25 ಲಕ್ಷಕ್ಕೂ ಹೆಚ್ಚು ಭಕ್ತರಿಂದ ನಡೆದಾಡಿದ ದೇವರ ಅಂತಿಮ ದರ್ಶನ- ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿಗೆ ಡಿಸಿ ಡಾ. ದಾನಮ್ಮನವರ ಕೃತಜ್ಞತೆ

ವಿಜಯಪುರ: ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ.

ನಗರದ ಜ್ಞಾನಯೋಗಾಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜ. 2ರ ಮಧ್ಯರಾತ್ರಿಯಿಂದ ಜ. 3ರ ರಾತ್ರಿ ಅಂತ್ಯಕ್ರಿಯೆಯವರೆಗೂ ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದಿದ್ದಾರೆ.  ವಿಜಯಪುರ ಜಿಲ್ಲೆ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಗಳು ಮತ್ತು ರಾಜ್ಯಗಳಿಂದಲೂ ಆಗಮಿಸಿದ ಭಕ್ತಾದಿಗಳು ಶಾಂತಿಯುತವಾಗಿ ದರ್ಶನ ಪಡೆದ್ದಾರೆ ಎಂದು ಅವರು ತಿಳಿಸಿದರು.

ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವಲ್ಲಿ ಲೋಕೋಪಯೋಗಿ, ಹೆಸ್ಕಾಂ, ಮಹಾನಗರ ಪಾಲಿಕೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಕಡಿಮೆ ಅವಧಿಯಲ್ಲಿ ಭಕ್ತರು ಮೆಚ್ಚುವ ಕೆಲಸ ಮಾಡಿದ್ದಾರೆ.  ಟೆಂಟ್ ಹಾಕುವುದು, ಮ್ಯಾಟ್ ಹಾಸುವುದು, ಬ್ಯಾರಿಕೇಡ್ ಅಳವಡಿಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಕುಡಿಯಲು ನೀರಿನ ವ್ಯವಸ್ಥೆ, ಎಲ್ಇಡಿ ಅಳವಡಿಕೆ ಸೇರಿದಂತೆ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ ಎಂದು ಡಿಸಿ ಶ್ಲಾಘಿಸಿದ್ದಾರೆ.  ಈ ಸಂದರ್ಭದಲ್ಲಿ ತಮ್ಮ ಜೊತೆಗಿದ್ದ ಲೋಕೋಪಯೋಗಿ ಇಲಾಖೆ ಎಇಇ ರಾಜು ಮಜುಂದಾರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಹೆಸ್ಕಾಂ ಅಧಿಕಾರಿಗಳನ್ನು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ವಿಶೇಷವಾಗಿ ಅಭಿನಂದಿಸಿದರು.

ಶ್ರೀಗಳ ಅಂತ್ಯಕ್ರಿಯೆಯಲ್ಲಿ ಸಹಕಾರ ನೀಡಿದ ಜನತೆಗೆ ಜಿಲ್ಲಾಧಿಕಾರಿ ಅಭಿನಂದನೆ

ಇದೇ ವೇಳೆ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ, ಅಂತಿಮ ಯಾತ್ರೆ, ಅಂತ್ಯಕ್ರಿಯೆ ಅತ್ಯಂತ ಶಾಂತ ರೀತಿಯಲ್ಲಿ ಭಕ್ತಿಮಯವಾಗಿ ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಸಾರ್ವಜನಿಕರೆಲ್ಲರಿಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಧನ್ಯವಾದ ಅರ್ಪಿಸಿದ್ದಾರೆ.

ಇದೇ ವೇಳೆ, ಜಿಲ್ಲಾಡಳಿತದ ವತಿಯಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದರೂ ಸಹ ಸಿದ್ದೇಶ್ವರ ಶ್ರೀಗಳ ಮೇಲೆ ಇಟ್ಟಿರುವ ಅಪಾರ ಭಕ್ತಿಯಿಂದ ಸುಮಾರು 25 ಲಕ್ಷಕ್ಕಿಂತ ಹೆಚ್ಚಿನ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅತ್ಯಂತ ಸೌಜನ್ಯದಿಂದ ತಾಳ್ಮೆಯಿಂದ ವರ್ತಿಸಿ ಸಹಕರಿಸಿದ್ದಾರೆ.  ಹಿಗಾಗಿ ಜಿಲ್ಲಾಡಳಿತ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಗಿದೆ.  ನಾನಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ, ಶ್ರೀಗಳ ಅಂತಿಮ ಯಾತ್ರೆ ಸಾಗಿ ಹೋಗುವ ನಾನಾ ರಸ್ತೆಗಳಲ್ಲಿ ರಂಗೋಲಿ ಹಾಕಿ ಆರತಿ ಬೆಳಗುವಿಕೆ ಮೂಲಕ ಜನರು ಸಹಕರಿಸಿದ ರೀತಿ ಅಭಿನಂದನಾರ್ಹವಾಗಿದೆ.  ಅಲ್ಲದೇ, ಜಿಲ್ಲಾಡಳಿತದ ಜೊತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಶ್ರೀಗಳ ಆಶಯದಂತೆ ಎಲ್ಲ ಪ್ರಕ್ರಿಯೆಗಳು ಅತ್ಯಂತ ಶಾಂತಿಯುತವಾಗಿ ನೆರವೇರಲು ಮುಖ್ಯಮಂತ್ರಿಗಳು ಸೇರಿದಂತೆ ನಾನಾ ಜನಪ್ರತಿನಿಧಿಗಳ ಮಾರ್ಗದರ್ಶನವೂ ಕಾರಣವಾಗಿದೆ.  ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಎಲ್ಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌