ನದಿ, ಸಾಗರ ಸೇರಿದಂತೆ ಐದು ಕಡೆಗಳಲ್ಲಿ ಲಿಂ. ಸಿದ್ಧೇಶ್ವರ ಸ್ವಾಮೀಜಿ ಚಿತಾಭಸ್ಮ ವಿಸರ್ಜನೆ – ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾಹಿತಿ

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ಲಿಂ. ಸಿದ್ಧೇಶ್ವರ ಸ್ವಾಮೀಜಿ ಅವರ ಚಿತಾಭಸ್ಮವನ್ನು ಒಂದು ಸಾಗರ ಮತ್ತು ನಾಲ್ಕು ನದಿಗಳಲ್ಲಿ ವಿಸರ್ಜಿಸಲಾಗುವುದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯಪುರದಲ್ಲಿ ಜ್ಞಾನಯೋಗಾಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬುದ್ದೀಜಿಯವರ ಅಂತ್ಯಕ್ರಿಯೆ ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆದಿದೆ.  ನಮ್ಮ ನಿರೀಕ್ಷೆಗೂ ಮೀರಿ ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದರು.

ಸರಕಾರ, ಸಂಘ ಸಂಸ್ಥೆಗಳು, ಸ್ವಯಂ ಪ್ರೇರಿತರಾಗಿ ಕೆಲಸ ಮಾಡಿದ್ದಾರೆ.  ಕೆಲವರಂತೂ ಸ್ವಯಂ ಪ್ರೇರಿತರಾಗಿ ತಂತಮ್ಮ ಮನೆಗಳಲ್ಲಿ ಅಡುಗೆ ಮಾಡಿ ತಂದು ಹಂಚಿದ್ದಾರೆ.  ಹಲವರು ಹಣ್ಣು ಹಂಪಲು ವಿತರಿಸಿದ್ದಾರೆ.  ಅವರೆಲ್ಲರಿಗೂ ಧನ್ಯವಾದಗಳು ಎಂದು ಸ್ವಾಮೀಜಿ ಹೇಳಿದರು.

ಮಾದ್ಯಮದವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಮಾದ್ಯಮಗಳನ್ನು ಪ್ರಶಂಸಿದ ಅ;ರು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ ಸದಸ್ಯರು, ನಾನಾ ಜನಪ್ರತಿನಿಧಿಗಳು, ಗಣ್ಯರು ಅಂತಿಮ ವಿಧಿ ವಿಧಾನ ಕಾರ್ಯಕ್ರಮ ದಲ್ಲಿ ಭಾಗವಹಿ ಸಿದ್ದರು.  ಪಕ್ಷ ಬೇಧವನ್ನು ಮರೆತು ಎಲ್ಲ ನಾಯಕರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದರು.

ಪಕ್ಷಾತೀತ ಮತ್ತು ಜಾತ್ಯತೀವಾಗಿ ಈ ಆಶ್ರಮ ಬೆಳೆದು ಬಂದಿದೆ.  ಮೈಸೂರಿನ ಸುತ್ತೂರು ಮಠಾಧೀಶರು, ಮಹಾರಾಷ್ಟ್ರದ ಕೊಲ್ಹಾಪುರದ ಕನ್ನೇರಿ ‌ಮಠಾಧೀಶರು, ಆದಿ ಚುಂಚನಗಿರಿ ಮಠಾದೀಶರು ಸೇರಿದಂತೆ ಹಲವು ಜನ ಮಠಾದೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಅಂತ್ಯಕ್ರಿಯೆ ಸಂದರ್ಭದಲ್ಲಿ ಚಿತಾಭಸ್ಮವನ್ನು ನೀಡುವುದಾಗಿ ಕನ್ನೇರಿ ಮಠಾಧೀಶರು ಭಕ್ತರಿಗೆ ತಿಳಿಸಿದ್ದರು.  ಆದರೆ, ಈಗ ಚಿತಾಭಸ್ಮವನ್ನು ನೀಡುವುದಿಲ್ಲ.  ಭಕ್ತರು ಬೇಕಾದರೆ ಭಸ್ಮ(ವಿಭೂತಿಯನ್ನು) ತೆಗೆದುಕೊಂಡು ಹೋಗಿ ಉಪಯೋಗಿಸಬಹುದು.  ಜೊತೆಗೆ ಗ್ರಂಥವನ್ನು ತೆಗೆದುಕೊಂಡು ಹೋಗಿ ನಡೆದಾಡಿದ ದೇವರು ನಮ್ಮೊಂದಿಗೆ ಇದ್ದಾರೆ ಎಂದು ತಿಳಿದುಕೊಳ್ಳಬೇಕು.  ಹೀಗಾಗಿ ಲಿಂ. ಸಿದ್ಧೇಶ್ವರ ಸ್ವಾಮೀಜಿಯವರು ಚಿತಾಭಸ್ಮವನ್ನು ಒಂದು ಸಾಗರ ಮತ್ತು ನಾಲ್ಕು ನದಿಗಳಲ್ಲಿ ವಿಸರ್ಜಿಸುವ ಯೋಚನೆ ಇದೆ.  ಯಾವ ನದಿಯಲ್ಲಿ ಮತ್ತು ಯಾವ ಸಾಗರದಲ್ಲಿ ವಿಸರ್ಜನೆ ಮಾಡಬೇಕು? ಯಾರು ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಬೇಕು ಎಂಬುದನ್ನು ನಾನಾ ಸ್ವಾಮೀಜಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

ಆಶ್ರಮದ ಜವಾಬ್ದಾರಿ ವಿಚಾರ

ಈ ಮಧ್ಯೆ, ವಿಜಯಪುರ ಜ್ಞಾನಯೋಗಾಶ್ರಮದ ಜವಾಬ್ದಾರಿ ವಹಿಸುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಸವಲಿಂಗ ಸ್ವಾಮೀಜಿ, ಈ ಬಗ್ಗೆ ಆಶ್ರಮದ ಸಮಿತಿಯವರು ಈ ವಿಚಾರದ ಕುರಿತು ಇನ್ನು ಮುಂದೆ ಚರ್ಚೆ ಮಾಡಲಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ಮಲ್ಲಿಕಾರ್ಜುನ ಸ್ವಾಮೀಜಿಗಳ ವಿಚಾರಗಳನ್ನು ಜನರಿಗೆ ತಿಳಿಸುತ್ತ ತಮ್ಮಲ್ಲಿರುವ ಜ್ಞಾನದಾಸೋಹವನ್ನು ಸಿದ್ಧೇಶ್ವರ ಸ್ವಾಮೀಜಿ ಮಾಡಿದರು.  ಭಕ್ತರು ಈ ಆಶ್ರಮವನ್ನು ತಮ್ಮದೇ ಆಶ್ರಮ ಎಂದು ತಿಳಿದುಕೊಂಡು ಇಲ್ಲಿಗೆ ಈ ಮುಂಚೆಯಂತೆಯೇ ಬರಬೇಕು.  ಈ ಮೂಲಕ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಸಿದ್ದೇಶ್ವರ ಸ್ವಾಮೀಜಿಗಳನ್ನು ಇಲ್ಲಿಯೇ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು.

ಇನ್ನು ಮುಂದೆಯೂ ಈವರೆಗೆ ಆಶ್ರಮದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಾದ ಪ್ರವಚನ, ಅನ್ನದಾಸೋಹ, ಜ್ಞಾನದಾಸೋಹಗಳು ಮುಂದುವರೆಯಲಿವೆ ಎಂದು ಬಸವಲಿಂದ ಸ್ವಾಮೀಜಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌