ವಿಜಯಪುರ, 21: ಒಗ್ಗಟ್ಟು, ಶ್ರದ್ಧೆ ಮತ್ತು ಸಮರ್ಪಣೆ ಮನೋಭಾವ ಪ್ರತಿಯೊಂದು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗುತ್ತವೆ ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ ಹೇಳಿದ್ದಾರೆ.
ನಗರದ ಎಸ್.ಎಸ್.ಪಿ.ಯು.ಕಾಲೇಜಿನಲ್ಲಿ ನಡೆದ ಖೋ ಖೋ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ತರಬೇತುದಾರರು, ಶಿಕ್ಷಕರು, ನಿರ್ಣಾಯಕರು ಮತ್ತು ನಾನಾ ಕಾಲೇಜುಗಳ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿಗಳಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನವೆಂಬರ 9 ಮತ್ತು 10ರಂದು ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಪಿಯು ಕಾಲೇಜುಗಳ ಎರಡು ದಿನಗಳ ರಾಜ್ಯಮಟ್ಟದ ಖೋ ಖೋ ಪಂಧ್ಯಾವಳಿ ಯಶಸ್ವಿಯಾಗಿದೆ. ಇದರ ಹಿಂದೆ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತ ಮಂಡಳಿ, ಕ್ರೀಡಾ ಸಿಬ್ಬಂದಿ ಹಾಗೂ ಇತರರ ಶ್ರಮವಿದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸಿದ ಕಾರಣ ಈ ಕ್ರೀಡಾಕೂಟದ ವ್ಯವಸ್ಥೆ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.
ಆಡಳಿತಾಧಿಕಾರಿ ಆಯ್.ಎಸ್.ಕಾಳಪ್ಪನವರ ಮಾತನಾಡಿ, ಈ ಕ್ರೀಡಾಕೂಟದಿಂದ ಎಸ್.ಎಸ್. ಪಿಯು ಕಾಲೇಜಿನ ಕೀರ್ತಿ ನಾಡಿನಾದ್ಯಂತ ಪಸರಿಸುವಂತಾಗಿದೆ. ಅಷ್ಟೇ ಅಲ್ಲ, ಇದರ ಯಶಸ್ಸು ರಾಜ್ಯಾದ್ಯಂತ ಇತಿಹಾಸ ಸೃಷ್ಠಿಸಿದ್ದು ಇದಕ್ಕೆಲ್ಲ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾದ ಎಂ.ಬಿ.ಪಾಟೀಲ ಮತ್ತು ಕ್ರೀಡಾಕೂಟ ಆಯೋಜನೆಯಲ್ಲಿ ಪಾಲ್ಗೊಂಡ ಎಲ್ಲರೂ ಹಗಲಿರುಳು ಶ್ರಮಿಸಿರುವುದು ಪ್ರಮುಖ ಕಾರಣ ಎಂದು ಹೇಳಿದರು.
ಕ್ರೀಡಾ ನಿರ್ದೇಶಕ ಎಸ್.ಎಸ್.ಕೋರಿ ಮಾತನಾಡಿ, ಬಿ.ಎಲ್.ಡಿ.ಇ. ಸಂಸ್ಥೆ ಖೋ ಖೋ ಅಷ್ಟೇ ಅಲ್ಲ, ಇತರ ಬೇರೆ ಬೇರೆ ಅನೇಕ ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸುತ್ತ ಬಂದಿದೆ. ಸಂಸ್ಥೆಯ ನಾನಾ ಶಾಲೆ ಮತ್ತು ಕಾಲೇಜುಗಳ ಸಿಬ್ಬಂದಿ ಸಮರ್ಪಣೆ ಮನೋಭಾವದ ತೊಡಗಿಸಿಕೊಳ್ಳುವುದು ಈ ಯಶಸ್ಸಿನ ಗುಟ್ಟು ಎಂದು ಹೇಳಿದರು.
ಆಡಳಿತಾಧಿಕಾರಿ ಬಿ.ಆರ್.ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ಸಿಬ್ಬಂದಿಯಾದ ಸಂಜೀವರಡ್ಡಿ ಪಾಟೀಲ, ಬಸವರಾಜ ವಸ್ತ್ರದ ಮತ್ತು ಮಹೇಶ ವಿ. ಶಟಗಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಕ್ರೀಡಾಕೂಟದಲ್ಲಿ ಕಾರ್ಯ ನಿರ್ವಹಿಸಿದ ದೈಹಿಕ ಶಿಕ್ಷಕರು, ನಿರ್ಣಾಯಕರು, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಸಿ.ಪಿ. ಸಾಯನ್ಸ ಕಾಲೇಜಿನ ಪ್ರಾಚಾರ್ಯ ಸಿ.ಬಿ.ಪಾಟೀಲ, ಕ್ರೀಡಾ ಸಹಾಯಕ ನಿರ್ದೇಶಕ ಕೈಲಾಸ ಹಿರೇಮಠ, ಎಸ್.ಎಸ್.ಪಿಯು ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಜಿ.ಡಿ.ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಂ.ಪವಾರ ಸ್ವಾಗತಿಸಿದರು. ಜೆ.ಎ.ಬಿರಾದಾರ ನಿರೂಪಿಸಿದರು. ಎಸ್.ಟಿ.ತೇಲ್ಕರ ವಂದಸಿದರು.