ಅಗ್ನಿಸ್ಪರ್ಷ ಮಾಡಿ- ವಿಧಿವಿಧಾನಗಳು ಬೇಡ- ನದಿ, ಸಾಗರದಲ್ಲಿ ಚಿತಾಭಸ್ಮ ವಿಸರ್ಜಿಸಿ- ಸ್ಮಾರಕ ಬೇಡ- ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ- ಶ್ರೀಗಳ ಉಯಿಲು

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ತಮ್ಮ ಅಂತ್ಯಕ್ರಿಯೆಯ ಬಗ್ಗೆಯೂ ಉಯಿಲು(ವಿಲ್) ಬರೆದಿಟ್ಟಿದ್ದಾರೆ.  ವೀರಶೈವ ಲಿಂಗಾಯತ ಸಮುದಾಯದಲ್ಲಿ ಜನಿಸಿದರೂ ಶ್ರೀಗಳು ಆ ಸಂಪ್ರದಾಯದಂತೆ ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಸ್ಪರ್ಷ ಮಾಡಬೇಕು ಎಂದು ಉಯಿಲು ಬರೆದಿಟ್ಟಿದ್ದಾರೆ.

ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವುದೇ ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ.  ಅಗ್ನಿಸ್ಪರ್ಷದ ನಂತರ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು.  ನನ್ನ ನೆನಪಿನಲ್ಲಿ ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು.  ನಾನು ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ ಎಂದು 2014ರ ಗುರುಪೂರ್ಣಿಮೆಯ ದಿನ ಶ್ರೀಗಳು ತಮ್ಮ ಇಚ್ಛೆಯನ್ನು ದಾಖಲಿಸಿದ್ದಾರೆ.  ಅಂದು ರಾಜ್ಯ ಹೈಕೊರ್ಟಿನ ನ್ಯಾಯಮೂರ್ತಿಯಾಗಿದ್ದ ಎ. ಎಸ್. ಪಾಶ್ಚಾಪುರೆ, ವಿಜಯಪುರ ಜಿಲ್ಲಾ ನ್ಯಾಯಾಧೀಶರಾಗಿದ್ದ ಸದಾಶಿವ ಎಸ್. ಸುಲ್ತಾನಪುರೆ, ಮಹಾರಾಷ್ಟ್ರದ ಕೊಲ್ಹಾಪುರ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ  ಶ್ರೀಗಳ ಸಮ್ಮುಖದಲ್ಲಿ ಉಯಿಲು(ವಿಲ್)ಗೆ ಶ್ರೀಗಳು ಸಹಿ ಹಾಕಿದ್ಗಾರೆ.

ಈ ಅಂತಿಮ ಅಭಿವಂದನ ಪತ್ರದ ಪ್ರತಿ ಬಸವನಾಡು ವೆಬ್ ಗೆ ಲಭ್ಯವಾಗಿದೆ.

ಅದರಲ್ಲಿರುವ ಪ್ರಮುಖ ಅಂಶಗಳು ಇಂತಿವೆ.

ಅಂತಿಮ ಅಭಿವಂದನ ಪತ್ರ

(ಅ)

  1. ಬದುಕು ಅನುಭವಗಳ ಪ್ರವಾಹ.
  2. ಅದರ ಸಿರಿವಂತಿಕೆಯು ವಿಶ್ವ-ಚಿಂತನ ಹಾಗೂ ಸತ್ಯಶೋಧನೆಗಳಿಂದ. ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ.
  3. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ ಸಾಧನೆ.

(ಬ)

  1. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು
  2. ಅದನ್ನು ರೂಪಿಸಿದವರು ಗುರುದೇವರು. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಳು, ಸ-ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು.
  3. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನನು ದೂರ ದೂರ ಸರಿಸಿವೆ.

(ಕ)

  1. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ.
  2. ಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ.
  3. ಉಳಿಯುವುದು ಬರಿ ಬಯಲು. ಮಹಾಮೌನ. ಶೂನ್ಯಸತ್ಯ!
  4. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ ಅಂತಿಮ ಅಭಿವಾದನ ಪತ್ರ.

(ಡ)

12. ದೇಹದ ವಿಷಯದಲ್ಲಿ ಒಂದೆರಡು ಆಶಯಗಳು.

1. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು.

2. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ.

3. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು.

4. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

 

13. ಅಂತಿಮ ನೆನಹು

1. ಸತ್ಯವೂ ಇಲ್ಲ, ಅಸತ್ಯವೂ ಇಲ್ಲ

ಸಹಜವೂ ಇಲ್ಲ, ಅಸಹಜವೂ ಇಲ್ಲ.

ನಾನೂ ಇಲ್ಲ, ನೀನೂ ಇಲ್ಲ.

ಇಲ್ಲ, ಇಲ್ಲ ಎಂಬುದು ತಾನಿಲ್ಲ. 

ಗುಹೇಶ್ವರನೆಂಬುದು ತಾ ಬಯಲು.

 

2. ಅಂತ್ಯಃ ಪ್ರಣಾಮಾಂಜಲಿ

 

ಸ್ವಾಮಿ ಸಿದ್ಧೇಶ್ವರ

Leave a Reply

ಹೊಸ ಪೋಸ್ಟ್‌