Muruga Seer Yatnal: ಮುರುಘಾ ಶ್ರೀ ಪೀಠತ್ಯಾಗ ಮಾಡಲಿ- ಮಠದ ನಿರ್ವಹಣೆಗೆ ತಾತ್ಕಾಲಿಕ ಸಮಿತಿ ರಚಿಸಲಿ- ಮುಖ್ಯ ನ್ಯಾಯಮೂರ್ತಿ, ಕಂದಾಯ ಇಲಾಖೆಗೆ ಯತ್ನಾಳ ಪತ್ರ

ವಿಜಯಪುರ: ಚಿತ್ರದುರ್ಗ ಮುರುಘಾ ಶ್ರೀಗಳನ್ನು ಪೀಠ ತ್ಯಾಗ ಮಾಡಲು ನಿರ್ದೇಶಿಸಬೇಕು ಮತ್ತು ಮಠದ ಆಡಳಿತ ನಿರ್ವಹಣೆಗೆ ವೀರಶೈವ ಲಿಂಗಾಯಿತ ಸಮಾಜಕ್ಕೆ ಸೇರಿದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟಿನ ನಿವೃತ್ತ ನ್ಯಾಯಯಮೂರ್ತಿಗಳ ನೇತೃತ್ವದಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಸಮಿತಿ ರಚಿಸಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಪತ್ರದ ಪ್ರತಿ ಈಗ ವೈರಲ್ ಆಗಿದೆ.

ಈ ಪತ್ರದ ಪ್ರತಿ ಬಸವ ನಾಡು ವೆಬ್ ಗೆ ಲಭ್ಯವಾಗಿದ್ದು, ಅದರ ಸಂಪೂರ್ಣ ಸಾರಾಂಶ ಇಂತಿದೆ. 

ಮಾನ್ಯರೇ,

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಶರಣರನ್ನು ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ 2022ರ ಸೆಪ್ಟೆಂಬರ್ 1 ರಂದು ಪೊಲೀಸರು ಬಂಧಿಸಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  ಕಾರಣ ಅವರು ಕೂಡಲೇ ಪೀಠತ್ಯಾಗ ಮಾಡಲು ನಿರ್ದೇಶಿಸಬೇಕು ಮತ್ತು ಶ್ರೀಮಠದ ಸಮಸ್ತ ಆಡಳಿತ ಹಾಗೂ ದೈನಂದಿನ ವ್ಯವಹಾರಗಳ ಸುಗಮ ಕಾರ್ಯ ಚಟುವಟಿಕೆಗಳಿಗೆ ಅನುವಾಗುವಂತೆ ವೀರಶೈವ- ಲಿಂಗಾಯಿತ ಸಮಾಜಕ್ಕೆ ಸೇರಿದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ಥಿ ಅಥವಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಾತ್ಕಾಲಿಕವಾಗಿ ಮೇಲುಸ್ತುವಾರಿ ಸಮಿತಿ ರಚಿಸಲು ವ್ಯವಸ್ಥೆ ಮಾಡಬೇಕು ಎಂದು ಈ ಮೂಲಕ ಪ್ರಾರ್ಥನೆ ಮಾಡುತ್ತೇನೆ.

ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ(ಎಸ್‌ ಜೆ ಎಂ) ಬೃಹನ್ಮಠ ಐತಿಹಾಸಿಕ ವಿರಕ್ತ ಪರಂಪರೆಯ ಶೂನ್ಯಪೀಠದ ಅಗ್ರಗಣ್ಯ ಮಠವಾಗಿದ್ದು, ಇದರ ಹಾಲಿ ಪೀಠಾಧ್ಯಕ್ಷ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮಠದ ಅನಾಥಾಲಯದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಜೈಲು ಪಾಲಾಗಿ ನ್ಯಾಯಾಂಗ ವಿಚಾರಣೆ ಎದುರಿಸುತ್ತಿರುವುದು ಸಮಸ್ತ ವೀರಶೈವ- ಲಿಂಗಾಯಿತ ಸಮಾಜಕ್ಕೆ ದೊಡ್ಡ ಅವಮಾನಕರ ಸಂಗತಿಯಾಗಿರುತ್ತದೆ.

ಯತ್ನಾಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದಿರುವ ಪತ್ರದ ಪ್ರತಿ

ಈ ಪ್ರಕರಣ ಸದ್ಯ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ಕೋರ್ಟ್ ಮುಂದಿರುವ ಕಾರಣ ಮತ್ತು ಇಂಥ ಹೀನ ಅಪರಾಧದಲ್ಲಿ ಆರೋಪ ಎದುರಿಸುತ್ತಿರುವ ಶ್ರೀ ಶಿವಮೂರ್ತಿ ಮುರುಘಾ ಶರಣರು ಪೀಠದಲ್ಲಿ ಮುಂದುವರಿಯುವುದು ಶ್ರೀಮಠದ ಘನ ಪರಂಪರೆಗೆ ಕಳಂಕ ತರುವಂಥ ಸಂಗತಿಯಾಗಿರುತ್ತದೆ  ಆದ್ದರಿಂದ, ಶ್ರೀ ಶಿವಮೂರ್ತಿ ಶರಣರು ಈ ಕೂಡಲೇ ಸ್ವಇಚ್ಛೆಯಿಂದ ಪೀಠತ್ಯಾಗ ಮಾಡಬೇಕು.  ಇಲ್ಲವಾದಲ್ಲಿಅವರನ್ನು ಪದಚ್ಯುತಗೊಳಿಸುವ ಕಾನೂನುಬದ್ಧ ಪ್ರಕ್ರಿಯೆಗೆ ನಾಡಿನ ಭಕ್ತ ಸಮೂಹ ಮುಂದಾಗಲು ನಿರ್ದೇಶಿಸಬೇಕೆಂದು ಪ್ರಾರ್ಥಿಸುತ್ತೇನೆ.

ಅಂತೆಯೇ, ಶ್ರೀ ಶಿವಮೂರ್ತಿ ಮುರುಘಾ ಶರಣರು ಸದ್ಯ ಜೈಲಿನಲ್ಲಿರುವ ಕಾರಣ ಶ್ರೀಮಠದ ಸಮಸ್ತ ಆಡಳಿತ ಚಟುವಟಿಕೆಯು ಅಸ್ತವ್ಯಸ್ತಗೊಂಡಿರುತ್ತದೆ.  ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠದ ಹಾಲಿ ಕಾರ್ಯದರ್ಶಿ ಶ್ರೀ ವಸ್ತ್ರದಮಠ ಅವರು ಶಿವಮೂರ್ತಿ ಮುರುಘಾ ಶರಣರ ಏಕಪಕ್ಷೀಯ ನೇಮಕವಾಗಿರುತ್ತದೆ.  ಇವರ ನೇಮಕದಿಂದ ಸ್ಥಳೀಯ ಭಕ್ತ ಸಮೂಹ ಅಸಮಾಧಾನಗೊಂಡಿದ್ದಾರೆಂಬ ವಿಚಾರವನ್ನು ತಮ್ಮ ಆದ್ಯ ಅವಗಾಹನೆಗೆ ತರಬಯಸುತ್ತೇನೆ.

ಈಗಿನ ಸಂದಿಗ್ದ ಸಮಯದಲ್ಲಿ ಶ್ರೀಮಠದ ಸಾವಿರಾರು ನೌಕರರು ಸಂಬಳ- ಸಾರಿಗೆಯ ಖರ್ಚಿಗಾಗಿ ಮತ್ತು ಜೀವನ ನಿರ್ವಹಣೆಗಾಗಿ ತೀವ್ರ ತಂದರೆ ಅನುಭವಿಸುತ್ತಿದ್ದಾರೆ.  ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಬ್ಯಾಂಕುಗಳು ಸೇರಿದಂತೆ ಎಸ್ ಜೆ ಎಂ ವಿದ್ಯಾಸಂಸ್ಥೆಯ ಅಧೀನದಲ್ಲಿ ರಾಜ್ಯದ ನಾನಾ ಕಡೆ ಇರುವ ನೂರಾರು ಘಟಕಗಳ ನಿತ್ಯದ ಆಡಳಿತಕ್ಕೆ ಪಾರ್ಶ್ವವಾಯು ಹೊಡೆದಂತಾಗಿರುತ್ತದೆ.  ಶ್ರೀಮಠದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರೂಪಯೋಗವಾಗುವ ಸಾದ್ಯತೆ ಇರುತ್ತದೆ.

ಯತ್ನಾಳ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿ

ಈ ಕಾರಣಗಳಿಂದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಸಮಸ್ತ ವ್ಯವಹಾರದ ಸುಗಮ ಆಡಳಿತ ನಿರ್ವಹಣೆಗಾಗಿ ವೀರಶೈವ- ಲಿಂಗಾಯತ ಸಮಾಜಕ್ಕೆ ಸೇರಿದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವೀರಶೈವ- ಲಿಂಗಾಯಿತ ಸಮಾಜದ ಐವರು ಪ್ರಮುಖರ ಉನ್ನದ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ಕೂಡಲೇ ನೇಮಿಸಲು ಈ ಮೂಲಕ ಕೋರಿಕೆ.

ಈ ಸಮಿತಿಯು ಶ್ರೀ ಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಗತ್ಯವಾದ ನಿರ್ಧಾರ ಕೈಗೊಳ್ಳಲು ತಾತ್ಕಾಲಿಕ ಅಧಿಕಾರ ಹೊಂದಿರಬೇಕು.  ಮೂರು ತಿಂಗಳ ಒಳಗಾಗಿ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈ ಸಮಿತಿಯೇ ನೆರವೇರಿಸಬೇಕು.  ಈ ಕುರಿತು ಸಮಿತಿ ಕೈಗೊಳ್ಳುವ ಎಲ್ಲ ಕಾನೂನು ರೀತ್ಯಾ ತೀರ್ಮಾನಕ್ಕೆ ಮಠದ ಸಮಸ್ತ ಸಮೂಹ ಬದ್ಧವಾಗಿರತಕ್ಕದ್ದು ಎಂದು ನಿರ್ದೇಶಿಸಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ,

ಬಸನಗೌಡ ರಾ. ಪಾಟೀಲ(ಯತ್ನಾಳ)

 

 

Leave a Reply

ಹೊಸ ಪೋಸ್ಟ್‌