Adilshahi Dynasty: ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಆದಿಲಶಾಹಿ ಸಾಮ್ರಾಜ್ಯದ ಪ್ರಮುಖಾಂಶಗಳ 19 ಕನ್ನಡ ಸಂಪುಟಗಳು ಲೋಕಾರ್ಪಣೆಗೆ ಸಜ್ಜು

ವಿಜಯಪುರ: ಬಸವ ನಾಡು ವಿಜಯಪುರ ಎಂದರೆ ಸಾಕು ತಟ್ಟನೆ ನೆನಪಿಗೆ ಬರುವುದು ಐತಿಹಾಸಿಕ ಗೋಳಗುಮ್ಮಟ.  ಈ ಪ್ರಾಚೀನ ಸ್ಮಾರಕದ ನಿರ್ಮಾಪಕರಾದ ಆದಿಲ್ ಶಾಹಿ ಮನೆತನದ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಸಂಗತಿಗಳು ದಾಖಲಾಗಿವೆ. 

ಆದರೆ, ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಈ ಸಾಮ್ರಾಜ್ಯದ ಬಾದಷರು ನಾಡಿನ ಸಮೃದ್ಧಿಗೆ ನೀಡಿರುವ ಕೊಡುಗಳನ್ನು ವರ್ಷಾನುಗಟ್ಟಲೆ ಸಂಶೋಧಿಸಿ ಸಂಗ್ರಹಿಸಲಾಗಿರುವ 19 ಕನ್ನಡ ಸಂಪುಟಗಳು ಲೋಕಾರ್ಪಣೆಗೆ ಸಜ್ಜಾಗಿವೆ.

ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಈ ಸಂಪುಟಗಳನ್ನು ಹೊರತಂದಿದೆ.  ಡಿ. 18 ರಂದು ರವಿವಾರ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ವಿದೇಶಾಂಗ ಖಾತೆ ಮಾಜಿ ಸಚಿವ ಸಲ್ಮಾನ ಖುರ್ಶಿದ ಲೋಕಾರ್ಪಣೆ ಮಾಡಲಿದ್ದು, ಖ್ಯಾತ ಅಂಕಣಕಾರ ಸುಧೀಂದ್ರ ಕುಲಕರ್ಣಿ ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳುತ್ತಿದ್ದು, ಕೇಂದ್ರ ಮಾಜಿ ಸಚಿವ ಮತ್ತು ರಾಜ್ಯಸಭೆಯ ಉಪಸಭಾಪತಿಯಾಗಿದ್ದ ಕೆ. ರಹಮಾನಖಾನ ಅಧ್ಯಕ್ಷತೆ ವಹಿಸಲಿದ್ದಾರೆ.  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಸಂಶೋಧನೆ ಕೇಂದ್ರದ ನಿರ್ದೇಶಕ ಕೃಷ್ಣ ಕೊಲ್ಹಾರ ಕುಲಕರ್ಣಿ, ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಸಂಯೋಜಕ ವಿ. ಡಿ. ಐಹೊಳ್ಳಿ ಉಪಸ್ಥಿತರಿರಲ್ಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕೃಷ್ಣ ಕೊಲ್ಹಾರ ಕುಲಕರ್ಣಿ, ಮಧ್ಯಯುಗೀನ ಭಾರತದ ಚರಿತ್ರೆಯಲ್ಲಿ ವಿಜಯಪುರದ ಆದಿಲಶಾಹಿಗಳ ಪಾತ್ರ ಬಹು ದೊಡ್ಡದಾಗಿದೆ.  ದಕ್ಷಿಣ ಭಾರತದ ಬಹುಪಾಲು ಪ್ರದೇಶವನ್ನು ಈ ಬಾದಷಹರು ವಿಜಯಪುರ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಇಂದಿನ ಅಖಂಡ ಕರ್ನಾಟಕವನ್ನು ಅವರು ಸುಮಾರು ಒಂದು ಶತಮಾನದಷ್ಟು ಕಾಲ ತಮ್ಮ ಅಂಕಿತದಲ್ಲಿ ಇಟ್ಟುಕೊಂಡಿದ್ದರು.  ಹೀಗಾಗಿ ಆದಿಲ ಶಾಹಿಗಳ ಚರಿತ್ರೆಯನ್ನು ಅಭ್ಯಸಿಸದೆ ಮಧ್ಯಯುಗೀನ ಭಾರತದ ಅದರಲ್ಲೂ ಕರ್ನಾಟಕದ ಚರಿತ್ರೆ ಪೂರ್ಣಗೊಳ್ಳುವುದಿಲ್ಲ.  ನಾಡಿನ ವಿಶ್ವವಿದ್ಯಾಲಯಗಳು, ಭಾರತೀಯ ಇತಿಹಾಸ ಅನುಸಂಧಾನ ಇತ್ಯಾದಿ ಸಂಸ್ಥೆಗಳು ಇತಿಹಾಸದ ಕೆಲಸ ಮಾಡುತ್ತಿದ್ದರೂ ಬಿಜಾಪುರ ಇತಿಹಾಸದ ವಿಷಯದಲ್ಲಿ ಆಗಬೇಕಾದಷ್ಟು ಆಗಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಶೋಧಕ, ಸಾಹಿತಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿದರು

ಆದಿಲ್‌ ಶಾಹಿಗಳ ಇತಿಹಾಸ ಅಧ್ಯಯನಕ್ಕೆ ಬೇಕಾಗುವ ಮೂಲ ಆಕರಗಳು ವಿಶ್ವಾದ್ಯಾಂತ ಚದುರಿ ಹೋಗಿರುವುದು ಮತ್ತು ಅವು ಅರೇಬಿಕ್ ಪರ್ಶಿಯನ್, ದಖಣಿ ಭಾಷೆಗಳಲ್ಲಿರುವುದು ಸಂಶೋಧನೆ ನಡೆಸಲು ಅಡ್ಡಿಯಾಗಿವೆ.  ಈ ಕೊರತೆಯನ್ನು ಗಮನಿಸಿ ಬಿಜಾಪುರ ಆದಿಲಶಾಹಿ ಕಾಲದ ಸಾಹಿತ್ಯವನ್ನು ಕನ್ನಡದ ಮೂಲಕ ಪ್ರಕಟಿಸುವ ಪ್ರಯತ್ನ ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆ ಮೂಲಕ ಪೂರ್ಣಗೊಳಿಸಲಾಗಿದೆ.

ವಚನಪಿತಾಮಹ ಡಾ. ಫ. ಗು.ಹಳಕಟ್ಟಿ ಸಂಶೋಧನ ಕೇಂದ್ರವು ಕಳೆದ ದಶಕದಿಂದ ಸಂಶೋಧನ ಕ್ಷೇತ್ರದಲ್ಲಿ ಅಪರೂಪದ ಕೆಲಸವನ್ನು ಮಾಡುತ್ತಿದೆ. ಡಾ. ಫ. ಗು. ಹಳಕಟ್ಟಿ ಅವರ ಸಮಗ್ರ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದೆ. 11 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ.  ಇನ್ನು ಹಲವಾರು ಪದವಿ ಪಡೆಯುವ ದಾರಿಯಲ್ಲಿದ್ದಾರೆ.  ಇದಕ್ಕೆಲ್ಲ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ನಿರಂತರ ಬೆಂಬಲವೇ ಕಾರಣವಾಗಿದೆ.  ಅವರ ಆಸಕ್ತಿಯಂತೆ ಸಂಶೋಧನ ಕೇಂದ್ರವು ಆದಿಲಶಾಹಿ ಸಾಹಿತ್ಯ ಅನುವಾದ ಯೋಜನೆಯನ್ನು ಕರ್ನಾಟಕ ಸರಕಾರದ ಧನಸಹಾಯದೊಂದಿಗೆ 2012-13ರಲ್ಲಿ ಪ್ರಾರಂಭಿಸಿತು.  ಡಾ. ಎಂ. ಎಂ. ಕಲಬುರ್ಗಿ ಅಧ್ಯಕ್ಷತೆಯಲ್ಲಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ನಿರ್ದೇಶಕರಾದರು.  ಇದು ಭಾರತದಲ್ಲಿಯೇ ಒಂದು ಅಪರೂಪದ ಯೋಜನೆ.  ಒಂದು ರಾಜಮನೆತನದ ಸಂಪೂರ್ಣ ಸಾಹಿತ್ಯವನ್ನು ನೆಲದ ಭಾಷೆಯಲ್ಲಿ ತಂದಿರುವುದು ವಿರಳ.  ಯೋಜನೆಯನ್ನು ಕೈಗೆತ್ತಿಕೊಂಡಾಗ ಅನುವಾದ ಮಾಡಲು ಒಂದೇ ಒಂದು ಹಸ್ತಪ್ರತಿಯೂ ವಿಜಯಪುರದಲ್ಲಿ ಇರಲಿಲ್ಲ ಎಂದು ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದರು.

ಪ್ರಾರಂಭದಲ್ಲಿ ಆದಿಲಶಾಹಿ ಚರಿತ್ರೆಗೆ ಸಂಬಂಧಪಟ್ಟ ಕೆಲವು ಚರಿತ್ರ ಗ್ರಂಥಗಳ ಪಟ್ಟಿಯನ್ನು ಮಾಡಲಾಯಿತು. ಅವುಗಳು ದೊರೆಯುವ ಸಂಭಾವ್ಯ ಸ್ಥಳಗಳನ್ನೂ ಗುರುತಿಸಿ ಹಸ್ತಪ್ರತಿಗಳ ಶೋಧ ನಡೆಸಲಾಯಿತು.  ಹೈದರಾಬಾದಿನ ಸಾಲಾರಜಂಗ ವಸ್ತು ಸಂಗ್ರಹಾಲಯ, ಆಂದ್ರಪ್ರದೇಶ, ಪುಣೆ, ಔರಂಗಾಬಾದ ಆರ್ಕೀವ್ಸಗಳು, ಭಾರತ ಇತಿಹಾಸ ಸಂಶೋಧಕ ಮಂಡಳಿ ಪುಣೆ, ರಾಷ್ಟ್ರೀಯ ಪತ್ರಾಗಾರ ದೆಹಲಿ, ಭಾರತೀಯ ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯಗಳು ಸೇರಿದಂತೆ ವರುಷಾನುಗಟ್ಟಲೆ ಸುತ್ತಾಡಿ ಮೂಲ ಪರ್ಶಿಯನ್, ಅರೇಬಿಕ್, ದಖಣಿ ಉರ್ದು ಹಸ್ತಪ್ರತಿಗಳನ್ನು ಗುರುತಿಸಿ ಅವುಗಳ ನಕಲುಗಳನ್ನು ಸಂಗ್ರಹಿಸಲಾಯಿತು.  ಜೊತೆಗೆ ಉರ್ದುವಿನಲ್ಲಿ, ಇಂಗ್ಲಿಷಿನಲ್ಲಿ, ಮರಾಠಿಯಲ್ಲಿ ಅನುವಾದವಾಗಿರುವ ವಿಶೇಷವಾಗಿ ಫರ್ಮಾನುಗಳನ್ನು(ಆದೇಶಗಳನ್ನು), ಕೆಲವು ಕೃತಿಗಳನ್ನು ಸಂಗ್ರಹಿಸಲಾಯಿತು ಎಂದು ಅವರು ತಿಳಿಸಿದರು.

ಈ ಯೋಜನೆ ಪ್ರಾರಂಭವಾದ ನಾಲ್ಕು ವರುಷಗಳಲ್ಲಿ 21 ಪುಸ್ತಕಗಳನ್ನು 19 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.  20 ಜನರು ಅನುವಾದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.  ಇದರ ಜೊತೆಗೆ ಕನ್ನಡ ಭಾಷೆ ಸೀಮಿತವಾಯಿತೆಂದು ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಈ ಎಲ್ಲ ಕೃತಿಗಳನ್ನು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಿಗೂ ಅನುವಾದ ಮಾಡಲು ಸಂಶೋಧನ ಕೇಂದ್ರ ನಿರ್ಧರಿಸಿದೆ.  ಪ್ರಾಯೋಗಿಕವಾಗಿ ತಾರೀಖೆ ಅಲಿ ಆದಿಲಶಾಹ ಉರ್ದುವಿನಲ್ಲೂ, ಕರ್ನಾಟಕದಲ್ಲಿಯ ಪರ್ಶಿಯನ್ ಅರೇಬಿಕ್ ಮತ್ತು ಉರ್ದು ಭಾಷೆಗಳ ಶಾಸನಗಳು ಮತ್ತು ತಜಕೀರಾತ್ ಉಲ್ ಮುಲ್ಕ ಎಂಬ ಎರಡು ಪುಸ್ತಕಗಳನ್ನು ಇಂಗ್ಲಿಷನಲ್ಲಿ ಪ್ರಕಟಿಸಲಾಗಿದೆ.  ಆದಿಲ್ ಶಾಹಿಗಳು ಸರ್ವಧರ್ಮ ಸಹಿಷ್ಣುಗಳಾಗಿದ್ದು, ದಾಸ ಸಾಹಿತ್ಯ, ಸೂಫಿ ಸಾಹಿತ್ಯವನ್ನೂ ಪ್ರೋತ್ಸಾಹಿಸಿದ್ದರು.  ಅವರ ಕಾಲದಲ್ಲಿ ಒಂದೂ ಕೋಮು ಗಲಭೆಗಳು ಆಗಿರಲಿಲ್ಲ.  ಅವರ ಕಾಲ ಅಭಿವೃದ್ಧಿಯಿಂದ ಕೂಡಿತ್ತು.  ಈ ಎಲ್ಲ ಅಂಶಗಳನ್ನು ದಾಖಲೆ ಸಮೇತ ಹೇಳುತ್ತಿರುವುದಾಗಿ ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಶೋಧನೆ ಕೇಂದ್ರದ ಪದಾಧಿಕಾರಿಗಳಾದ ಡಾ. ಎಂ. ಎಸ್. ಮದಭಾವಿ, ಡಾ. ಮಹಾಂತೇಶ ಬಿದಾದಾರ ಮತ್ತು ವಿ. ಡಿ. ಐಹೊಳ್ಳಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌