ವಿಜಯಪುರ: ಹಿಂದೂ ಅಶ್ಲೀಲ ಪದ ಎಂದು ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆ ಖಂಡಿಸಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ ನಗರದಲ್ಲಿ ಪ್ರತಿಭಟನೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ, ಕಾಂಗ್ರೆಸ್ ಪಕ್ಷ ಪಾಕಿಸ್ತಾನ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಮರ ತುಷ್ಟಿಕರಣಕ್ಕೆ ಕಾಂಗ್ರೆಸ್ಸಿನವರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸನಾತನ ಧರ್ಮ ಇದಾಗಿದೆ. ಹಿಂದೂ ಧರ್ಮದ ಬಗ್ಗೆ ಸತೀಶ್ ಜಾರಕಿಹೊಳಿ ಅಶ್ಲೀಲವಾಗಿ ಮಾತನಾಡಿದ್ದಾರೆ. ಇದೇ ರೀತಿ ಹಿಂದೂ ಧರ್ಮದ ಬಗ್ಗೆ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್, ಸೋನಿಯಾ ಗಾಂಧಿ, ಸಿದ್ದರಾಮ್ಯ ಮಾತನಾಡಿದ್ದಾರೆ. ಮುಸ್ಲಿಮರ ತಷ್ಟೀಕರಣ ಮಾಡಿದರೆ ದೇಶದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ಸಿಗರು ತಿಳಿದಿದ್ದಾರೆ. ಹಿಂದೂಗಳ ಭಾವನೆಗಳಿಗೆ ಮತ್ತು ಹಿಂದೂಗಳ ಮತಗಳಿಗೆ ಕಾಂಗ್ರೆಸ್ಸಿಗೆ ಬೆಲೆ ಇಲ್ಲ. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಲೂ ಅರ್ಹತೆ ಇಲ್ಲದಿದ್ದರೂ ಈ ರೀತಿ ಮಾತನಾಡುತ್ತಾರೆ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಯಾರೋ ಬರೆದಿದ್ದನ್ನು ಸತೀಶ್ ಜಾರಕಿಹೊಳಿ ಇಂದು ತೋರಿಸುತ್ತಿದ್ದಾರೆ. ಸತೀಶ್ ಜಾರಕಿಹೋಳಿಗೆ ನಾಚಿಕೆ ಆಗಬೇಕು. ಸನಾತನವಾದ ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ಸಿಗರಿಗೆ ಗೌರವವಿದ್ದರೆ ತಕ್ಷಣ ಸತೀಶ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂ ಧರ್ಮದ ಬಗ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿ ತಮ್ಮ ಬಳಿ ದಾಖಲೆ ಇದೆ ಎಂದು ಹೇಳಿರುವ ಸತೀಶ್ ಜಾರಕಿಹೋಳಿ ಅವರ ಸ್ಪಷ್ಟೀಕರಣಕ್ಕೆ ಪ್ರತ್ರಿಕ್ರಿಯೆ ನೀಡಿದ ಅವರು, ಅನನ್ಯಾವ್ ಸನಾತನವಾದ ಹಿಂದೂ ಧರ್ಮದ ಕುರಿತು ದಾಖಲೆಗಳ ಇದ್ದಾವಾ? ಸಂತರು ಮಹಾಂತರ ಸಾವಿರಾರು ವರ್ಷಗಳ ತಪಸ್ಸಿದೆ. ಯಾರು ಸತೀಶ್ ಜಾರಕಿಹೊಳಿ ಅಫ್ಟ್ರಾಲ್? ತಮ್ಮ ಹೇಳಿಕೆ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಯತ್ನಾಳ ಜಾರಕಿಹೊಳಿ ಅವರಿಗೆ ಬಹಿರಂಗ ಆಹ್ವಾನ ನೀಡಿದರು.
ಓಪನ್ ಚರ್ಚೆಯನ್ನು ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನು ಮಾಡುತ್ತಾನೆ. ಇವನೇನು ದೊಡ್ಡ ಸಿದ್ದಾಂತ ಸಿಖಾಮಣಿ ಏನು? ಸುಮ್ಮನೆ ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು. ಮುಂದಿನ 13ರಂದು ಗೋಕಾಕಿಗೆ ಹೋಗುತ್ತೇನೆ. ಅಲ್ಲಿ ಉತ್ತರ ಕೊಡುತ್ತೇನೆ. ಈ ರೀತಿ ಹಿಂದೂ ಧರ್ಮದ ಬಗ್ಗೆ ಉದ್ಧಟತನ ಮಾತನಾಡಿದರೆ ಒಳ್ಳೆಯದಲ್ಲ. ಲಿಂಗಾಯತರ ಬಗ್ಗೆಯೂ ಮಾತನಾಡಿದ್ದಾನೆ. ರೂ. 11 ಪಟ್ಟಿ ಕೊಡುವ ಲಿಂಗಾಯತರು ಎಂದು ಜಾರಕಿಹೊಳಿ ಮಾತನಾಡಿದ್ದಾನೆ. ಈ ಬಾರಿ ಹಿಂದೂಗಳು ತೋರಿಸುತ್ತಾರೆ. ನಿಜವಾದ ಹಿಂದುಗಳು ಯಾರಿದ್ದಾರೆ ಅವರೆಲ್ಲ ಈ ಬಾರಿ ಆತನಿಗೆ ಬುದ್ಧಿ ಕಲಿಸುತ್ತಾರೆ. ಇಂಥ ಕಾರಣಗಳಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷದಲ್ಲಿಯೂ ಕೂಡಲು ಸ್ಥಾನವಿಲ್ಲದಂತಾಗುತ್ತದೆ ಎಂದು ಯತ್ನಾಳ ಸತೀಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಬಗ್ಗೆ ಕಿಡಿ ಕಾರ್ಯದ ಯತ್ನಾಳ
ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧವೂ ಹರಿಹಾಯ್ದ ಯತ್ನಾಳ, ರಾಹುಲ ಗಾಂಧಿ ವಿದೇಶದಲ್ಲಿ ತಯಾರಾದ ವಸ್ತು. ಅದು ಒರಿಜಿನಲ್ ಇಂಡಿಯನ್ ಅಲ್ಲ. ಅದು ಹಿಂದೂ ಧರ್ಮಕ್ಕೆ ಸೇರಿದಂಥದ್ದಲ್ಲ. ಕಂಪ್ಲೀಟ್ ಆಗಿ ಅದೊಂದು ಬೇರೆ ತಳಿ ಇದೆ. ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ಸಿಗರು ದೇಶ ಒಡೆದಂತವರು. ನೆಹರು ಅವರನ್ನು ಪ್ರಧಾನಿಯಾಗಿ ಮಾಡಲು ಗಾಂಧೀಜಿ ದೇಶವನ್ನು ಒಡೆದರು. ಆಗಲೇ ಸರ್ದಾರ್ ವಲ್ಲಭಬಾಯಿ ಪಟೇಲ ಅಥವಾ ಡಾ. ಬಿ. ಆರ್. ಅಂಬೇಡ್ಕರ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದರೆ ದೇಶಕ್ಕೆ ಈ ದುಸ್ಥಿತಿ ಬರುತ್ತಿರಲಿಲ್ಲ. ಇದಕ್ಕೆಲ್ಲ ಜವಾಹರಲಾಲ ನೆಹರು ಹಾಗೂ ಆತನ ಸಮ್ಮಿಶ್ರ ತಳಿಗಳು ಕಾರಣ ಎಂದು ವಾಗ್ದಾಳಿ ನಡೆಸಿದರು.
ಅರುಣಸಿಂಗ್ ಭೇಟಿ ವಿಚಾರ
ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರು ಮಂಗಳವಾರ ರಾತ್ರಿ ತಮ್ಮನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಭಾಗಿಯಾಗಲು ಅರುಣಸಿಂಗ್ ಬಂದಿದ್ದರು. ಅರುಣಸಿಂಗ್ ಅವರು ಬಂದಿದ್ದಾಗ ನಾನು ನಗರದಲ್ಲಿ ಇರಲಿಲ್ಲ. ವಿಜಯಪುರದಿಂದ ಚಿತ್ರದುರ್ಗಕ್ಕೆ ಅವರು ತೆರಳುವಾಗ ಅರುಣಸಿಂಗ್ ಅವರನ್ನು ಅಕಸ್ಮಿಕವಾಗಿ ನಗರದ ಹೈಪರ್ ಮಾರ್ಟ್ ನಲ್ಲಿ ಭೇಟಿಯಾದೆ. ಭೇಟಿಯಲ್ಲಿ ವಿಶೇಷ ಮಾತುಗತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಯತ್ನಾಳ ಗುಜರಾತ್ ಚುನಾವಣೆಯ ಬಳಿಕ ಯತ್ನಾಳ ಸಿಎಂ ಆಗುತ್ತಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವಾಗಲೂ ಆ ಗುಂಗಿನಲ್ಲಿ ಇರಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತೇನೆಂಬ ಸಂಕೇತವನ್ನು ಕೊಟ್ಟಿದ್ದಾರೆ. ಸ್ಟಾರ್ ಕ್ಯಾಂಪೇನರ್ ಆಗಿ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿರುತ್ತೇನೆ ಎಂದು ತಿಳಿಸಿದರು.
ಪ್ರತ್ಯೇಕವಾಗಿ ಚುನಾವಣೆ ಪ್ರಚಾರ ಮಾಡಲು ಮಾಜಿ ಸಿಎಂ ಬಿಎಸ್ವೈಗೆ ಅವಕಾಶ ವಿಚಾರ ಕುರಿತು ಮಾತನಾಡಿದ ಅವರು, ನಾನು ಪ್ರತ್ಯೇಕವಾಗಿ ಪ್ರಚಾರ ಮಾಡುವುದಿಲ್ಲ. ಪಕ್ಷದ ಎಲ್ಲ ನಾಯಕರೊಂದಿಗೆ ಪ್ರಚಾರ ಮಾಡುತ್ತೇನೆ. ನಾನು ಪ್ರತ್ಯೇಕ ನಾಯಕನಲ್ಲ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಯತ್ನಾಳ ಶಕ್ತಿಯನ್ನ ಜನಪ್ರೀಯತೆಯನ್ನು ಉಪಯೋಗ ಮಾಡಿಕೊಳ್ಳುತ್ತೇವೆ ಅರುಣಸಿಂಗ್ ಹೇಳಿದ್ದಾರೆ. ಎಲ್ಲ ನದಿಗಳು ಹರಿದು ಸಾಗರ ಸೇರುವ ಹಾಗೆ ನಾವೆಲ್ಲ ನಾಯಕರು ಸೇರಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಯತ್ನಾಳ ಹೊಂದಾಣಿಕೆ ಮಾಡುವ ವಿಚಾರದ ಬಗ್ಗೆ ಕೇಂದ್ರದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಿರುತ್ತೇವೆ ಎಂದು ಯತ್ನಾಳ ತಿಳಿಸಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಷಡ್ಯಂತ್ರ ಮಾಡಲಾಗಿತ್ತು
ಈ ಮಧ್ಯೆ, ಮಂಗಳವಾರ ಅರುಣಸಿಂಗ್ ಜೊತೆ ಬೇಟಿಯ ವೇಳೆ ನನ್ನ ವಿರುದ್ಧ ನಡೆದಿದ್ದ ಷಡ್ಯಂತ್ರದ ಬಗ್ಗೆ ಮಾಹಿತಿ ನೀಡಿದ್ದೇನೆ. ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಿಂದ ರಾಜ್ಯ ಹಾಗೂ ಕೇಂದ್ರದ ನಾಯಕರು ಸಂತಸಪಟ್ಟಿದ್ದಾರೆ. ವಿಜಯಪುರ ಪಾಲಿಕೆಯ ಚುನಾವಣೆ ಫಲಿತಾಂಶದಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ ಎಂದು ಅರುಣಸಿಂಗ್ ತಿಳಿಸಿದ್ದಾರೆ. ಪಾಲಿಕೆಯ ಚುನಾವಣೆಯಲ್ಲಿ ಏನೆಲ್ಲ ಷಡ್ಯಂತರಗಳು ನಡೆದಿದೆ ಎಂಬುದು ನಮ್ಮ ಹೈಕಮಾಂಡಿಗೆ ಗೊತ್ತಿದೆ ಎಂದು ಶಾಸಕರು ತಿಳಿಸಿದರು.
ಕಾಂಗ್ರೆಸ್ ಶಾಸಕರ ಹೆಸರು ಹೇಳದೆ ವಾಗ್ದಾಳಿ
ಈ ಮಧ್ಯೆ, ಕಾಂಗ್ರೆಸ್ಸಿನ ಶಾಸಕರೊಬ್ಬರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಮಾಡದೆ ಪಕ್ಷೇತರ ಅಭ್ಯರ್ಥಿಗಳ ಪರ ಚುನಾವಣೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಾಸಕ ಶಿವಾನಂದ ಪಾಟೀಲ ಹೆಸರು ಹೇಳದೆ ವಾಗ್ದಾಳಿ ಅವರು, ಆತ ವಿಜಯಪುರ ನಗರದಿಂದ ಸ್ಪರ್ಧೆನಾದರೂ ಮಾಡಲಿ. ಸುಡುಗಾಡದಲ್ಲಾದರೂ ಸ್ಪರ್ಧೆ ಮಾಡಲಿ. ನನಗೇನು? ಆತನ ಬ್ಲಾಕ್ ಮೇಲ್ ದಂಧೆಗೆ ನಾನು ಹೆದರುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನಾ ಮೆರವಣಿಗೆ
ಈ ಮಧ್ಯೆ ಸತೀಶ ಜಾರಕಿಹೊಳಿ ಹೇಳಿಕೆ ವಿರೋಧಿಸಿ ವಿಜಯಪುರ ನಗರದಲ್ಲಿ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್ ವರೆಗೂ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಜಾರಕಿಹೋಳಿ ತಮ್ಮ ಹೇಳಿಕೆ ಹಿಂಪಡೆಯುವಂತೆ ಆಗ್ರಹಿಸಿದರು.