PE Teachers: ದೈಹಿಕ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳಲಿ- ಯುವ ಮುಖಂಡ ಸಂಗಮೇಶ ಬಬಲೇಶ್ವರ

ವಿಜಯಪುರ: : ರಾಜ್ಯ ಸರಕಾರ ದೈಹಿಕ ಶಿಕ್ಷಕರ ಕೊರತೆಯನ್ನು ನೀಗಿಸಿ ಮಕ್ಕಳನ್ನು ಸದೃಢರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.

ನಗರದ ಬಿ.ಎಲ್.ಡಿ.ಇ. ವೈದ್ಯಕೀಯ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಭಾರತದ ಭವಿಷ್ಯದ ನಾಗರಿಕರಾಗಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನೀಡಲು ದೈಹಿಕ ಶಿಕ್ಷಕರ ಕೊರತೆ ಇದೆ. ಸರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಶಿಕ್ಷಕರ ಕೊರತೆ ಸೇರಿದಂತೆ ಅವರ ಸಮಸ್ಯೆಗಳಿಗೆ ಸ್ಪಂಧಿಸಬೇಕು ಎಂದು ಅವರು ಹೇಳಿದರು.

ಬಾಲಕರ ಖೋ ಖೋ ಫೈನಲ್ ನಲ್ಲಿ ಮೈಸೂರು, ದಾವಣಗೆರೆ ನಡುವಿನ ಪಂದ್ಯದ ದೃಶ್ಯ

ವಿದ್ಯಾರ್ಥಿಗಳ ಜೀವನದಲ್ಲಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ದೈಹಿಕ ಶಿಕ್ಷಕರು ಮಾರ್ಗದರ್ಶಕರಾಗಿ ಜೀವ ತುಂಬುತ್ತಾರೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಆತ್ಮದಂತೆ ಕೆಲಸ ಮಾಡುತ್ತಾರೆ. ಹೀಗಾಗಿ ದೈಹಿಕ ಶಿಕ್ಷಕರು ಸದೃಢ ರಾಷ್ಟ್ರ ನಿರ್ಮಾಣದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿ ಬಿ.ಆರ್.ಪಾಟೀಲ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಕ್ರೀಡೆಯೂ ಬಹುಮುಖ್ಯವಾಗಿದೆ. ಎರಡನ್ನೂ ವಿದ್ಯಾರ್ಥಿಗಳು ಶ್ರದ್ಧೆಯಿಂದ ಮಾಡಿದರೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮಂಡ್ಯ ತಂಡಕ್ಕೆ ಟ್ರೋಫಿ ಮತ್ತು ರೂ. 15000 ನಗದು ಬಹುಮಾನ ವಿತರಿಸಲಾಯಿತು. 2ನೇ ಸ್ಥಾನ ಪಡೆದ ಮೈಸೂರು ಬಾಲಕಿಯರ ತಂಡಕ್ಕೆ ಟ್ರೋಫಿ ಮತ್ತು ರೂ. 10000 ನಗದು ಬಹುಮಾನ ನೀಡಲಾಯಿತು.

ಅದೇ ರೀತಿ ಬಾಲಕರ ವಿಭಾಗದಲ್ಲಿ ಮೊದಲಸ್ಥಾನ ಪಡೆದ ಮೈಸೂರು ತಂಡಕ್ಕೆ ಟ್ರೋಫಿ ಮತ್ತು ರೂ. 15000 ನಗದು  ಹಾಗೂ ದ್ವಿತೀಯ ಸ್ಥಾನ ಪಡೆದ ದಾವಣಗೆರೆ ತಂಡಕ್ಕೆ ಟ್ರೋಫಿ ಹಾಗೂ ರೂ. 10000 ನಗದು ಬಹುಮಾನ ವಿತರಿಸಲಾಯಿತು.

ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ವಿಜೇತ ತಂಡಗಳಿಗೆ ಟ್ರೋಫಿ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ  ವತಿಯಿಂದ ನಗದು ಬಹುಮಾನ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ.ಆರ್.ಕೊಟ್ನಾಳ, ಆಡಳಿತಾಧಿಕಾರಿಗಳಾದ ಆಯ್.ಎಸ್.ಕಾಳಪ್ಪನವರ, ಬಿ.ಆರ್.ಪಾಟೀಲ, ದೈಹಿಕ ನಿರ್ದೇಶಕರಾದ ಎಸ್.ಎಸ್.ಕೋರಿ, ದೈಹಿಕ ಸಹಾಯಕ ನಿರ್ದೇಶಕ ಕೈಲಾಸ ಹಿರೇಮಠ, ಬಿ.ಎಲ್.ಡಿ.ಇ. ಸಂಸ್ಥೆಯ ಕಚೆÉೀರಿ ಅಧೀಕ್ಷಕ ಎಸ್.ಎ.ಬಿರಾದಾರ, ಪಿಯು ಇಲಾಖೆ ಉಪನಿರ್ದೇಶಕ ಎಸ್.ಎನ್.ಬಗಲಿ, ಪ್ರಾಚಾರ್ಯರಾದ ಸಿ.ಬಿ.ಪಾಟೀಲ, ಡಾ. ಜಿ.ಡಿ.ಅಕಮಂಚಿ, ಎಲ್.ಬಿ.ಪಾಟೀಲ, ಸಂತೋಷ ಲೋಕುರಿ, ಮಧುಸುದನ ಮಾಗಿ, ವಿ.ಟಿ.ಗೊಂಬಿ, ಎಸ್.ಬಿ.ಗೋಗಿ, ವಿ.ಎಸ್.ಹಂಜಿ, ಎಸ್.ಆರ್.ಮುತ್ತಗಿ ಮುಂತಾದವರು ಉಪಸ್ಥಿತರಿದ್ದರು.
ವಾಣಿಶ್ರೀ ಹಿರೇಮಠ ಪ್ರಾರ್ಥಿಸಿದರು. ಎಸ್.ಪಿ.ಶೇಗುಣಸಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌