ಡಿ. 30ಕ್ಕೆ ವಿಜಯಪುರದಲ್ಲಿ ರಾಜ್ಯ ಸರಕಾರ ಯುಕೆಪಿಗೆ ನೀಡಿರುವ ಕೊಡುಗೆಯನ್ನು ಬಿಚ್ಚಿಡುತ್ತೇವೆ- ಎಂ. ಬಿ. ಪಾಟೀಲ

ವಿಜಯಪುರ: ಡಿ. 30 ರಂದು ವಿಜಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಮತ್ತು ಈಗಿನ ರಾಜ್ಯ ಸರಕಾರ ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಿಚ್ಚಿಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಷಯದ ಎತ್ತರವನ್ನು 524.256 ಮೀ. ಗೆ ಹೆಚ್ಚಿಸುವ ಕುರಿತು ಮತ್ತು ನಮ್ಮ ಪಾಲಿನ 130 ಟಿಎಂಸಿ ನೀರನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರ ಮತ್ತು ಈಗಿನ ಸರಕಾರ ಏನೆಲ್ಲ ಭರವಸೆ ನೀಡಿತ್ತು.  ಈಗಿನ ಸರಕಾರ ಏನೆಲ್ಲ ಕ್ರಮ ಕೈಗೊಂಡಿದೆ ಎಂಬುದನ್ನು ಅಂದು ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಬಿಚ್ಚಿಡುತ್ತೇವೆ ಎಂದು ಎಂದು ತಿಳಿಸಿದರು.

ಕೃಷ್ಣಾ ಜಲವಿವಾದ ವಿಚಾರ

ಕಾವೇರಿ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ನಾನು ತಿಂಗಳಗಟ್ಟಲೆ ದೆಹಲಿಯಲ್ಲಿದ್ದು ಕೆಲಸ ಮಾಡಿದ್ದೇನೆ.  ರಾಜ್ಯ ಪರ ನ್ಯಾಯವಾದಿ ಫಾಲಿ ಎಪ್. ನಾರಿಮನ್ ಅವರು ವಾದ ಮಂಡಿಸಲು ಹಿಂಜರಿದಾಗ ಸಿಎಂ ಮಾತನ್ನೂ ಕೇಳದೆ ದೆಹಲಿಗೆ ಹೋಗಿ ವಕೀಲರ ಮನವೊಲಿಸಿ ಮತ್ತೆ ವಾದ ಮಂಡಿಸುವಂತೆ ಒಪ್ಪಿಸಿದ್ದೆ.  ಆಗ ಸಿದ್ಧರಾಮಯ್ಯ ಕೂಡ ನನ್ನ ಕಾರ್ಯವನ್ನು ಶ್ಲಾಘಿಸಿದ್ದರು.  ಬಹಳ ಬದ್ಧತೆಯಿಂದ ನಮ್ಮ ಸರಕಾರವಿದ್ದಾಗ ಕೆಲಸ ಮಾಡಿದ್ದೇವೆ.  ಈಗ ಕೃಷ್ಣಾ ವಿಚಾರದಲ್ಲಿಯೂ ಸರಕಾರ ಏನು ಮಾಡಿದೆ? ಏನು ಮಾಡಿಲ್ಲ ಎಂಬುದನ್ನು ಡಿ. 30 ರಂದು ಜನರ ಮುಂದೆ ಬಿಚ್ಚಿಡುತ್ತೇವೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟಿನಲ್ಲಿ ಕೃಷ್ಣಾ ನೀರು ಹಂಚಿಕೆ ಪ್ರಕರಣದ ವಿಚಾರಣೆ ಬಹಳ ವಿಳಂಬವಾಗಿ ನಡೆಯುತ್ತಿದೆ.  ಈ ಹಿಂದೆ ಇದ್ದ ಅಖಂಡ ಆಂಧ್ರಪ್ರದೇಶದ ಪ್ರಕರಣದ ವಿಚಾರಣೆ ನಡೆಯುತ್ತಿದೆ.  ಈಗ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರಕಾರ ಈ ನಿಟ್ಟಿನಲ್ಲಿ ಸೂಕ್ರ ಕ್ರಮ ಕೈಗೊಳ್ಳಬೇಕು.  ಮಹಾದಾಯಿ ನೊಟೀಫಿಕೇಶನ್ ಬೇಗ ಆಗಬೇಕಾಗಿದೆ.  ಆದರೆ, ನಾವು ನೊಟೀಫಿಕೇಶನ್ ಗಾಗಿ ಕಾಯದೇ ಪೂರ್ವಭಾವಿಯಾಗಿ ಮೂಲಭೂತ ಸೌಕರ್ಯ ನಿರ್ಮಿಸಿದ್ದೇವೆ.  ಕೆರೆಗಳಿಗೆ ಕುಡಿಯುವ ನೀರು ತುಂಬಿಸಿದ್ದೇವೆ.  ನೊಟೀಫಿಕೇಶನ್ ಗಾಗಿ ಕಾಯುತ್ತಿದ್ದರೆ ಈ ಕೆಲಸಗಳಾಗಲು ಮತ್ತೆ 20 ವರ್ಷಗಳೇ ಬೇಕಾಗುತ್ತಿತ್ತು.  ಆದರೆ, ನಾವು ಮುಂಚಿತವಾಗಿಯೇ ಎಲ್ಲ ಕೆಲಸ ಮಾಡಿದ್ದೇವೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

40% ಕಮಿಷನ್ ಆರೋಪ ವಿಚಾರ

ರಾಜ್ಯ ಸರಕಾರದ ಶೇ. 40 ಭ್ರಷ್ಚಾಚಾರದ ಕುರಿತು ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಪ್ರಕರಣದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದರು.

ಭ್ರಷ್ಟಾಚಾರ ಆರೋಪ ಕೇಳಿ ಬಂದಾಗ ನೀವು ಐಟಿ, ಇಡಿ, ಸಿಬಿಐ ಧಾಳಿ ನಡೆಸುತ್ತೀರಿ.  ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಹುತೇಕ ಸಚಿವರು ಮತ್ತು ಇಲಾಖೆಗಳು ಶೇ. 40 ಕಮಿಷನ್ ನಲ್ಲಿ ಭಾಗಿಯಾಗಿವೆ ಎಂದು ಆರೋಪ ಮಾಡಿದ್ದರು.  ಆದರೆ, ಅವರ ಮೇಲೆ ಐಟಿ, ಸಿಬಿಐ, ಇಡಿ ಧಾಳಿ ನಡೆಸಿಲ್ಲ.  ಬದಲಾಗಿ ಆರೋಪ ಮಾಡಿದವರನ್ನು ಹತ್ತಿಕ್ಕುವ ಕೆಲಸ ನಡೆದಿದೆ.  ಕಾನೂನು ಹೋರಾಟದನ್ವಯ ಕೆಂಪಣ್ಣ ಅವರ ಬಂಧನವಾಗಿ ಈಗ ಜಾಮೀನು ಸಿಕ್ಕಿರುವುದು ಬೇರೆ ವಿಚಾರ ಎಂದು ಹೇಳಿದರು.

ದೂರು ನೀಡಿದರೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಚುನಾವಣೆಗೆ ಬಂದಾಗ ನಾವು ಅವರಿಗೆ ಪ್ರಶ್ನೆ ಮಾಡುತ್ತೇವೆ.  ಭ್ರಷ್ಟಾಚಾರ ಆರೋಪ ಇರುವವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಬೇರೆ ಕಡೆ ಧಾಳಿ ನಡೆಸುವ ನೀವು ಈಗ ಆರೋಪ ಇರುವವರ ಮೇಲೆ ಯಾಕೆ ಧಾಳಿ ನಡೆಸಿಲ್ಲ? ಈ ಸಚಿವರು, ಅಧಿಕಾರಿಗಳ ವಿರುಧ್ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಕೆಂಪಯ್ಯ ಕಾಂಗ್ರೆಸ್ಸಿನವರ ಮಾತು ಕೇಳಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನೀಡಿರುವ ಕೇಳಿಕೆಯ ಕುರಿತು ಪ್ರಶ್ನಿಸಿದ ಎಂ. ಬಿ. ಪಾಟೀಲ, ನನಗೆ ಗೊತ್ತಿರುವ ಪ್ರಕಾರ, ಗುತ್ತಿಗೆದಾರರ ಸಂಘದವರು ಭ್ರಷ್ಚಾಚಾರ ಆರೋಪ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸಿದರೆ ನಾವು ದಾಖಲಾತಿ, ಪುರಾವೆಗಳನ್ನು ನೀಡುವುದಾಗಿ ಹೇಳೀದ್ದಾರೆ.  ನಾವು ಪುರಾವೆಗಳನ್ನು ಒದಗಿಸದಿದ್ದರೆ ನಮ್ಮ ವಿರುದ್ಧ ಬೇಕಾದ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.  ಹೈಕೊರ್ಟಿನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ವಹಿಸುವಂತೆಯೂ ಹೇಳಿದ್ದಾರೆ.  ಆದರೆ, ಸರಕಾರ ಯಾಕೆ ಈವರೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

Leave a Reply

ಹೊಸ ಪೋಸ್ಟ್‌