯಪುರ: ಸರಕಾರಿ ಶಾಲೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ವಿಚಾರ ತಾರಕಕ್ಕೇರಿ ವಿದ್ಯಾರ್ಥಿಗಳು ಶಾಲೆಗೆ ಕೀಲಿ ಹಾಕಿ ಪ್ರತಿಭಟನೆ ಮಾಡಿದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರಿನಲ್ಲಿ ನಡೆದಿದೆ.

ಅಷ್ಟೇ ಅಲ್ಲ,ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಮರದ ಕೆಳಗಡೆ ಕುಳಿತು ಪಾಠ ಆಲಿಸಿದ್ದಾರೆ. ಯಲಗೂರು ಸರಕಾರಿ ಪ್ರೌಢ ಶಾಲೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡದೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜೊತೆ ಸೇರಿದ ಪೋಷಕರು ಕೂಡ ಪ್ರತಿಭಟನೆ ನಡೆಸಿದ್ದಾರೆ.

ಯಲಗೂರಿನ ಸರಕಾರಿ ಪ್ರೌಢ ಶಾಲೆ

ಈ ಶಾಲೆಯಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ. ಆದರೆ, ಈ ಶಾಲೆಗೆ ಏಳೆಂಟು ತಿಂಗಳ‌ ಹಿಂದೆ ವರ್ಗವಾಗಿ ಬಂದಿರುವ ಮುಖ್ಯ ಶಿಕ್ಷಕ ಎಫ್. ಆರ್. ದರ್ಗಾ ಈ ಬಾರಿ ಶಾಲೆಯಲ್ಲಿ ಗಣೇಶೋತ್ಸವ ನಿರ್ಲಕ್ಷಿಸಿದ್ದಾರೆ. ಗಣಪನ ಮೂರ್ತಿಯನ್ನು ತಂದು ಪೂಜೆ ಮಾಡದೇ ಸಂಪ್ರದಾಯ ಕೈ ಬಿಟ್ಟಿದ್ದಾರೆ. ಶಾಲೆಯಲ್ಲಿ ನಾಲ್ಕೈದು ಜನ ಶಿಕ್ಷಕರಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಮುಖ್ಯ ಶಾಲೆಗೆ ಬಂದಿದ್ದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯಲ್ಲಿ ಗಣೇಶ ವಿಚಾರವಾಗಿ ಉಂಟಾಗಿರುವ ಗದ್ದಲದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬಸವನ ಬಾಗೇವಾಡಿ ಸಿಪಿಐ ಸೋಮಶೇಖರ್ ಜುಟ್ಟಲ್ ಮತ್ತು ನಿಡಗುಂದಿ ಪಿಎಸ್ಐ ವಾಲಿಕಾರ ಅವರು, ಪ್ರತಿಭಟನಿರತ ಪೋಷಕರು ಮತ್ತು ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನ ಮಾಡಿದರು.

 

ಆದರೂ, ಪೋಷಕರು ಮತ್ತು ವಿದ್ಯಾರ್ಥಿಗಳು ಒಪ್ಪದ ಹಿನ್ನೆಲೆಯಲ್ಲಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು. ಈಗ ಉಂಟಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಇಂದೇ ಗಣೇಶನ ಮೂರ್ತಿಯನ್ನು ತಂದು ಶಾಲೆಯಲ್ಲಿ ಪ್ರತಿಷ್ಠಾಪಿಸಲು ಸಲಹೆ ನೀಡಿದರು. ಅಲ್ಲದೇ, ರಾತ್ರಿಯೇ ಗಣೇಶ ಮೂರ್ತಿಯ ವಿಸರ್ಜನೆ ಮಾಡುವಂತೆ ಸೂಚನೆ ನೀಡಿದರು.

ಶಾಲೆಗೆ ಬಂದ ಗಣಪ

ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜೊತೆಗೂಡಿ ಹೊಸದಾಗಿ ಗಣೇಶನ ವಿಗ್ರಹವನ್ನು ತಂದು ಶಾಲೆಯಲ್ಲಿ ಪ್ರತಿಷ್ಠಾಪಿಸಿದರು. ಈ ಮುಂಚೆ ಕೂಡಿಸಲಾಗುತ್ತಿದ್ದ ಸ್ಥಳದಲ್ಲಿಯೇ ದೀಪಾಲಂಕಾರ ಮಾಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.

ಇದರೊಂದಿಗೆ ಬೆಳಿಗ್ಗೆ ಒಂಬತ್ತು ಗಂಟೆಯ ಸುಮಾರಿಗೆ ಆರಂಭವಾಗಿದ್ದ ಗಣೇಶ ವಿಚಾರದ ಗಲಾಟೆಯನ್ನು ಎಲ್ಲರೂ ಸೇರಿ ಜೈ ಗಣೇಶ ಘೋಷಣೆ ಹಾಕುವ ಮುಲಕ ಸುಸೂತ್ರವಾಗಿ ಬಗೆಹರಿಸಿಕೊಂಡರು.

Leave a Reply

ಹೊಸ ಪೋಸ್ಟ್‌