Reservatin Ibrahim: ಮುಸ್ಲಿಂ ಮೀಸಲಾತಿ ವಿಚಾರ: ಯಡಿಯೂರಪ್ಪರಿಂದ ರದ್ದುಪಡಿಸಲು ಸಾಧ್ಯವಾಗದದ್ದು ಬೊಮ್ಯಾಯಿಂದ ಹೇಗೆ ಸಾಧ್ಯ? ಸಿ ಎಂ ಇಬ್ರಾಹಿಂ

ವಿಜಯಪುರ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಲು ಸಾಧ್ಯವಾಗಲಿಲ್ಲ.  ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಾಧ್ಯವಾಗುತ್ತಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಅಧಿಕಾರದಲ್ಲಿದ್ದಾಗ ಸಂವಿಧಾನ ಬದ್ಧವಾಗಿ, ಸಮಿತಿ ರಚಿಸಿ ಆ ಕಮೀಟಿ ವರದಿ ಆಧಾರದ ಮೇಲೆ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡಲಾಗಿದೆ.  ಯಡಿಯೂರಪ್ಪ ಸಿಎಂ ಇದ್ದಾಗ ಈ ಮೀಸಲಾತಿಯನ್ನು ತೆಗೆಯಲು ಸಾಧ್ಯವಾಗಲಿಲ್ಲ.  ಈಗ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಆಗುತ್ತಾ? ಯಡಿಯೂರಪ್ಪ ಓರಿಜಿನಲ್ ಆರ್ ಎಸ್ ಎಸ್ ನವರಾಗಿದ್ದರು.  ಈ ಬೊಮ್ಮಾಯಿ ಅಡ್ಡಬುರಕಿ ಆರ್ ಎಸ್ ಎಸ್ ನವರಾಗಿದ್ದಾರೆ. ಅರ್ಧ ಅದು ಅರ್ಧ ಇದು.  ಹೀಗಾಗಿ ನಿಯತ್ತನ್ನು ತೋರಿಸಲು ಬಸವ ಕೃಪಾ ಬಿಟ್ಟು ಕೇಶವ ಕೃಪಾ ಗುಲಾಮರಾಗಲು ಹೊರಟಿದ್ದಾರೆ.  ಇದು ನಡೆಯುವುದಿಲ್ಲ ಎಂದು ಎಂದು ಪ್ರಶ್ನಿಸಿದರು.

ಮೀಸಲಾತಿಯನ್ನು ಆರಂಭಿಸಿದ್ದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ.  ಮಹಿಳಾ ಮೀಸಲಾತಿ ನೀಡಿದ್ದು ದೇವೇಗೌಡರು.  ನಾಯಕ ಸಮಾಜಕ್ಕೆ ಚಂದ್ರಶೇಖರ ಪ್ರಧಾನಿಯಾಗಿದ್ದಾಗ ವಾಲ್ಮಿಕಿ ಸಮುದಾಯವನ್ನು ಎಸ್. ಟಿ. ಸಮುದಾಯಕ್ಕೆ ದೇವೇಗೌಡ ಸೇರಿಸಿದ್ದರು.  ಮೀಸಲಾತಿಯ ಬಗ್ಗೆ ಸರಕಾರ ಸಮಗ್ರ ಚರ್ಚೆ ನಡೆಸಬೇಕು.  ಈಗ ಬೇಡ ಜಂಗಮರು ಮೀಸಲಾತಿ ಕೇಳುತ್ತಿದ್ದಾರೆ.  ಈ ಬಗ್ಗೆ ಅವರೊಂದಿಗೆ ಮಾತನಾಡಿ ಒಂದು ಸಮಿತಿ ಮಾಡಬೇಕು.  ಮಾದಿಗ ದಂಡೋರ, ದಲಿತರ ಒಳ ಮೀಸಲಾತಿ, ಪಂಚಮಸಾಲಿ ಮೀಸಲಾತಿ ಕೇಳುತ್ತಿದ್ದಾರೆ.  ಸರಕಾರಕ್ಕೆ ದಿಕ್ಕು ದಿಸೆಯಿಲ್ಲ.  ನಿಮಗೆ ಗುರಿಯಿಲ್ಲ.  ನಿಮ್ಮ ಮೀಸಲಾತಿ ನೀತಿಯ ಬಗ್ಗೆ ಸ್ಪಷ್ಟವಾಗಿ ಹೇಳಿ ಎಂದು ಸರಕಾರವನ್ನು ಅವರು ಒತ್ತಾಯಿಸಿದರು.

ಮೀಸಲಾತಿ ನೀಡಲು ಸಾಧ್ಯವಾಗದಿದ್ದರೆ ಒಂದು ಸಮಿತಿ ರಚನೆ ಮಾಡಿ.  ಈ ಮೀಸಲಾತಿ ಬಗ್ಗೆ ಚರ್ಚೆಯಾಗಲಿ.  ಬೇಡ ಜಂಗಮರ ಬಗ್ಗೆ ಅವರು ಜನಸಂಖ್ಯೆ ಎಷ್ಟು ಎಂದು ಮೊದಲು ಸಮೀಕ್ಷೆ ಮಾಡಿ.  ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ ಎಷ್ಟಾದರೂ ಇರಲಿ.  ಈ ಕುರಿತು ಅಧ್ಯಯನ ನಡೆಸಲಿ.  ಅದಾದ ಮೇಲೆ ಅವರ ಆರ್ಥಿಕವಾಗಿ ಸರಿಪಡಿಸುವ ಕೆಲಸ ಮಾಡಬೇಕು.  ಬ್ರಾಹ್ಮಣರು ಮೇಲ್ವರ್ಗದವರಾಗಿದ್ದರೂ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಶೇ. 10 ರಷ್ಟು ಮೀಸಲಾತಿ ನೀಡಲಾಗಿತ್ತು.  ಬ್ರಾಹ್ಮಣರನ್ನು ತಾರತಮ್ಮ ಮಾಡಲಿಲ್ಲ.  ದೇವೇಗೌಡ ಪ್ರಧಾನ ಮಂತ್ರಿಯಾಗಿದ್ದಾಗ ಕ್ಯಾಬಿನೆಟ್ ಸೆಕ್ರೇಟರಿ ಬ್ರಾಹ್ಮಣರಾಗಿದ್ದರು.  ಪ್ರಿನ್ಸಿಪಲ್ ಸೆಕ್ರೇಟರಿ ಅಬ್ಬರೂ ಬ್ರಾಹ್ಮಣರಾಗಿದ್ದರು ಎಂದು ಅವರು ಹೇಳಿದರು.

ಒಟ್ಟಾರೆ, ನಾವು ಅಧಿಕಾರದಲ್ಲಿದ್ದಾಗ ಈ ರಾಜ್ಯಕ್ಕೆ ಏನೆಲ್ಲ ಒಳ್ಳಳೆಯದಾಗಬೇಕು? ಸಾಮಾಜಿಕ ನ್ಯಾಯವನ್ನು ಹೇಗೆ ಕಾಪಾಡಬೇಕು? ಎಲ್ಲ ಸಮುದಾಯಗಳನ್ನು ಹೇಗೆ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು.  ಈ ರಾಜ್ಯಕ್ಕೆ ಒಳ್ಳೆಯದಾಗಲು ನಾವು ಕೆಲಸ ಮಾಡಿದ್ದೇವೆ.  ಲಿಂಗಾಯಿತರಲ್ಲಿ ಪಂಚಮಸಾಲಿ, ಗಾಣಿಗ, ನೊಣಬರು, ಸಾದರ ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯದವರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದೇವೆ ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.

Leave a Reply

ಹೊಸ ಪೋಸ್ಟ್‌