Congress Jigajinagi: ದೇಶ ಒಡೆದ ಕಾಂಗ್ರೆಸ್ಸಿನಿಂದ ಸಣ್ಣ ಹುಡುಗನನ್ನು ಕರೆದುಕೊಂಡು ಭಾರತ ಜೋಡೋ ಯಾತ್ರೆ- ರಮೇಶ ಜಿಗಜಿಣಗಿ

ವಿಜಯಪುರ: ಕಾಂಗ್ರೆಸ್ ದೇಶ ಒಡೆದಿದೆ.  ಈಗ ಸಣ್ಣ ಹುಡುಗನನ್ನು ಕರೆದುಕೊಂಡು ಭಾರತ ಜೋಡೋ ಯಾತ್ರೆ ನಡೆಸುತ್ತಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದ್ದಾರೆ.

ವಿಜಯಪುರ ನಗರದ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಸಭಾಂಗಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಲಾಗಿದ್ದ ಜಿಲ್ಲಾ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ 70 ವರ್ಷ ದೇಶವನ್ನು ಲೂಟಿ ಮಾಡಿ ಸತ್ಯಾನಾಶ ಮಾಡಿ ಈಗ ನಾಟಕವಾಡುತ್ತಿದೆ.   ಆದರೂ ಮುಗ್ದ ದಲಿತ ಬಾಂಧವರು ಕಾಂಗ್ರೆಸ್ ಬೆನ್ನು ಹತ್ತಿದ್ದಾರೆ.  ಕೇವಲ ಚುನಾವಣೆ ಬಂದಾಗ ದಲಿತರನ್ನು ನೆನಪು ಮಾಡಿಕೊಳ್ಳುತ್ತದೆ.  ಯಾವ ದಲಿತರಿಗೂ ಉಳುಮೆ ಮಾಡಲು ಒಂದು ಇಂಚು ಜಮೀನು ನೀಡಿಲ್ಲ.  ಸಂವಿಧಾನ ರಚಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮಾಧಿಗೆ ಜಾಗ ಸಹ ನೀಡಲಿಲ್ಲ.  ಆದರೆ, ಡಾ. ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದಂತೆ ಪಂಚ ಕ್ಷೇತ್ರಗಳನ್ನು ಬಿಜೆಪಿ ಸರಕಾರ ಅಭಿವೃದ್ಧಿ ಪಡಿಸಿದೆ.  ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು.  ಈ ವಿಷಯವಾಗಿ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಅವರು ಹೇಳಿದರು.

ದೇಶ ವಿರೋಧಿಗಳನ್ನು, ಬಾಂಬ್ ಹಾಕುವವರನ್ನು ಬಿಡಲು ಸಾಧ್ಯವೇ? ಈ ಕಾರಣಕ್ಕೆ ಪಿಎಫ್ ಐ ಬ್ಯಾನ್ ಮಾಡಲಾಗಿದೆ.  ನನ್ನ ತಂದೆ, ಅಜ್ಜ ಎಂಎಲ್‍ಎ ಇರಲಿಲ್ಲ್ಲ.  ನನ್ನ ಕುಟುಂಬ ಒಂದು ರೀತಿ ಝಿರೋ ಇತ್ತು.  ಆದರೆ ನಾನು ಕಂಬಳಿ ಹೊತ್ತು ಮಲಗಲಿಲ್ಲ.  ಜಯಪ್ರಕಾಶ ನಾರಾಯಣ ಅವರು ತುರ್ತು ಪರಿಸ್ಥಿತಿ ವಿರೋಧಿಸುವಂತೆ ಯುವಕರಿಗೆ ಕರೆ ನೀಡಿದರು.  ಆಗ ಅದರಿಂದ ಪ್ರೇರಣೆ ಪಡೆದು ಈ ಸ್ಥಾನಕ್ಕೆ ಬಂದಿದ್ದೇನೆ.  ಪ್ರತಿಯೊಬ್ಬರಿಗೂ ಸ್ಪೂರ್ತಿ ಅಗತ್ಯ.  ಈಗ ಯುವಕರಿಗೆ ಮೋದಿ ಪ್ರೇರಣೆಯಾಗಿದ್ದಾರೆ.  ಮೋದಿಜಿ ಆಡಳಿತ ನಡೆಸಿದ ಎಂಟು ವರ್ಷಗಳಲ್ಲಿಯೇ ಜಗತ್ತಿನ ನಾಯಕರಾಗಿ, ವಿಶ್ವದ ನಾಯಕರಿಗೆ ಪ್ರೇರಣೆಯಾಗಿದ್ದಾರೆ.  ಪ್ರತಿ ನಿತ್ಯ ಬೇರೆ ಬೇರೆ ದೇಶದ ಪ್ರಧಾನಿಗಳು ಭಾರತಕ್ಕೆ ಬರುತ್ತಿದ್ದಾರೆ ಎಂದು ಸಂಸದರು ಹೇಳಿದರು.

ಕಾಂಗ್ರೆಸ್ ನಾಯಕರು ಕೋವಿಡ್ ಕಾಲಘಟ್ಟದಲ್ಲಿ ಅಧಿಕಾರದಲ್ಲಿದ್ದರೆ ಇಡೀ ದೇಶದಲ್ಲಿ ಹೆಣಗಳು ಬೀಳುತ್ತಿದ್ದವು.  ಆದರೆ, ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ನಿವಾಸಿಗಳಿಗೂ ವ್ಯಾಕ್ಸೀನ್ ನೀಡುವ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾಧ್ಯವಾಗದ ಕೋವಿಡ್ ಲಸಿಕಾ ಅಭಿಯಾನ ಭಾರತದಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ.  ಮೋದಿ ಅವರ ಸಮರ್ಥ ನಾಯಕತ್ವ ಇದಕ್ಕೆಲ್ಲ ಕಾರಣ ಎಂದು ರಮೇಶ ಜಿಗಜಿಣಗಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಅಣುಬಾಂಬ್ ದಾಳಿಗೆ ಸಿಲುಕಿ ಸಂಪೂರ್ಣವಾಗಿ ಹಾಳಾಗಿದ್ದ ಜಪಾನ್ ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ಮಿಂಚಿತು.  ಆದರೆ, ಕಾಂಗ್ರೆಸ್ ಆಡಳಿತದಿಂದಾಗಿ ಭಾರತ ಪ್ರಗತಿ ಕಾಣಲಿಲ್ಲ.  ಸಂಪದ್ಭರಿತ ರಾಷ್ಟ್ರವಾಗಿದ್ದರೂ ಕೂಡ ಕಾಂಗ್ರೆಸ್ಸಿನ ಇಚ್ಚಾಶಕ್ತಿ ಕೊರತೆಯಿಂದ ಭಾರತೀಯರು ಬಡವರಾಗಿ ಉಳಿಯಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಕೇಂದ್ರ ಸರಕಾರದಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಅತೀ ಹೆಚ್ಚು ಸಚಿವ ಸ್ಥಾನ ನೀಡಿದ್ದು ಬಿಜೆಪಿ.  ಹಿಂದುಳಿದ ವರ್ಗಗಳ ನೈಜ ಕಲ್ಯಾಣವನ್ನು ಬಯಸುವ ಏಕೈಕ ಪಕ್ಷ ಬಿಜೆಪಿ.  ಕಲಬುರ್ಗಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಬೃಹತ ಸಮಾವೇಶ ಸಂಘಟಿಸಲಾಗುತ್ತಿದ್ದು, 10 ಲಕ್ಷ ಜನರು ಪಾಲ್ಗೊಳ್ಳಲಿರುವ ಈ ಸಮಾವೇಶ ರಾಜ್ಯ ರಾಜಕಾರಣದ ದಿಕ್ಸೂಚಿಯಾಗಿದೆ.  ವಿಜಯಪುರ ಜಿಲ್ಲೆಯಿಂದ 50 ಸಾವಿರ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ರಾಜ್ಯ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ, ಮುಖಂಡರಾದ ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ವಿಜಯ ಜೋಶಿ, ಶಂಕರ ಕುಂಬಾರ, ಭರತ ಕೋಳಿ ಮುಂತಾದವರು ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಮತ್ತು ಜಿ. ಪಂ. ಮಾಜಿ ಸದಸ್ಯ ಸಾಬು ಮಾಶ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಮೋದ ಬಡಿಗೇರ ಸ್ವಾಗತಿಸಿದರು.  ರವಿ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌