Ayyappaswamy Padayatre: ಜಲನಾಯಕ ಸಿಎಂ ಆಗಲೆಂದು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಹೊರಟ ಅನ್ನದಾತ

ವಿಜಯಪುರ: ಬಸವ ನಾಡಿಗೆ ನೀರಾವರಿ ಕಲ್ಪಿಸಿದ ಆಧುನಿಕ ಭಗೀರಥ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತು ರೈತರೊಬ್ಬರು ಕೊರಳಲ್ಲಿ ಎಂ. ಬಿ. ಪಾಟೀಲರ ಭಾವಚಿತ್ರ ಹಾಕಿಕೊಂಡು ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಏಕಾಂಗಿಯಾಗಿ ಪಾದಯಾತ್ರೆಯಲ್ಲಿ ತೆರಳಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ರೈತ ರಾಜಕುಮಾರ ರವೀಂದ್ರ ಹೊನವಾಡ(28) ಬಾಬಾನಗರದಿಂದ ಶಬರಿಮಲೈವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. 5.5 ಎಕರೆ ಹೊಲ ಹೊಂದಿರುವ ಈ ರೈತ ದ್ರಾಕ್ಷಿ ಬೆಳೆಗಾರರಾಗಿದ್ದಾರೆ. ತಮ್ಮ ಭಾಗ ಈಗ ನೀರಾವರಿಯಾಗಿದ್ದು, ಇದಕ್ಕೆಲ್ಲ ಕಾರಣರಾದ ಎಂ. ಬಿ. ಪಾಟೀಲರು ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ. ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತು ಸ್ವಾಮಿ ಅಯ್ಯಪ್ಪ ಸನ್ನಿಧಿಗೆ ಪಾದಯಾತ್ರೆ ಬೆಳೆಸಿದ್ದಾರೆ.

ರಾಜಕುಮಾರ ರವೀಂದ್ರ ಹೊನವಾಡ

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಕುಮಾರ ರವೀಂದ್ರ ಹೊನವಾಡ, ಈ ಹಿಂದೆ ತಮ್ಮ ಊರು ಸೇರಿದಂತೆ ಈ ಭಾಗದಲ್ಲಿ ನೀರಿನ ತೀವ್ರ ಕೊರತೆಯಿತ್ತು. ಹತ್ತಾರು ಬೋರವೆಲ್ ಕೊರೆದರೂ ನೀರು ಸಿಗುತ್ತಿರಲಿಲ್ಲ. ಹಲವಾರು ರೈತರು ತೋಟಗಾರಿಕೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಖರೀದಿಸಬೇಕಾಗಿತ್ತು. ಆದರೆ, ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವಾರದ ನಂತರ ಬಬಲೇಶ್ವರ ಮತಕ್ಷೇತ್ರವಷ್ಟೇ ಅಲ್ಲ, ಇಡೀ ಜಿಲ್ಲೆಯ ಅದೃಷ್ಟದ ಬಾಗಿಲು ತೆರೆಯಿತು. ಈಗ ತಾವೂ ಸೇರಿದಂತೆ ಎಲ್ಲ ರೈತರು ನೀರು ಖರೀದಿಸುವ ತಾಪತ್ರಯ ತಪ್ಪಿದೆ. ಜನ, ಜಾನುವಾರು ಮತ್ತು ಬೆಳೆಗಳಿಗೆ ನೀರು ಒದಗಿಸಿರುವ ಆಧುನಿಕ ಭಗೀರಥ ಎಂ. ಬಿ. ಪಾಟೀಲರು ಮುಖ್ಯಮಂತ್ರಿಯಾಗಲಿ. ಈ ಮೂಲಕ ಅವರು ನಾಡಿನಾದ್ಯಂತ ಉತ್ತಮ ಅಭಿವೃದ್ಧಿ ಮಾಡಲಿ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿರುವುದಾಗಿ ತಿಳಿಸಿದ್ದಾರೆ.
ಡಿ. 6 ರಿಂದ ಬಾಬಾನಗರದಿಂದ ತಾವು ಪಾದಯಾತ್ರೆ ಆರಂಭಿಸಿದ್ದು, ಈಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಾಟಿ ಪಾದಯಾತ್ರೆ ಮುಂದವರೆಸಿದ್ದೇನೆ. ಪ್ರತಿದಿನ ಸುಮಾರು 40 ಕಿ. ಮೀ. ಪಾದಯಾತ್ರೆ ನಡೆಸುತ್ತೇನೆ. ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಎಂ. ಬಿ. ಪಾಟೀಲರ ಭಾವಚಿತ್ರಕ್ಕೆ ಪೂಜೆ ಮಾಡುತ್ತೇನೆ. ಪ್ರತಿದಿನ ಸಂಜೆ ತಲಪುವ ಗ್ರಾಮಗಳಲ್ಲಿ ಅಯ್ಯಪ್ಪಸ್ವಾಮಿ ಭಕ್ತರ ಸನ್ನಿಧಾನದಲ್ಲಿ ಮೊಕ್ಕಾಂ ಮಾಡುತ್ತೇನೆ. ಅಲ್ಲಿ ಮಾತ್ರ ಪ್ರಸಾದ ಅಂದರೆ ಊಟ ಮಾಡುತ್ತೇನೆ. ಅಯ್ಯಪ್ಪ ಸ್ವಾಮಿ ಸನ್ನಿಧಾನ ಇರದ ಗ್ರಾಮಗಳ ಬಳಿ ನೀರಿನ ಸೌಲಭ್ಯ ಇರುವ ಕಡೆ ತಂಗುತ್ತೇನೆ. ನಂತರ ಇರುವ ಕಡೆ ತಂಗುತ್ತೇನೆ. ಮತ್ತೆ ಬೆಳಿಗ್ಗೆ ಸ್ನಾನ ಪೂಜಾ ಕೈಂಕರ್ಯ ಮುಗಿಸಿ ಪಾದಯಾತ್ರೆ ಮುಂದುವರೆಸುತ್ತಿದ್ದೇನೆ. ದಾರಿಯಲ್ಲಿ ಕುಡಿಯಲು ನೀರು ಮತ್ತು ತಿನ್ನಲು ಬಿಸ್ಕತ್ ಬಳಸುತ್ತೇನೆ. ಈಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಾಟಿ ಮುಂದೆ ಸಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಸುಮಾರು 1300 ಕಿ. ಮೀ. ಪಾದಯಾತ್ರೆ ಇದಾಗಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನದ ಬಳಿಕ ಬಾಬಾನಗರಕ್ಕೆ ಮರಳಿ ಕೃಷಿಯಲ್ಲಿ ತೊಡಗುವುದಾಗಿ ರಾಜಕುಮಾರ ರವೀಂದ್ರ ಹೊನವಾಡ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಬಾನಗರ ಗ್ರಾಮದ ನಿವಾಸಿ ಮತ್ತು ರೈತನ ಸ್ನೇಹಿತ ಶಂಕರಗೌಡ ಗುರನಗೌಡ ಬಿರಾದಾರ ಅವರು, ರಾಜಕುಮಾರ ರವೀಂದ್ರ ಹೊನವಾಡ ಪಾದಯಾತ್ರೆ ಮಾಡುವುದಾಗಿ ಹೇಳಿದಾಗ ನಾವೆಲ್ಲರೂ ಪಾದಯಾತ್ರೆ ಕಷ್ಟವಾಗುತ್ತದೆ, ಹೋಗಬೇಡಿ ಎಂದು ಕಿವಿಮಾತು ಹೇಳಿದ್ದೇವು. ಆದರೆ, ಅವರು ತಮ್ಮ ಮಾತಿಗೆ ಒಪ್ಪದೇ, ಎಂ. ಬಿ. ಪಾಟೀಲರ ಮೇಲಿರುವ ಭಕ್ತಿಭಾವದಿಂದ ಶಬರಿಮಲೈ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಎಂ. ಬಿ. ಪಾಟೀಲರು ಈ ಭಾಗದಲ್ಲಿ ಮಾಡಿರುವ ನೀರಾವರಿ ಇಲ್ಲಿನ ರೈತರಲ್ಲಿ ಅಭಿಮಾನವನ್ನು ದಿನೇ ದಿನೇ ಹೆಚ್ಚಿಸುತ್ತಿದ್ದು, ನಾನಾ ಬಗೆಯಲ್ಲಿ ಭಕ್ತರು ಹರಕೆ ತೀರಿಸುತ್ತಿರುವುದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌