Cricketer Kirik: ಮಹಿಳಾ ಕ್ರಿಕೆಟರ್, ಬೆಂಬಲಿಗರಿಂದ ಸೂಪರ್ ಬಜಾರ್ ನಲ್ಲಿ ಕಿರಿಕ್ ಆರೋಪ- ತಾನೇನು ತಪ್ಪು ಮಾಡಿಲ್ಲ ಎಂದ ರಾಜೇಶ್ವರಿ ಗಾಯಕವಾಡ- ದೂರು ದಾಖಲಾಗಿಲ್ಲ ಎಂದ ಎಸ್ಪಿ

ವಿಜಯಪುರ: ಬಸವ ನಾಡಿನ ಪ್ರತಿಭಾನ್ವಿತ ಕ್ರೀಡಾಪಟು ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ವಿಜಯಪುರ ನಗರದ ಸೂಪರ್ ಬಜಾರಿನಲ್ಲಿ ಕಿರಿಕ್ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಅವಲಕ್ಕಿ ಭಟ್ಟಿ ಪ್ರದೇಶದ ಉಮದಿ ಸೂಪರ್ ಬಜಾರಿಗೆ ಬುಧವಾರ ಸಂಜೆ ತೆರಳಿದ್ದ ರಾಜೇಶ್ವರಿ ಗಾಯಕವಾಡ ಮತ್ತು ಬೆಂಬಲಿಗರು ಸೂಪರ್ ಬಜಾರಿನ ಮಾಲಿಕ ಮತ್ತು  ಆತನ ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಉಮದಿ ಸೂಪರ್ ಮಾರ್ಕೆಟ್ ಮಾಲೀಕ‌ ಮಲ್ಲಿಕಾರ್ಜುನ, ಅವರ ಪುತ್ರ ಪ್ರಶಾಂತ ಹಾಗೂ‌ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.  ಬುಧವಾರ ಸಂಜೆ ರಾಜೇಶ್ವರಿ ಗಾಯಕವಾಡ ತನ್ನ ಸ್ನೇಹಿತೆಯೊಂದಿಗೆ ಉಮದಿ ಸೂಪರ್ ಬಜಾರ್ ಗೆ ಆಗಮಿಸಿದ್ದರು.  ಈ ಸಂದರ್ಭದಲ್ಲಿ ಕಾಸ್ಮೆಟಿಕ್ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಸೂಪರ್ ಬಜಾರಿನ ಕೆಲಸಗಾರರು ಮತ್ತು ರಾಜೇಶ್ವರಿ ಗಾಯಕವಾಡ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಕಾಸ್ಮೆಟಿಕ್ ಬಾಟಲ್ ಗಳನ್ನು ಓಪನ್ ಮಾಡಿ ನೋಡುತ್ತಿದ್ದ ರಾಜೇಶ್ವರಿ ಗಾಯಕವಾಡ ಅವರಿಗೆ ಅಲ್ಲಿನ ಮಹಿಳಾ ಕೆಲಸಗಾರರು ಖರೀದಿಸಿ.  ಆದರೆ, ತೆರೆದು ನೋಡಬೇಡಿ.  ಓಪನ್ ಮಾಡಿ ಇಟ್ಟ ವಸ್ತುಗಳನ್ನು ಗ್ರಾಹಕರು ಖರೀದಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.  ಈ ವಿಚಾರಕ್ಕೆ ಮಹಿಳಾ ಕ್ರಿಕೆಟ್ ಆಟಗಾರ್ತಿ ಮತ್ತು ಸೂಪರ್ ಬಜಾರಿನ ಕೆಲಸಗಾರ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.  ಆಗ ಸೂಪರ್ ಬಜಾರಿನ ಮಾಲೀಕ ಮಲ್ಲಿಕಾರ್ಜುನ ಆಗಮಿಸಿ ಕಾಸ್ಮೆಟಿಕ್ ಬಾಟಲ್ ಓಪನ್ ಮಾಡಬೇಡಿ.  ಓಪನ್ ಮಾಡಿಯೇ ಖರೀದಿ ಮಾಡುವುದಾದರೆ ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.  ಇದರಿಂದ ಕುಪಿತರಾದ ರಾಜೇಶ್ವರಿ ಗಾಯಕವಾಡ ನಾನು ಯಾರು ಗೊತ್ತಾ? ಎಂದು ಆವಾಜ್ ಹಾಕಿದ್ದಾರೆ.  ಅಲ್ಲದೇ, ತಮ್ಮ ಬೆಂಬಲಿಗರನ್ನು ಕರೆಯಿಸಿಕೊಂಡಿದ್ದಾರೆ.  ಆಗ ಬಂದ ಸುಮಾರು ಎಂಟರಿಂದ 10 ಜನ ಯುವಕರು ಸೂಪರ್ ಬಜಾರಿನ ಮಾಲೀಕ ಮಲ್ಲಿಕಾರ್ಜುನ ಉಮದಿ ಮತ್ತು ಅವರ ಪುತ್ರ ಪ್ರಶಾಂತ ಉಮದಿ ಹಾಗೂ ಕೆಲಸಗಾರರ ಮೇಲೆ  ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಶಾಂತ ಉಮದಿ ಅವರ ಕೈ, ತೋಳು ಹಾಗೂ ಬೆನ್ನಿಗೆ ಗಾಯಗಳಾಗಿವೆ.  ಹಲ್ಲೆ ಮಾಡಿದ ನಂತರ ರಾಜೇಶ್ವರಿ ಗಾಯಕವಾಡ ಮತ್ತು ಸಹಚರರು ಅಲ್ಲಿಂದ ತೆರಳಿದ್ದಾರೆ.  ಈ ಗಲಾಟೆ ಮಕತ್ತು ಹಲ್ಲೆಯ ವಿಡಿಯೋ ಸೂಪರ್ ಬಜಾರಿನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ,

ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ

ರಾಜೇಶ್ವರಿ ಗಾಯಕವಾಡ ಸ್ಪಷ್ಟನೆ

ಈ ಘಟನೆಯ ಸುದ್ದಿ ತಿಳಿದ ಆದರ್ಶ ನಗರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಯತೀಶ್ ಹಾಗೂ ಇತರರು ಆಗಮಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ.  ಆದರೆ, ಘಟನೆಯ ಕುರಿತು ಉಮದಿ ಸೂಪರ್ ಬಜಾರಿ ಮಾಲೀಕ ಮಲ್ಲಿಕಾರ್ಜುನ ಉಣದಿಯಾಗಲಿ ಅಥವಾ ಅವರ ಪುತ್ರ ಪ್ರಶಾಂತ ಉಮದಿಯಾಗಲಿ ಈವರೆಗೆ ದೂರು ನೀಡಿಲ್ಲ.

ಈ ಘಟನೆಯ ಬಗ್ಗೆ ಮಾತನಾಡಿರುವ ರಾಜೇಶ್ವರಿ ಗಾಯಕವಾಡ ದಾಂದಲೆ ಹಾಗೂ ಹಲ್ಲೆ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ.  ಬದಲಾಗಿ ಉಮದಿ ಸೂಪರ್ ಬಜಾರಿನ ಕೆಲಸಗಾರರೇ ನನ್ನ ಜೊತೆಗೆ ವಾಗ್ವಾದ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎಸ್ಪಿ ಎಚ್. ಡಿ. ಆನಂದಕುಮಾರ ಹೇಳಿದ್ದೇನು?

ಈ ಘಟನೆಯ ಕುರಿತು ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದು, ಉಮದಿ ಸೂಪರ್ ಬಜಾರಿನಲ್ಲಿ ನಡೆದ ಘಟನೆಯ ಬಗ್ಗೆ ಯಾರೊಬ್ಬರೂ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌