Gani Someshwar Jatre: ದೇವರ ಕಲ್ಲಿಗೆ ಓಡಿಬಂದು ತಲೆಯಿಂದ ಗುದ್ದುವ ಭಕ್ತರು- ಬೆನ್ನಿಗೆ ಕಬ್ಬಿಣ ಗುಂಡಿನಿಂದ ಹೊಡೆದುಕೊಂಡು ಹರಕೆ ತೀರಿಸುವ ಜಾತ್ರೆ

ಮಹೇಶ ವಿ. ಶಟಗಾರ

ವಿಜಯಪುರ: ಬಸವ ನಾಡು ವಿಜಯಪರು ಜಿಲ್ಲೆ ಜಾತ್ರೆಗಳ ತವರು ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ.  ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಈ ಜಿಲ್ಲೆಯಲ್ಲಿ ನಡೆಯುವಷ್ಟು ಜಾತ್ರೆಗಳು ನಡೆಯುವುದಿಲ್ಲ ಗಮನಾರ್ಹವಾಗಿದೆ.  ಒಂದೇ ಊರಿನಲ್ಲಿ ಮೂರ್ನಾಲ್ಕು ಜಾತ್ರೆಗಳು ನಡೆಯುವದು ಇದರ ವಿಶೇಷ.  ಅಷ್ಟೇ ಅಲ್ಲ, ಇಡೀ ವರ್ಷ ಪ್ರತಿದಿನ ಒಂದಿಲ್ಲೊಂದು ಊರಿನಲ್ಲಿ ಜಾತ್ರೆ ನಡೆಯುತ್ತವೆ ಎಂದರೂ ತಪ್ಪಲ್ಲ.  ಅದರಲ್ಲಿಯೂ ಜಿಲ್ಲೆಯಲ್ಲಿ ನಡೆಯುವ ಒಂದೊಂದು ಜಾತ್ರೆಯೂ ವಿಶೇಷವಾಗಿದ್ದು, ಸಂಪ್ರದಾಯಗಳೂ ಜನರು ಅಚ್ಚರಿ ಪಡುವಂತಿದೆ.

ಈಗ ಇಂಥದ್ದೆ ಒಂದು ಜಾತ್ರೆಯ ಬಗ್ಗೆ ನೋಡೋಣ ಬನ್ನಿ.  ಇದು ಗಣಿ ಗ್ರಾಮದಲ್ಲಿ ನಡೆಯುತ್ತಿರುವ ಸೋಮೇಶ್ವರ ಜಾತ್ರೆಯ ದಶ್ಯ.  ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಜಾತ್ರೆ ನಡೆದಿದರಿಲ್ಲ.  ಕೇವಲ ಸಂಪ್ರದಾಯ ಪಾಲನೆಗೆ ಸರಳ;ಾಗಿ ಪೂಜೆ ನೆರವೇರಿಸಲಾಗಿತ್ತು.  ಈಗ ಕೊರೊನಾ ಅಬ್ಬರ ಕಡಿಮಾಯಗಿರುವ ಹಿನ್ನೆಲೆಯಲ್ಲಿ ಮತ್ತೆ ಜಾತ್ರೆ ಕಳೆಗಟ್ಟಿದೆ.

ಗಣಿ ಸೋಮೇಶ್ವರ ದೇವಸ್ಥಾನದಲ್ಲಿರುವ ಮೂರ್ತಿ

ಛಟ್ಟಿ ಅಮವಾಸ್ಯೆಯಂದು ಮೊದಲ ರವಿವಾರ ಈ ಜಾತ್ರೆ ಆರಂಭವಾಗುತ್ತದೆ.  ಬಿಂಗಿಯರು ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ.  ಬಿಂಗಿಯರು ಅಂದರೆ ವ್ರತಾಚರಣೆ ಮಾಡುವವರು.  ಈ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ಸಂಪ್ರದಾಯದಂತೆ ಮದ್ಯಾಹ್ನದ ವೇಳೆಗೆ ಜಾತ್ರೆಯ ಪದ್ದತಿ ಹಾಗೂ ಆಚರಣೆಗಳು ಪ್ರಾರಂಭವಾಗುತ್ತವೆ.  ಬಿಂಗಿಯರು ಅಂದರೆ ಸೋಮೇಶ್ವರ ದೇವರಿಗೆ ಕಾರ್ತಿಕ ಮಾಸದ ಆರಂಭದಿಂದ ಹಿಡಿದು ಕಾರ್ತಿಕ ಮಾಸದ ಮುಕ್ತಾಯದವರೆಗೂ ವಿಶೇಷ ವೃತಾಚರಣೆ ಮಾಡುವವರು ಈ ಅವಧಿಯಲ್ಲಿ ಯಾವುದೇ ಮಾಂಸಾಹಾರ, ಮದ್ಯ ಸೇವನೆ, ದುಷ್ಟಗಳನ್ನು ಮಾಡದೇ ಕಠಿಣ ವೃತಾರಚಣೆ ಮಾಡಿರುತ್ತಾರೆ.  ಈ ವೃತಾಚರಣೆಯ ಒಂದು ತಿಂಗಳು ಮುಗಿದ ನಂತರ ಈ ಬಿಂಗಿಗಳು ಗ್ರಾಮದ ಪ್ರಮುಖರಾದ ದೇಸಾಯಿ ಅವರ ಮನೆಯಿಂದ ಮೆರವಣಿಗೆ ಆರಂಭಿಸಿ ಸೋಮೇಶ್ವರ ದೇವಸ್ಥಾನದವರೆಗೆ ಭಾಜಾ ಭಜಂತ್ರಿಯೊಂದಿಗೆ ಆಗಮಿಸುತ್ತಾರೆ.  ನಂತರ ಹರಕೆ ತೀರಿಸುತ್ತಾರೆ ಎನ್ನುತ್ತಾರೆ ಗ್ರಾಮದ ಮುಖಂಡ ಬಸಯ್ಯ ಸಿದ್ದಯ್ಯ ಹಿರೇಮಠ.

ಕಲ್ಲಿಗೆ ತಲೆಯನ್ನು ಜಜ್ಜುವ ಸಂಪ್ರದಾಯ

ದೇವಸ್ಥಾನದ ಎದುರಿಗೆ ಜಮಾಯಿಸೋ ಬಿಂಗಿಯರಿ ಸೋಮೇಶ್ವರ ದೇವರನ್ನು ಆಹ್ವಾನಿಸುತ್ತಾರೆ.  ಬಳಿಕ ಭಕ್ತಿಯ ಪರಾಕಾಷ್ಟೆ ಮೆರೆಯುತ್ತಾರೆ.  ದೇವಸ್ಥಾನದ ಬಳಿ ನಿಲ್ಲಿಸಿದ ಕಲ್ಲಿಗೆ ಓಡಿ ಬಂದು ತಲೆಯನ್ನು ಜಜ್ಜಿ ಹೋಗುತ್ತಾರೆ, ಈ ರೀತಿ ಪ್ರತಿಯೊಬ್ಬ ಬಿಂಗಿಯೂ ಕೂಡಾ ಮೂರು ಬಾರಿ ಕಲ್ಲಿಗೆ ತಲೆಯನ್ನು ಜಜ್ಜುವುದು ಇಲ್ಲಿನ ಸಂಪ್ರಮದಾಯವಾಗಿದೆ.

ಕಲ್ಲಿಗೆ ತಲೆ ಜಜ್ಜುವುದು ಮತ್ತೀತರ ಪೂಜೆಗಳ ಬಳಿಕ ಬಿಂಗಿಗಳ ಪ್ರಸಾದ ಸೇವೆ ನಡೆಯುತ್ತದೆ.  ಗ್ರಾಮದ ಭಕ್ತರೆಲ್ಲರೂ ಮಡಿಯಿಂದ ಮಾಡಿದ ನೈವೃದ್ಯವನ್ನು ಬಿಂಗಿಗಳಿಗೆ ಅರ್ಪಿಸಿ ಪಾವನರಾಗುತ್ತಾರೆ.  ಭಕ್ತರೆಲ್ಲರೂ ನೀಡಿರುವ ನೈವೇಧ್ಯವನ್ನು ಮಿಶ್ರಣ ಮಾಡಿ ಊಟಕ್ಕೆ ಬಡಿಸಲಾಗುತ್ತದೆ.  ರೊಟ್ಟಿ, ಪಲ್ಯ, ಅಣ್ಣ, ಹುಗ್ಗಿ, ಹೋಳಿಗೆ ಇತರೆ ಸಿಹಿ ಖಾದ್ಯಗಳು ಈ ನೈವೇದ್ಯದಲ್ಲಿರುತ್ತವೆ.  ಇಲ್ಲಿ ಗಮನಿಸಬೇಕಾದ ಮತ್ತೋಂದು ಅಂಶವೆಂದರೆ ಈ ನೇವೈದ್ಯವನ್ನು ಕೇವಲ ಪುರುಷರು ಮಾತ್ರ ಬಡಿಸುತ್ತಾರೆ.  ಮಹಿಳೆಯರು ಬಡಿಸಲು ಇಲ್ಲಿ ಅವಕಾಶವಿಲ್ಲ.  ದೇವರಲ್ಲಿ ಹರಕೆ ಹೊತ್ತವರು ತಮ್ಮ ಇಷ್ಠಾರ್ಥ ಸಿದ್ಧಿಸಿದ ಬಳಿಕ ಹರಕೆ ತೀರಿಸಲು ಕಠಿಣ ವೃತಾಚರಣೆ ಮಾಡಲು ಬಿಂಗಿಗಳಾಗುವುದು ಮತ್ತೋಂದು ವಿಶೇಷವಾಗಿದೆ.

ಬೆನ್ನಿಗೆ ಕಬ್ಬಿಣದ ಗುಂಡಿನಿಂದ ಹೊಡೆಯುವ ಸಂಪ್ರದಾಯ

ಇದೇ ವೇಳೆ ಇಲ್ಲಿನ ಭಕ್ತರು ಕಬ್ಬಿಣದಿಂದ ತಯಾರಿಸಲಾದ ಮತ್ತು ಸರಪಳಿಯಿಂದ ಕಟ್ಟಲಾದ ಗುಂಡುಗಳನ್ನು ಎತ್ತಿಕೊಂಡು ತಮ್ಮ ಬೆನ್ನಿಗೆ ತಾವೇ ಹೊಡೆದುಕೊಂಡು ಹರಕೆ ತೀರಿಸುವುದೂ ಈ ಜಾತ್ರೆಯಲ್ಲಿ ವಿಶೇಷವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಗುರುಪಾದಪ್ಪ ಹಂಚನಾಳ.

ಗಣಿ ಗ್ರಾಮದ ಸೋಮೇಶ್ವರ ಬೇಡಿದ ವರವನ್ನು ನೀಡುವ ದೇವರು ಎಂದೇ ಖ್ಯಾತಿ ಪಡೆದಿದ್ದಾರೆ.  ಭಕ್ತರು ಯಾವುದೇ ಕಷ್ಟವನ್ನು ಹೇಳಿಕೊಂಡು ಬಂದರೂ ಅವರಿಗೆ ಈ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂಬ ನಂಬಿಕೆ ಗಣಿ ಗ್ರಾಮಸ್ಥರದ್ದಾಗಿದೆ.

Leave a Reply

ಹೊಸ ಪೋಸ್ಟ್‌