Dasara President: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ- ಕನ್ನಡ ನಾಡನ್ನುಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿರಬೇಕು‌ ಎಂದ ಸಿಎಂ

ಮೈಸೂರು:: ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಚಾಲನೆ ನೀಡಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ 2022ರ ದಸರಾ ಮಹೋತ್ಸವ ರಾಷ್ಟ್ರಪತಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಎಸ್. ಟಿ. ಸೋಮಶೇಖರ್ ಹಾಗೂ ವಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.

ಕನ್ನಡ ನಾಡನ್ನು ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿಸಬೇಕು ಎಂದ ಸಿಎಂ

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು ಎಂದು ಹೇಳಿದರು.

ಸರ್ವರಿಗೂ ಲೇಸನ್ನು ಬಯಸುವ ಕಲ್ಯಾಣದ ಚಿಂತನೆ

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕಟ್ಟುವ ಕೆಲಸ ಮಾಡಬೇಕಿದೆ. ನಮ್ಮಲ್ಲಿರುವ ಬಡ ಜನರ ಬದುಕನ್ನು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಸರ್ವರಿಗೂ ಲೇಸನ್ನು ಬಯಸುವ ಕಲ್ಯಾಣದ ಚಿಂತನೆಯ ಅವಶ್ಯಕತೆ ಇದೆ. ಅಂಥ ಸದ್ಭುದ್ಧಿ ನೀಡಿ, ಕನ್ನಡ ನಾಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿ ಎಂದು ಸಿಎಂ ಹೇಳಿದರು.

 

ಗತವೈಭವವನ್ನು ನೆನೆಪಿಸುವ ಅದ್ದೂರಿ ದಸರಾ

ಈ ಬಾರಿ ದಸರಾ ಹಲವಾರು ವಿಶೇಷತೆಗಳಿಂದ ಕೂಡಿವೆ. ಕಳೆದ ಎರಡು ವರ್ಷಗಳಿಗಿಂತ ಅರ್ಥಪೂರ್ಣವಾಗಿ, ಗತವೈಭವವನ್ನು ನೆನೆಪಿಸುವ ರೀತಿಯಲ್ಲಿ ಅದ್ದೂರಿಯಾಗಿ ನಾವೆಲ್ಲರೂ ಒಟ್ಟಾಗಿ ಆಚರಣೆ ಮಾಡುತ್ತಿದ್ದೇವೆ.ದಸರಾ ದಸರಾ ನಾಡ ಹಬ್ಬ. ನಮ್ಮ ನಾಡಿನ ದುಡಿಯುವ ವರ್ಗದ ಕಾರ್ಮಿಕರು, ರೈತರು, ಸಾಮಾನ್ಯ ಜನರು ಮನೆ, ಮನೆಯಲ್ಲಿ ದಸರಾ ಆಚರಿಸಲಾಗುತ್ತಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ನಾಡಿನ ಅಭಿವೃದ್ಧಿ, ಸಮೃದ್ಧಿ, ಸುಭಿಕ್ಷೆಯಿಂದ ಇಡಲು ನಾವು ಪ್ರಾರ್ಥಿಸಬೇಕು. ಸದಾ ಕಾಲ ಆ ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ಕಾಲಕಾಲಕ್ಕೆ ಮಳೆ, ಬೆಳೆ ಕೊಟ್ಟು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಶಕ್ತಿಯ ಆಶೀರ್ವಾದ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ತಾಯಿಯ ಶಕ್ತಿ ಪೀಠ ಇಡೀ ನಾಡಿಗೆ ಶಕ್ತಿ ನೀಡುತ್ತಿದೆ. ಅದರ ಫಲವಾಗಿ ಮೈಸೂರು ಮಹಾರಾಜರ ಕಾಲದಿಂದ ಈ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ನಂತರವೂ ಮುಂದುವರೆಸಲಾಗುತ್ತಿರುವುದು ಒಂದು ವೈಶಿಷ್ಟ್ಯ ಎಂದು ಅವರು ಹೇಳಿದರು.

 

ಗತಕಾಲದ ವೈಭವದ ಜೊತೆಗೆ ಪ್ರಸ್ತುತ ಕಾಲದ ಕನ್ನಡ ನಾಡಿನ ಶ್ರೇಯೋಭಿವೃದ್ಧಿ ಅಷ್ಟೇ ಮುಖ್ಯ. ಇಂದಿನ ಹತ್ತು ಹಲವಾರು ನೈಸರ್ಗಿಕ ಸವಾಲುಗಳನ್ನು, ನಾವು ಸಮರ್ಥವಾಗಿ ಎದುರಿಸಿ ಜನಕಲ್ಯಾಣದ ಕಡೆ ದಾಪುಗಾಲು ಹಾಕುತ್ತಿದ್ದೇವೆ. ನಾಡದೇವಿ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2022ರ ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮ ನೆರವೇರಿಸಿರುವುದು ಸಂತೋಷದ ಹಾಗೂ ಅತ್ಯಂತ ಅಪರೂಪದ ಘಟನೆ. ಇತ್ತೀಚಿನ ದಿನಗಳಲ್ಲಿ ರಾಷ್ಟಪತಿಯೊಬ್ಬರು ದಸರಾ ಉದ್ಘಾಟನೆ ಮಾಡಿರುವ ಉದಾಹರಣೆ ಇಲ್ಲ. ಅವರಿಗೆ ಆಹ್ವಾನ ನೀಡಿದ ಕೂಡಲೇ ಒಪ್ಪಿಗೆ ಸೂಚಿಸಿ, ರಾಷ್ಟಪತಿಯಾದ ನಂತರ ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯಮಂತ್ರಿ ತಿಳಿಸಿದರು.

ಅದರಲ್ಲಿಯೂ ತಾಯಿ ಚಾಮುಂಡೇಶ್ವರಿ ಪೂಜೆ ಮಾಡುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ. ಇಷ್ಟು ಶ್ರದ್ಧೆ ಭಕ್ತಿ ಇರುವ ಅವರು ರಾಷ್ಟದ ಶ್ರೇಯಸ್ಸಿಗೆ ನಮನ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.

ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಮೊದಲಿನಿಂದಲೂ ಬಂದಿದೆ. ಆದರೆ ನಮ್ಮೊಳಗಿನ ಅವಗುಣಗಳ ನಿಗ್ರಹವನ್ನು ಆತ್ಮಸಾಕ್ಷಿಯಾಗಿ ನಾವೇ ಮಾಡಿಕೊಳ್ಳುವುದು ಹಾಗೂ ನಮ್ಮ ಆತ್ಮಶುದ್ದೀಕರಣ ಮಾಡುವ, ದುಷ್ಟ ವಿಚಾರಗಳನ್ನು ದೂರವಿಡುವ , ಉತ್ತಮ ವಿಚಾರಗಳಿಗೆ ಪುರಸ್ಕಾರ ನೀಡಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವ ಪವಿತ್ರ ದಿನ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮೈಸೂರು ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ, ಸಚಿವ ಸುನಿಲಕುಮಾರ, ಸಂಸದ ಪ್ರತಾಪಸಿಂಹ, ಶಾಸಕರಾದ ರಾಮದಾಸ, ತನ್ವೀರ ಸೇಠ, ನಾಗೇಂದ್ರ ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌