ಶಿಕ್ಷಕರ, ವಿವಿಗಳ ಸಮಸ್ಯೆ ನಿವಾರಣೆಗೆ ಅದತ್ಯೆ ನೀಡುವಂತೆ ಮಾಜಿ ಎಂಎಲ್ಸಿ ಅರುಣ ಶಹಾಪುರ ಆಗ್ರಹ

ವಿಜಯಪುರ:  ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಕರ, ಶಾಲಾ-ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ -2020 ಜಾರಿಗೊಳಿಸಿದ ಮೊದಲ ರಾಜ್ಯ ಎಂದು ಕರ್ನಾಟಕ ಹೆಗ್ಗಳಿಕೆ ಪಡೆದುಕೊಂಡಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ ನಾರಾಯಣ ಮತ್ತು ಶಿಕ್ಷಣ ಸಚಿವ ಬಿ. ಸಿ. ನಾಗೇಶ ಅವರು ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ.  ಆದರೆ, ಹಲವಾರು ಶಿಕ್ಷಕರ ಬೇಡಿಕೆಗಳು ನೌಕರರ ಬೇಡಿಕೆಗಳನ್ನು ಈಡೇರಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೆಯ ಪಿಂಚಣ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಸಿ ಈಡೇರಿಸಲು ಕ್ರಮ ಕೈಗೊಳ್ಳಬೇಕು.  ಖಾಸಗಿ ಅನುದಾನಿತ ವ್ಯವಸ್ಥೆಯಲ್ಲಿರುವ ಶಿಕ್ಷಕರಿಗೆ ಹಳೆಯ ಮತ್ತು ಹೊಸ ಎರಡು ಪಿಂಚಣ ವ್ಯವಸ್ಥೆ ಇರದಿರುವುದು ಸರಕಾರದ ಗಮನಕ್ಕಿದ್ದು, ಅವರಿಗೂ ನಿಶ್ಚಿತ ಪಿಂಚಣ ವ್ಯವಸ್ಥೆ ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು.  ಕಾಲ್ಪನಿಕ ವೇತನ ಬಡ್ತಿ ಕುರಿತು ಹಲವು ವರ್ಷಗಳಿಂದ ಕೇವಲ ಚರ್ಚೆಗಳು ನಡೆಯುತ್ತಿವೆ.  ಬೆಳಗಾವಿಯ ಈ ಅಧೀವೇಶನದಲ್ಲಾದರೂ ಚರ್ಚೆಯ ಮೂಲಕ ಪರಿಹಾರ ದೊರಕಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸುವುದಾಗಿ ಮಾಜಿ ಎಂಎಲ್‌ಸಿ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಅನುದಾನಿತ ಶಿಕ್ಷಣ ವ್ಯವಸ್ಥೆಯಲ್ಲಿ ಖಾಲಿ ಹುದೆಗಳ ಭರ್ತಿ, 1995ರ ನಂತರ ಆರಂಭವಾಗಿರುವ ಶಾಲಾ ಕಾಲೇಜುಗಳಿಗೆ ಅನುದಾನ ಒದಗಿಸುವ ಕುರಿತು ಹಾಗೂ 87-95ರ ಮಧ್ಯ ಆರಂಭವಾಗಿರುವ ಪದವಿ ಕಾಲೇಜುಗಳಿಗೂ ಅನುದಾನ ನೀಡುವುದು, ಐಟಿಐ ಕಾಲೇಜುಗಳ ಅನುದಾನಕ್ಕೆ ಒಳಪಡಿಸುವುದು, ಗಡಿ ಜಿಲ್ಲೆಗಳ ಸರಕಾರಿ ಶಾಲೆ ಕಾಲೇಜುಗಳ ಪರಿಸ್ಥಿತಿ ಸುಧಾರಣೆಗಳ ಬಗ್ಗೆಯೂ ಗಮನ ಹರಿಸಬೇಕಿದೆ.  ಭಾಷಿಕ ಅಲ್ಪಸಂಖ್ಯಾತ ಶಾಲಾ-ಕಾಲೇಜುಗಳ ಹುದ್ದೆ ಭರ್ತಿ, ವಿಭಜನೆಯಾದ ಪದವಿ ಪೂರ್ವ ಕಾಲೇಜುಗಳ ಖಾಲಿ ಹುದ್ದೆಗಳ ಭರ್ತಿ, ಸರಕಾರಿ ಶಾಲೆ ಕಾಲೇಜುಗಳಲ್ಲಿ ಹುದ್ದೆ ಭರ್ತಿ ಕುರಿತು ಮತ್ತು ಪರಿಹಾರದ ದೃಷ್ಟಿಯಲ್ಲಿ ಈ ಸದನದಲ್ಲಿ ಚರ್ಚೆ ಮಾಡಬೇಕೆಂದು ವಿಧಾನ ಪರಿಷತ್‍ನ ಶಿಕ್ಷಕ ಹಾಗೂ ಪದವಿಧರ ಮತಕ್ಷೇತ್ರದ 14 ಜನ ಶಾಸಕರಿಗೆ ವಿನಂತಿ ಮಾಡುತ್ತೇನೆ.  ಈ ಎಲ್ಲ ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸುವುದಾಗಿ ಅವರು ತಿಳಿಸಿದ್ದಾರೆ.

ಉನ್ನತ ಶಿಕ್ಷಣದಲ್ಲಿ ಕೂಡ ನಾನಾ ವಿವಿಗಳಲ್ಲಿ ಖಾಲಿ ಹುದ್ದೆಗಳ ಭರ್ರ್ತಿ, ಹೊಸ ವಿವಿಗಳಿಗೆ ಸಂಪೂರ್ಣ ಅಗತ್ಯ ಹುದ್ದೆಗಳ ಸೃಷ್ಟಿ ಮತ್ತು ಭರ್ತಿಗಾಗಿ ಶೀಘ್ರ ಕ್ರಮ ಕೈಗೊಳ್ಳಬೇಕು.  ಅತಿಥಿ ಉಪನ್ಯಾಸಕರ ಸೇವಾ ಸಕ್ರಮಕ್ಕೆ ಸೂಕ್ತ ಕ್ರಮ ವಹಿಸಬೇಕು.  ಎಲ್ಲ ವಿವಿಗಳ ಮೂಲ ಸೌಕರ್ಯಗಳ ತೀವ್ರ ಅಗತ್ಯವಿದ್ದು ಮತ್ತು ಅನುದಾನ ಅಗತ್ಯತೆಯಿದೆ.  ಅವುಗಳ ಸೌಕರ್ಯ ವೃದ್ಧಿಗಾಗಿ ಹೆಚ್ಚಿನ ಅನುದಾನ ಕಲ್ಪಿಸಲು ಸರಕಾರವೇ ಮುಂದಾಗಬೇಕು.  ಬೆಳಗಾವಿ ಅಧಿವೇಶನ ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಗಳ ಜೊತೆಗೆ ಉತ್ತರ ಕರ್ನಾಟಕದ ನಾನಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುವುದಾಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಕಾರ್ಯಾಧ್ಯಕ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಗೌರವಾಧ್ಯಕ್ಷರೂ ಆಗಿರುವ ಅರುಣ ಶಹಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌