ಬಸವ ನಾಡಿನ ಸಂತನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ನಡೆದಾಡಿದ ದೇವರ ಭಕ್ತಸಾಗರ

ವಿಜಯಪುರ: ನಡೆದಾಡುವ ದೇವರೆಂದೆ ಹೆಸರಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ದೇಹತ್ಯಾಗ ಮಾಡಿದ್ದು, ಅವರ ಅಂತಿಮ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ.

ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಸಂಜೆ 6ಕ್ಕೆ ಇಹಲೋಕ ತ್ಯಜಿಸಿದ ಶ್ರೀಗಳ ಅಂತಿಮ ದರ್ಶನಕ್ಕೆ ಬೆಳಗಿನ ಜಾವ 4.30ರ ವರೆಗೂ ಅವಕಾಶ ಕಲ್ಪಿಸಲಾಗಿತ್ತು.  ನಂತರ ತೆರೆದ ವಾಹನದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ವಿಜಯಪುರದ ಸೈನಿಕ ಶಾಲೆಗೆ ಶಿಫ್ಟ್ ಮಾಡಲಾಗಿದೆ.  ಹಾರಗಳಿಂದ ಅಲಂಕೃತವಾಗಿದ್ದ ತೆರೆದ ವಾಹನದಲ್ಲಿ ಲಿಂಗಾಯಿತ ಪದ್ಧತಿಯಂತೆ ಶ್ರೀಗಳ ಪಾರ್ಥಿವ ಶರೀರವನ್ನು ಕೂಡಿಸಿ ಸಕಲ ಸರಕಾರಿ ಗೌರವಗಳೊಂದಿಗೆ ಸೈನಿಕ ಶಾಲೆಯ ಆವರಣಕ್ಕೆ ಕರೆತರಲಾಯಿತು.

ಸೈನಿಕ ಶಾಲೆಯಲ್ಲಿ ಈ ಮೊದಲೆ ಸಿದ್ಧಪಡಿಸಲಾಗಿದ್ದ ಬೃಹತ್ ವೇದಿಕೆಯ ಮೇಲೆ ಶ್ರೀಗಳ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.  ಶ್ರೀಗಳ ಎದುರು ರಾಷ್ಟ್ರಧ್ವಜವನ್ನು ಇಟ್ಟು ಸರಕಾರಗಳ ವತಿಯಿಂದ ಗೌರವ ಸಲ್ಲಿಸಲಾಗಿದೆ.  ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಎಸ್ಪಿ ಎಚ್. ಡಿ. ಆನಂದಕುಮಾರ, ಜಿ. ಪಂ. ಸಿಇಓ ರಾಹುಲ್ ಶಿಂಧೆ ಕೂಡ ಸ್ಥಳದಲ್ಲಿಯೇ ಉಳಿದುಕೊಂಡು ನಾನಾ ಸಿದ್ಧತೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಸಾರ್ವಜನಿಕರು ಸರದಿಯಲ್ಲಿ ನಿಂತು ಶ್ರೀಗಳ ಅಂತಿಮ ದರ್ಶನ ಪಡೆಯಲು ಜಿಲ್ಲಾಡಳಿತ ಸಕಲ ವ್ಯವಸ್ಥೆಗಳನ್ನು ಮಾಡಿದೆ.  ಎಲ್ಲ ಕಡೆಗಳಲ್ಲೂ ಬ್ಯಾರಿಕೇಡ್ ಗಳನ್ನು ಹಾಕಿ ಜನದಟ್ಟಣೆ ನಿಯಂತ್ರಿಸಲು ನಿಗಾ ವಹಿಸಿದ್ದಾರೆ.  ಶ್ರೀಗಳ ಪಾರ್ಥಿವ ಶರೀರ ಇರಿಸಲಾಗಿರುವ ವೇದಿಕೆಯ ಮುಂಭಾಗದಲ್ಲಿ ನಾನಾ ಶ್ರೀಗಳು ಆಸೀನರಾಗಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.  ಅಷ್ಟೇ ಅಲ್ಲ, ಗಣ್ಯರ ಆಸೀನಕ್ಕೂ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ.

ವಿಜಯಪುರ ನಗರದಲ್ಲಿ ವಾಹನ ಸಂಚಾರದ ದಟ್ಟಣೆ ಕಡಿಮೆ ಮಾಡಲು ನಗರದ ನಾಲ್ಕೂ ದಿಕ್ಕುಗಳ ಪ್ರಮುಖ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.  ವಿಜಯಪುರ ಅಷ್ಟೇ ಅಲ್ಲ, ಬೆಳಗಾವಿ ವಿಭಾಗದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಿಂದ ಹಾಗೂ ವಿಜಯಪುರದಲ್ಲಿಯೇ ಇರುವ ಭಾರತೀಯ ಮೀಸಲು ಪೊಲೀಸ್ ಪಡೆ ಸೇರಿದಂತೆ ಪೊಲೀಸರನ್ನು ಕರೆಸಲಾಗಿದೆ.  ಮೂರು ಜನ ಎಸ್ಪಿಗಳಿಗೆ ಬಂದೋಬಸ್ತ್ ಜವಾಬ್ದಾರಿ ವಹಿಸಲಾಗಿದೆ.

ಸಾಗರೋಪಾದಿಯಲ್ಲಿ ಬರುತ್ತಿರುವ ಸಾರ್ವಜನಿಕರಿಗಾಗಿ ಶಾಸಕಾರದ ಎಂ. ಬಿ. ಪಾಟೀಲ ಮತ್ತು ಬಸನಗೌಡ ಪಾಟೀಲ  ಯತ್ನಾಳ ಸುಮಾರು ಐದಾರು ಲಕ್ಷ ಜನರಿಗೆ ದಾಸೋಹದ ವ್ಯವಸ್ಥೆ ಮಾಡಿದ್ದಾರೆ.  ಜಿಲ್ಲಾ ಪೆಟ್ರೋಲಿಯಂ ಸಂಘದವರು ನಗರದ ಸುತ್ತಮುತ್ತಲಿನ ಎಲ್ಲ ಪೆಟ್ರೋಲ್ ಬಂಕ್ ಗಳಲ್ಲಿ ಶ್ರೀಗಳ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.  ಅಲ್ಲದೇ, ಸಾರ್ವಜನಿಕರು ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಸ್ಥಳಗಳಲ್ಲಿ ಬಸವ ನಾಡಿನ ನಾನಾ ಸಂಘಟನೆಗಳೂ ಕೂಡ ಅಲ್ಪೋಪಹಾರ, ನೀರು, ಚಹಾದ ವ್ಯವಸ್ಥೆ ಮಾಡಿ ಗುರುಸೇವೆ ಸಲ್ಲಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌