Power MBP: ಬಸವ ನಾಡಿನಲ್ಲಿ 180 ಹಳ್ಳಗಳಿಗೆ ನೀರು ಹರಿಸಿ ಪ್ರತಿ 500 ಮೀ. ಗೊಂದರಂತೆ ಚೆಕ್ ಡ್ಯಾಂ ನಿರ್ಮಾಣ- ಅಧಿಕಾರಕ್ಕೆ ಬಂದ ಮೇಲೆ ಯೋಜನೆಗೆ ಚಾಲನೆ- ಎಂ. ಬಿ. ಪಾಟೀಲ

ವಿಜಯಪುರ: ಜಿಲ್ಲೆಯಲ್ಲಿ 180 ಹಳ್ಳಗಳಿಗೆ ನೀರು ಹರಿಸಿ, ಪ್ರತಿ 500 ಮೀ. ಒಂದರಂತೆ ಚೆಕ್ ಡ್ಯಾಂ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಬಂದ ಮೇಲೆ ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಏರ್ಪಡಿಸಿದ್ದ ರೈತ ಸಂಭ್ರಮ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಗಳ ಕುರಿತು ಸಮೀಕ್ಷೆ ನಡೆಸಿ, ಡಿಸೆಂಬರ್ ಅಥವಾ ಜನವರಿಯಲ್ಲಿ ರೈತರ ಬೃಹತ್ ಸಮಾವೇಶ ನಡೆಸಿ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ರೈತ ಸಂಭ್ರಮ ಸಮಾವೇಶವನ್ನು ಎಂ. ಬಿ. ಪಾಟೀಲ, ಸ್ವಾಮೀಜಿಗಳು ಉದ್ಘಾಟಿಸಿದರು

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ನಮ್ಮವರು, ಬೇರೆಯವರು ಎಂದು ಬೇಧ-ಭಾವ ಮಾಡದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರು ಸೇರಿದಂತೆ 4000 ಕೊಳವೆ ಭಾವಿ ಕೊರೆಯಿಸಿದ್ದೇವೆ. ಐದು ವರ್ಷದಲ್ಲಿ ರಾಜ್ಯದಲ್ಲಿ ನೀರಾವರಿಗೆ ರೂ. 50 ಸಾವಿರ ಕೋಟಿ ಖರ್ಚು ಮಾಡುವ ಗುರಿ ಇತ್ತು. ಆದರೆ, ರೂ. 58 ಸಾವಿರ ಕೋಟಿ ನೀರಾವರಿಗೆ ವೆಚ್ಚ ಮಾಡಿದ್ದೇವೆ. ರಾಜ್ಯದಲ್ಲಿಯೇ ಹೋಬಳಿಯೊಂದಕ್ಕೆ ಅತ್ಯಧಿಕ ರೂ. 3600 ಕೋ. ವೆಚ್ಚದಲ್ಲಿ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಮೂಲಕ ತಿಕೋಟಾ, ಜಮಖಂಡಿ ಮತ್ತು ಅಥಣಿ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿದ್ದೇವೆ. ಇದರಿಂದ ಒಂದು ಕಾಲದಲ್ಲಿ ಉದ್ಯೋಗವಿಲ್ಲದೆ ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಿದ್ದ ಸಮುದಾಯಗಳು ಈಗ ಜಗಳ ಬಿಟ್ಟು ಕೃಷಿಯಲ್ಲಿ ತೊಡಗಿವೆ. ಈ ವಿಷಯವನ್ನು ಆ ಸಮುದಾಯದವರೇ ನಮಗೆ ಹೇಳಿದ್ದಾರೆ ಎಂದರು.

ಈ ಮುಂಚೆ ತಿಕೋಟಾ ತಾಲೂಕಿನ ಎತ್ತರದ ಪ್ರದೇಶಕ್ಕೆ ನೀರಾವರಿ ಯೋಜನೆ ಮೂರ್ಖನ ಕನಸು ಎಂದು ಕೆಲವರು ವ್ಯಂಗ್ಯವಾಡಿದ್ದರು. ಈಗ ಆ ಭಾಗಕ್ಕೆ ನೀರು ಬಂದಿದೆ. ಅಂದು ಮುರ್ಖನ ಕನಸು ಎಂದು ಹೇಳಿದವರೇ ಮೂರ್ಖರಾಗಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಪರಿಣಾಮ ಕಬ್ಬು ಉತ್ಪಾದನೆ ಪ್ರದೇಶ ಹೆಚ್ಚಾಗಿದ್ದು, ನೆರೆ ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಲಾಭವಾಗಿದೆ. ಕಬ್ಬು ನುರಿಸುವ ಹಂಗಾಮಿನಲ್ಲಿ ಎರಡು ತಿಂಗಳು ಹೆಚ್ಚುವರಿಯಾಗಿ ಸಕ್ಕರೆ ಉತ್ಪಾದಿಸಿದ್ದಾರೆ. ಇದನ್ನು ಸಚಿವ ಮುರುಗೇಶ ನಿರಾಣಿ ಮತ್ತು ಶಾಸಕ ಆನಂದ ನ್ಯಾಮಗೌಡ ಸಂತಸದಿಂದ ಹೇಳಿದ್ದಾರೆ. ವಿಜಯಪುರ ಜಿಲ್ಲೆಯನ್ನು ಮಹಾರಾಷ್ಟ್ರದ ಬಾರಾಮತಿಗಿಂತಲೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

ನಾಗಠಾಣ ಭಾಗದಲ್ಲಿ 16 ಕೆರೆಗಳನ್ನು ತುಂಬಿಸಿದರೆ ಇಡೀ ಜಿಲ್ಲೆಯ ಬಹುತೇಕ ನೀರಾವರಿಯಾಗಲಿದೆ. ಆದರೆ, ಅದಕ್ಕೆ ಕೆಲವರು ಎಂ. ಬಿ. ಪಾಟೀಲರಿಗೆ ಕ್ರೆಡಿಟ್ ಸಿಗುತ್ತದೆ ಎಂಬ ಕಾರಣದಿಂದ ಅಡ್ಡಿಪಡಿಸಿದ್ದರು. ಆದರೆ, ಆ ಯೋಜನೆ ಪೂರ್ಣವಾಗುವ ವಿಶ್ವಾಸವಿದೆ. ನಾನು ಸಚಿವನಾಗಿ ಬೇರೆಯವರಂತೆ ಆಸ್ತಿ-ಪಾಸ್ತಿ ಮಾಡುತ್ತ ಆಡಳಿತ ನಡೆಸಲಿಲ್ಲ. ಬದಲಾಗಿ ವಿಜಯಪುರ ಸೇರಿದಂತೆ ಎಲ್ಲಕಡೆ ಸುತ್ತಾಡಿ ನೀರಾವರಿ ಮಾಡಿದ್ದೇನೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ನೀಡಿರುವ ನನ್ನನ್ನು ಜಲನಾಯಕ ಎಂದು ಕರೆದಿದ್ದಾರೆ. ಇದು ನನಗೆ ನೊಬೆಲ್ ಪಾರಿತೋಷಕಕ್ಕಿಂತ ಹೆಚ್ಚು ಗೌರವ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ತಿಕೋಟಾ ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಎಂ.ಬಿ.ಪಾಟೀಲ ಅವರ ನೀರಾವರಿ ಕೆಲಸವನ್ನು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಕೊಂಡಾಡಿದ್ದಾರೆ. ಸ್ವಾಮೀಜಿಯವರ ಆಶೀರ್ವಾದ ಅವರ ಮೇಲಿದ್ದು, ಎಂ.ಬಿ.ಪಾಟೀಲರಿಗೆ ಭವಿಷ್ಯದಲ್ಲಿ ಬಾರಿ ಜನಬೆಂಬಲ ಸಿಗಲಿದೆ ಎಂದು ಹೇಳಿದರು.


ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಸಂಖ ವಿರಕ್ತಮಠದ ಶ್ರೀ ಮಹೇಶ ದೇವರು  ಮಾತನಾಡಿ, ಎಂ.ಬಿ.ಪಾಟೀಲರು ಕಲ್ಲುಸಕ್ಕರೆಯಂತೆ ಕೆಲಸ ಮಾಡಿದ್ದಾರೆ. ಅವರನ್ನು ನೋಡಿದರೆ ಕೃಷ್ಣಾ ನದಿಯನ್ನು ನೋಡಿದಂತಾಗುತ್ತದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ರಾಜ್ಯದಲ್ಲಿಯೇ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಅತೀ ಹೆಚ್ಚು 5000 ಬೋರ್‍ವೆಲ್‍ಗಳನ್ನು ಎಂ.ಬಿ.ಪಾಟೀಲ ಹಾಕಿಸಿ ಕೊಟ್ಟಿದ್ದಾರೆ. ಅಲ್ಲದೇ, ರಸ್ತೆ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮಾತನಾಡಿ, ಎಂ.ಬಿ.ಪಾಟೀಲರು ಮಾಡಿರುವ ನೀರಾವರಿ ಕೆಲಸಗಳಿಂದ ಕೇವಲ ಕರ್ನಾಟಕವಷ್ಟೇ ಅಲ್ಲ, ನೆರೆ ಮಹಾರಾಷ್ಟ್ರದ ರೈತರಿಗೂ ಅನಕೂಲವಾಗಿದೆ. ಪರಿಣಾಮ ಜತ್‍ನಿಂದ ಸಾವಂತ ಎಂಬುವವರು ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಬೋಳಚಿಕ್ಕಲಕಿ ಗ್ರಾಮದ ಸೈಯದ್ ಬಾಷಾಸಾಬ್ ಮಾತನಾಡಿ, ಎಂ.ಬಿ.ಪಾಟೀಲರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿದ್ದರಿಂದ ನಾನು ಕೃಷಿಯ ಬದಲು ಆ ನೀರನ್ನು ಕೋಳಿ ಸಾಕಾಣಿಕೆಗೆ ಬಳಸಿ, ಈಗ ತಿಂಗಳಿಗೆ ರೂ.3ಲಕ್ಷ ಆದಾಯ ಪಡೆಯುತ್ತಿದ್ದೇನೆ. ಅಲ್ಲದೇ, ಪ್ರತಿ ದಿನ ಬೆಳಿಗ್ಗೆ ಶಿರಡಿ ಸಾಯಿ ಬಾಬಾರ ಪೋಟೋದ ಜೊತೆ ಎಂ.ಬಿ.ಪಾಟೀಲರ ಭಾವಚಿತ್ರ ಇಟ್ಟು ಪೂಜೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಲೋಹಗಾಂವ ಗ್ರಾಮದ ರೈತ ಗುರುನಾಥ ಯಲಗೊಂಡ ಕೊಣ್ಣೂರ ಹಾಗೂ ಜಾಲಗೇರಿ ಎಸ್.ಎಸ್.ನಾಡಗೌಡ ಈ ಸಂದರ್ಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಸೋಮನಾಥ ಬಾಗಲಕೋಟ, ಬಸವರಾಜ ದೇಸಾಯಿ ವಿ.ಎಸ್.ಪಾಟೀಲ, ಸುಜಾತಾ ಕಳ್ಳಿಮನಿ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರಗೊಂಡ ಬಿರಾದಾರ, ಮುಖಂಡರಾದ ಚನ್ನಪ್ಪ ಕೊಪ್ಪದ, ಸೋಮನಾಥ ಕಳ್ಳಿಮನಿ, ಶ್ರೀಶೈಲಗೌಡ ಪಾಟೀಲ ನೀಡೋಣಿ, ಮಧುಕರ ಜಾಧವ, ರಾಜು ಪವಾರ, ಭಾಗೀರಥಿ ತೇಲಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಟಕ್ಕಳಕಿ ಮತ್ತು ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಶಾಂತ ಜಂಡೆ, ಭಾವುಸಿಂಗ್ ಬಡಿಗೇರ ನಿರೂಪಿಸಿದರು.

ಎಂ.ಬಿ.ಪಾಟೀಲ ಅವರನ್ನು ನಾನಾ ಯೋಜನೆಯ ಫಲಾನುಭವಿಗಳು, ರೈತರು ಮತ್ತು ಟಕ್ಕಳಕಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆದ ಗುತ್ತಿಗೆದಾರ ಶಂಕರ ನಾಯಕ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಟಕ್ಕಳಕಿ ಗ್ರಾಮದಿಂದ ವೇದಿಕೆಯವರೆಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವೇದಿಕೆಯಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.

Leave a Reply

ಹೊಸ ಪೋಸ್ಟ್‌