KUWJ Conference: ಕಾನಿಪ‌ ರಾಜ್ಯ ಸಮ್ಮೇಳನ: ದಿನಾಂಕ ನಿಗದಿ ಮಾಡಿ- ಡಾ. ದಾನಮ್ಮನವರ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ನಡೆಯಲಿರುವ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ದಿನಾಂಕವನ್ನು ಬೇಗನೆ ನಿಗದಿ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ‌.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಅಶೋಕ ಯಡಹಳ್ಳಿ ನೇತೃತ್ವದ ನಿಯೋಗ ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಅದಾಲತ್ ಮಹಲ್‌ನಲ್ಲಿ ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮೊದಲು ಸಮ್ಮೇಳನದ ದಿನಾಂಕ ನಿಗದಿಗೊಳಿಸಲು ಸಲಹೆ ನೀಡಿದರು.

ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿಸೋಣ. ಆದರೆ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಿದರೆ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಸಮ್ಮೇಳನ ಎಂದರೆ ಸಾಮಾನ್ಯವಲ್ಲ. ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಕಾಲಾವಕಾಶ ಬೇಕು. ಸಂಘದ ಪದಾಧಿಕಾರಿಗಳು ಕೂಡಲೇ ಬೆಂಗಳೂರಿಗೆ ತೆರಳಿ ಸಿಎಂ ಅವರನ್ನು ಭೇಟಿ ಮಾಡಿ ದಿನಾಂಕ ನಿಗದಿ ಪಡಿಸಿದರೆ ಸಮ್ಮೇಳನ ಸಿದ್ಧತೆಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ದಿನಾಂಕ ನಿಗದಿಯಾದ ತಕ್ಷಣ ಜಿಲ್ಲಾ ಮಟ್ಟದ ಅಧಿಕಾರಿಗಳ, ಹೊಟೇಲ್ ಹಾಗೂ ವಸತಿ ಗೃಹಗಳ ಮಾಲೀಕರ ಸಭೆ ಕರೆದು, ಸಮ್ಮೇಳನಕ್ಕೆ ಯಶಸ್ವಿಗೊಳಿಸಲು ಸೂಚಿಸುವುದಾಗಿ ಡಿಸಿ ತಿಳಿಸಿದರು.

ರಾಜ್ಯದ ನಾನಾ ಭಾಗಗಳಿಂದ 4000ಕ್ಕೂ ಹೆಚ್ಚು ಪತ್ರಕರ್ತರು ಪಾಲ್ಗೊಳ್ಳುತ್ತಾರೆ. ಅವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸವಾಲಿನ ಕೆಲಸ. ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಮೊದಲು ಸಮ್ಮೇಳನದ ದಿನಾಂಕ ನಿಗದಿಗೊಳಿಸಿ ಎಂದು ಜಿಲ್ಲಾಧಿಕಾರಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ಸಲಹೆ ನೀಡಿದರು.

ಎರಡು ದಿನಗಳ ಸಮ್ಮೇಳನವನ್ನು ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಮಾಡಿ. ಮುಖ್ಯಮಂತ್ರಿ ಆಗಮಿಸಿದ ವೇಳೆ ದಟ್ಟಣೆ ಬಿಟ್ಟರೆ, ಬಾಕಿ ಸಮ್ಮೇಳನದ ಗೋಷ್ಠಿಗಳನ್ನು ನಡೆಸಲಿಕ್ಕೆ ರಂಗಮಂದಿರವೇ ಸೂಕ್ತವಾಗಲಿದೆ ಎಂದು ಡಾ. ವಿಜಯಮಹಾಂತೇಶ ನಿ. ದಾನಮ್ಮನವರ ಸಲಹೆ ನೀಡಿದರು.

ಇದೇ ವೇಳೆ ಕೋವಿಡ್ ಕಥೆಗಳು ಕುರಿತು ಬರೆದ ಪುಸ್ತಕವನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.

Leave a Reply

ಹೊಸ ಪೋಸ್ಟ್‌