ವೀರಶೈವ ಮಹಾಸಭೆ ನಿರ್ಧಾರಕ್ಕೆ ಬದ್ಧ- ವಸಂತ ಋುತು ಬಂದಾಗ ಕಾಗೆ ಯಾವುದು? ಕೋಗಿಲೆ ಯಾವುದು ಗೊತ್ತಾಗುತ್ತೆ- ವಚನಾನಂದ ಸ್ವಾಮೀಜಿ

ವಿಜಯಪುರ: ಈ ಮಧ್ಯೆ, ದಾವಣಗೆರೆಯಲ್ಲಿ ವೀರಶೈವ ಮಹಾಸಭೆ ಮೂರು ದಿನಗಳ ಕಾಲ ನಡೆಯಲಿದೆ.  ಈ ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದ ವಚನಾನಂದ ಶ್ರೀಗಳು, ಮೂರನೇ ಪೀಠ ಮೂರಾಬಟ್ಟೆ ಎಂಬುದು ಯತ್ನಾಳ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು.  ಮಾತನಾಡುವವರ ಬಗ್ಗೆ ಏನೂ ಮಾಡಲು ಆಗುವುದಿಲ್ಲ.  ಅವರು ಮಾತಾಡುತ್ತಲೇ ಇರುತ್ತಾರೆ.  ಬೈದವರೆನ್ನ ಬಂಧುಗಳೆನ್ನೆ.  ಇದು ಬಸವ ಧರ್ಮ ಹೇಳುತ್ತದೆ.  ಎತ್ತರದಲ್ಲಿ ಇರುವುದರ ಬಗ್ಗೆ ಎಲ್ಲರೂ ಮಾತಾಡುತ್ತಾರೆ.  ನಾವು ನಮ್ಮ ಕೆಲಸ ಮಾಡುತ್ತಿರಬೇಕು ಎಂದು ವಚನಾನಂದ ಸ್ವಾಮೀಜಿ ಮಾರ್ಮಿಕವಾಗಿ ಹೇಳಿದರು.

 

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ನಡೆಯಲಿರುವ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.

ಯತ್ನಾಳ ಆರೋಪಕ್ಕೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಚನಾನಂದ ಶ್ರೀಗಳು ಹಣ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದರು.

ಈ ಕುರಿತು ಸದನದಲ್ಲಿ ಪ್ರಸ್ತಾಪಿಸುವುದಾಗಿ ಯತ್ನಾಳ ಹೇಳಿರುವುದಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು.  ಅವಶ್ಯವಾಗಿ ಪ್ರಸ್ತಾಪಿಸಲಿ.  2020 ರಲ್ಲಿ ಸರಕಾರ ಅನುದಾನ ನೀಡಿದೆ.  ಆಗ ಈ ಮೀಸಲಾತಿ, ಪಾದಯಾತ್ರೆ ಇರಲಿಲ್ಲ.  ನಾವು ಪೀಠಕ್ಕೆ ಬಂದ ಮೇಲೆ ಯಾವುದೇ ಹಣಕಾಸಿನ ವ್ಯವಹಾರ ನಡೆಸಿಲ್ಲ.  ಮಠದ ಅಭಿವೃದ್ಧಿಗೆ ರೂ. 10 ಕೋ. ಹಣ ಬಂದಿದೆ.  ಆದರೆ, ಅದು ಮೀಸಲಾತಿ ಹೋರಾಟಕ್ಕೆ ಅಲ್ಲ.  ಸ್ವಾಮೀಜಿಗಳು ಸಹ ಪ್ರಶ್ನೆಗೆ ಒಳಪಡಬೇಕು.  ಚರ್ಚೆಗಳು ಆಗಬೇಕು.  ನಾವು ಹೆದರುವ ಅವಶ್ಯಕತೆ ಇಲ್ಲ ಎಂದು ಸ್ವಾಮೀಜಿ ಹೇಳಿದರು.

ಬ್ರೋಕರ ಸ್ವಾಮಿಜಿ ಎಂದ ಯತ್ನಾಳ ಆರೋಪ‌ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಸಂತ ಋತು ಬಂದಾಗ ಕಾಗೆ ಯಾವುದು? ಕೋಗಿಲೆ ಯಾವುದು? ಎಂದು ಗೊತ್ತಾಗುತ್ತದೆ.  ಶೀಘ್ರದಲ್ಲಿ ವಸಂತರುತು ಬರಲಿದೆ, ಆಗ ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.

ಪಂಚಮಸಾಲಿ ಮೀಸಲಾತಿ ಕ್ರೆಡಿಟ್ ಗೆ ಎರಡೂ ಬಣಗಳ ಹೋರಾಟ ವಿಚಾರ

ಈ ಮಧ್ಯೆ, ಪಂಚಮಸಾಲಿ ಮೀಸಲಾತಿ ಹೋರಾಟದ ಕ್ರೆಡಿಟ್ ಗಾಗಿ ಸಮುದಾಯದ ಎರಡೂ ಬಣಗಳ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 2018ರಿಂದ ಹೋರಾಟ ಆರಂಭವಾಗಿದೆ.  ಅದಕ್ಕೂ ಮೊದಲು ಯಾಕೆ ಆಗಿರಲಿಲ್ಲ? ನಾವು ಹೋರಾಟ ಆರಂಭಿಸಿದ್ದೇವೆ.  ನಾವು ರಾಷ್ಟ್ರ ಮಟ್ಟದಲ್ಲಿ ಮೊದಲಿನಿಂದಲೂ ಯೋಗ, ಆಧ್ಯಾತ್ಮದಲ್ಲಿ ಇದ್ದೇವೆ.  ಯಾರು ನಿಜವಾಗಿ ಹೋರಾಟ ಆರಂಭ ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ.  ನಮ್ಮ ಹೋರಾಟ ನಿರಂತರವಾಗಿ ಇದೆ ಎಂದು ವಚನಾನಂದ ಶ್ರೀಗಳು ಸ್ಪಷ್ಟಪಡಿಸಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದರು

ರಾಜಕೀಯಕ್ಕೆ ಪಂಚಮಸಾಲಿ ಪೀಠದ ಬಳಕೆ ವಿಚಾರ

ಪಂಚಮಸಾಲಿ ಪೀಠವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜೊತೆಗೆ ಎಲ್ಲರೂ ಇದ್ದಾರೆ.  ಹರಿಹರದಲ್ಲಿ ಹರ ಜಾತ್ರೆ ಮಾಡಿದಾಗ ಎಲ್ಲರೂ ಇದ್ದರು.  ಈಗಲೂ ಇದ್ದಾರೆ.  ಒಂದಿಬ್ಬರು ಇಲ್ಲದಿದ್ದರೆ ಸಮಸ್ಯೆ ಇಲ್ಲ.  ಎಲ್ಲರೂ ನಮ್ಮೊಂದಿಗೆ ಇದ್ದಾರೆ ಎಂದು ಅವರು ಹೇಳಿದರು.

ಸರಕಾರಕ್ಕೆ ಡೆಡಲೈನ್ ವಿಚಾರ

ಮೀಸಲಾತಿ ಘೋಷಣೆ ಮಾಡುವಂತೆ ಸರಕಾರಕ್ಕೆ ಡೆಡಲೈನ್ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ನಾವು ಡೆಡ್ ಲೈನ್ ನೂ ಕೊಡಲ್ಲ.  ಹೆಡ್ ಲೈನ್ ನೂ ಕೊಡಲ್ಲ.  ನಮ್ಮ‌ ಸಮುದಾಯಕ್ಕೆ ಲೈಫ್ ಲೈನ್ ಕೊಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಲಿಂಗಾಯಿತ ಆಲಗೂರ ಪೀಠದ ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಗುರುಶಾಂತ ನಿಡೋಣಿ, ಸುರೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌