Water Karjol: ಬಸವ ನಾಡು ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರಕಾರ ಬದ್ಧ: ಗೋವಿಂದ ಕಾರಜೋಳ

ಬೆಂಗಳೂರು; ಬರಪೀಡಿತ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ 2006ರಲ್ಲಿ ಪ್ರಾರಂಭವಾಗಿದೆ. 2815 ಎಚ್‌ಪಿ ಸಾಮರ್ಥ್ಯದ ಒಟ್ಟು ಎಂಟು ಪಂಪ್‌ಗಳನ್ನ ಹಾಕಿದ್ದೇವು. ಅದರಲ್ಲಿ ಐದು ಪಂಪ್‌ಗಳು 2015-16 ರಲ್ಲಿಯೇ ರಿಪೇರಿಗೆ ಬಂದಿದ್ದವು. ರೂ. 7.75 ಕೋ. ಖರ್ಚು ಮಾಡಿ 7 ಪಂಪ್‌ಗಳನ್ನ ರಿಪೇರಿ ಮಾಡಲಾಗಿದ್ದು, ಐದು ವರ್ಷ ಅದೇ ಕಂಪನಿಗಳಿಗೆ ನಿರ್ವಹಣೆಗೆ ನೀಡಿದ್ದೇವೆ. ಈಗಾಗಲೇ ನಾಲ್ಕು ಪಂಪ್‌ಗಳನ್ನು ಶುರು ಮಾಡಿದ್ದು, ಎರಡು ಪಂಪುಗಳು ಈ ತಿಂಗಳಲ್ಲಿಯೇ ಮುಗಿಯುತ್ತದೆ. ಒಟ್ಟಾರೆ ಏಳು ಪಂಪುಗಳನ್ನು ಶುರು ಮಾಡುತ್ತೇವೆ ಎಂದು ಹೇಳಿದರು.

ವಿಧಾನ ಸಭೆಯಲ್ಲಿ ಪ್ರಶ್ನೆ ಕೇಳುತ್ತಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ

ಇನ್ನು, 147 ಕಿ. ಮೀ. ವರೆಗೂ ನೀರು ಬಿಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಅದಕ್ಕೆ ತಾಂತ್ರಿಕ ಸಮಸ್ಯೆಗಳಿವೆ. 97 ಕಿ. ಮೀ. ವರೆಗೂ ನೀರು ಕೊಡುತ್ತಿದ್ದೇವೆ. 42 ಸಾವಿರ ಹೆಕ್ಟೇರ್‌ ನಷ್ಟು ನೀರಾವರಿಯನ್ನು ಮಾಡಿ ಕೊಡುತ್ತೇವೆ. ಕುಡಿಯುವ ನೀರಿಗಾಗಿಯೇ ಕೊಡುತ್ತಿದ್ದೇವೆ. ಸ್ಕಾಡಾ ಗೇಟ್ ಅಳವಡಿಸಬೇಕು ಎಂದು ಹೇಳಿದ್ದಾರೆ. ಅದನ್ನ ಆಲೋಚನೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆ ಸಣ್ಣ ಪ್ರಾಜೆಕ್ಟ್ ಅಲ್ಲ. ಅದು ರೂ. 3000 ಕೋ. ವೆಚ್ಚದ ಯೋಜನೆಯಾಗಿದೆ. ಈ ಹಿಂದೆ ಬೊಮ್ಮಾಯಿ ಅವರು ಐದು ವರ್ಷಗಳ ಹಿಂದೆ ನೀರಾವರಿ ಇಲಾಖೆಯ ಮಂತ್ರಿಯಾಗಿದ್ದಾಗ ಅದೇ ಬೇಡಿಕೆ ಇತ್ತು. ಆದರೆ, ಯಾರು ಮಾಡಿರಲಿಲ್ಲ. ಸಿಎಂ ರೂ. 3000 ಕೋ. ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ ರೂ. 770 ಕೋ. ಗೆ ಅನುಮೋದನೆ ನೀಡಿ ಟೆಂಡರ್‌ ಪ್ರಕ್ರಿಯೆ ಶುರುವಾಗಿದೆ. ಎರಡನೇ ಹಂತದ ಕಾಮಗಾರಿಗೂ ಶೀಘ್ರದಲ್ಲಿ ಟೆಂಡರ್‌ ಕರೆಯುತ್ತೇವೆ ಎಂದು ಅವರು‌ಹೇಳಿದರು.

ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ಒಂದು ಹುಲ್ಲು ಕಡ್ಡಿ ಬೆಳೆಯದ ವಿಜಯಪುರ ಜಿಲ್ಲೆಯ 57 ಹಳ್ಳಿಗಳಿಗೆ ನೀರಾವರಿಯಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಹೋಗುತ್ತದೆ. ಐದು‌ ವರ್ಷ ನಿಮ್ಮ ಹತ್ತಿರ ಸರಕಾರ ಇದ್ದರೂ ನೀವು ಏನು ಮಾಡ್ಲಿಲ್ಲ. ಕಳಕಳಿ ಕಾಳಜಿಯಿಂದ ನಮ್ಮ ಸರಕಾರ ಮಾಡುತ್ತದೆ ಎಂದು ಗೊವಿಂದ ಕಾರಜೋಳ ತಿಳಿಸಿದರು.

ಕಾರಂಜಾ ಕಾಲುವೆಯ ಮರುನವೀಕರಣ

ಕಾರಂಜಾ ಏತನೀರಾವರಿ ಯೋಜನೆಯ ಕಾಲುವೆಯ ಆಧುನೀಕರಣ ಆಗದೇ ಇರುವುದರಿಂದ ರೈತರ ಹೊಲದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಶಾಸಕ ಬಂಡೇಪ್ಪ ಕಾಶೆಂಪೂರ್‌ ಅವರ ಪರವಾಗಿ ಶಾಸಕ ವೆಂಕಟರಾವ್ ನಾಡಗೌಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, 21 ಕಿ.‌ ಮೀ. ಮುಖ್ಯ ಕಾಲುವೆಗೆ 1993-94 ರಲ್ಲಿ ಜಭಾದ್ ಸ್ಟೋನ್‌ಗಳನ್ನು ಹಾಕಿದ್ದರು. ಹೀಗಾಗಿ ನೀರು ಸರಿಯಾಗಿ ಹೋಗುತ್ತಿರಲಿಲ್ಲ. ಒಟ್ಟು ರೂ.‌ 45 ಕೋ. ಯೋಜನೆ ಇದಾಗಿದ್ದು, ಈಗಾಗಲೇ ರೂ. 32.50 ಕೋ. ಖರ್ಚು ಮಾಡಲಾಗಿದೆ. ಕೆಲ ತಿಂಗಳಲ್ಲಿ ಬಾಕಿ ಉಳಿದಿರುವುದನ್ನು ಮರುನವೀಕರಣ ಮಾಡಿಸುತ್ತೇವೆ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಪರಿಶೀಲನೆ

ಕಾರಂಜಾ ಏತ ನೀರಾವರಿ ಯೋಜನೆಯಿಂದ ಮನೆಗಳಿಗೆ ನೀರು ನುಗ್ಗುತ್ತಿದೆ. ಅವುಗಳನ್ನು ಸ್ಥಳಾಂತರ ಮಾಡಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, 1993-94ರಲ್ಲಿ ಆಗಿರುವ ಪ್ರಾಜೆಕ್ಟ್ ಇದು. ಅವತ್ತು ಸರ್ವೆ ಮಾಡಿ ಎಫ್‌ಆರ್‌ನಲ್ಲಿ ಬಂದಿರುವುದಕ್ಕೆ ಪರಿಹಾರ ಹಾಗೂ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದಾರೆ.‌‌ ಈಗ ಹೆಚ್ಚುವರಿ ನೀರು ಬರುತ್ತಿದೆ. ನೀರು ಹೆಚ್ಚು ಬರುತ್ತಿದ್ದರೆ ಖಂಡಿತವಾಗಿಯೂ ಸರಕಾರ ಅದನ್ನ ಪರಿಶೀಲನೆ ಮಾಡುತ್ತದೆ. ಮನೆಯೊಳಗೆ ನೀರು ನುಗ್ಗಿದರೆ ಪರಿಹಾರವಾಗಿ ರೂ. 10 ಸಾವಿರ ನೀಡುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಆ ಗ್ರಾಮ ಪೂರ್ಣ ಸ್ಥಳಾಂತರ ಮಾಡ್ಬೇಕಾದರೆ ಅವತ್ತು ಸರ್ವೇ ಮಾಡಿದ್ದಾರೆ. ಸರ್ವೆ ಮಾಡಿ ನೀರು ಎಲ್ಲಿವರೆಗೂ ಹೋಗಿದೆ ಎನ್ನುವ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಆ ರೀತಿಯಾಗಿ ಗ್ರಾಮಕ್ಕೆ ಗ್ರಾಮವೇ ಮುಳುಗಡೆಯಾಗಿ ಬಿಟ್ಟು ಹೋಗಿರುವ ಪ್ರಸಂಗ ದೇಶದ ಇತಿಹಾಸದಲ್ಲೇ ಇಲ್ಲ. ಮಳೆ ಹೆಚ್ಚಾಗಿರುವುದರಿಂದ ನೀರು ಹೆಚ್ಚಾಗಿ ಬಂದಿರಬಹುದು. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿ ಪರಿಶೀಲಿಸುತ್ತೇವೆ ಎಂದು ಜಲಸಂಪನ್ಮೂಲ‌ ಸಚಿವರು‌ ತಿಳಿಸಿದತು.

ಅನುದಾನದ ಲಭ್ಯತೆ ಆಧಾರದ ಮೇಲೆ ಬ್ರಿಡ್ಜ್‌ ಕಂ ಬ್ಯಾರೇಜ್‌

ಚಳ್ಳಕೆರೆಯ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ವಿಚಾರವಾಗಿ ಶಾಸಕ ರಘುಮೂರ್ತಿ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, ಬಜೆಟ್‌ನಲ್ಲಿ ರೂ.‌ 25 ಕೋ. ಅನುದಾನವನ್ನು ಘೋಷಣೆ ಮಾಡಿರಲಿಲ್ಲ. ಬಜೆಟ್ ಭಾಷಣದಲ್ಲಿ ಘೋಷಣೆ ಆಗಿರುವ ಯೋಜನೆ ಇದು. ನಾವು ತಾರತಮ್ಯ ಮಾಡುವ ಪ್ರಶ್ನೆ ಇಲ್ಲ. ಬ್ರಿಡ್ಜ್ ಕಂ ಬ್ಯಾರೇಜ್ ತೆಗೆದುಕೊಳ್ಳಬೇಕು‌ ಎಂಬುದಕ್ಕೆ ನಮಗೂ ಸಹಮತವಿದೆ. ನಮ್ಮ ಇಲಾಖೆಗೆ ಪ್ರತಿ ವರ್ಷ ಬಜೆಟ್‌ನಲ್ಲಿ ರೂ. 18 ರಿಂದ ರೂ. 19 ಸಾವಿರ ಕೋ.‌ ಅನುದಾನ ಸಿಗುತ್ತಿದೆ. ನಮ್ಮ ಇಲಾಖೆಗೆ ಕಾರ್ಯಭಾರ ಇರುವಂತದ್ದು, ರೂ.‌ 1 ಲಕ್ಷದ 2 ಸಾವಿರ ಕೋಟಿಗಿಂತ ಹೆಚ್ಚಿದೆ. ಪ್ರತಿ ವರ್ಷ ಘೋಷಣೆ ಮಾಡುತ್ತ ಹೋಗಿದ್ದಾರೆ. ಪ್ರತಿ ವರ್ಷವೂ ಅದರ ವೆಚ್ಚ ಹೆಚ್ಚಾಗುತ್ತಿದೆ‌. ಹೀಗಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ತೆಗೆದುಕೊಳ್ಳಬೇಕು ಎಂಬ ಉದ್ದೇಶ ಇದೆ. ಯಾವುದೇ ತಾರತಮ್ಯ ಮಾಡಬೇಕು ಎಂಬ ಉದ್ದೇಶ ಇಲ್ಲ ಎಂದು ಅವರು ಹೇಳಿದರು.

ಗುಂಡಾಲ್‌ ಜಲಾಶಯದ ದುರಸ್ತಿಗೆ ಕ್ರಮ

ಚಾಮರಾಜಪೇಟೆಯ ಗುಂಡಾಲ್‌ ಜಲಾಶಯದ ನಿರ್ವಹಣೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಶಾಸಕ ಆರ್ ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಂಡಾಲ್‌ ಜಲಾಶಯ 1980ರಿಂದ ಇಲ್ಲಿಯವರೆಗೂ ನಾಲ್ಕೇ ಸಲ ಭರ್ತಿಯಾಗಿದೆ. ಹೀಗಾಗಿ ಕಾಲುವೆಗಳು ದುರಸ್ತಿಯಾಗದೇ ಅವ್ಯವಸ್ಥೆ ಆಗಿರುವುದು ನಿಜ. ಆದರೂ ಕೂಡ ಪ್ರತಿ ವರ್ಷ ಅನುದಾನ ನೀಡಿದ್ದೇವೆ. ಅಷ್ಟು ಸಾಕಾಗುತ್ತಿಲ್ಲ ಎಂದು ಹೇಳಿದ್ದಾರೆ. ಖಂಡಿತವಾಗಿಯೂ 15 ಸಾವಿರ ಎಕರೆಗೆ ನೀರಾವರಿ ಆಗುವಂಥ ಜಲಾಶಯ ಅದು, ಅದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನ ಸಭೆಯಲ್ಲಿ ಮಾಹಿತಿ ನೀಡಿದರು.

Leave a Reply

ಹೊಸ ಪೋಸ್ಟ್‌