ವಿಜಯಪುರ: ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಗ್ಯ ರತ್ನರಾಗಿದ್ದಾರೆ ಎಂದು ಯುವ ಮುಖಂಡ ಮತ್ತು ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.
ಕೋಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಲಿಂ. ಸಿದ್ಧೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಶ್ರೀಗಳು ಈ ಶತಮಾನದ ಸಂತ. ಜ್ಞಾನಯೋಗಿಯಾಗಿ ಆಧ್ಯಾತ್ಮಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಸ್ವಾಮೀಜಿ ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನರಾಗಿದ್ದರು. ಮೃದು ಮತ್ತು ಮಧುರವಾದ ಭಾಷೆಯಿಂದ ಅವರು ಅಬಾಲ ವೃದ್ಧರಾಗಿ ಎಲ್ಲರನ್ನೂ ತಲುಪಿದ್ದರು. ಯಾರು ಸದಾ ಸಂತೋಷವನ್ನು ಹಂಚುತ್ತಾರೋ ಅವರೇ ಸಂತರು ಎನ್ನುವುದು ಪೂಜ್ಯರ ಸಂದೇಶವಾಗಿತ್ತು ಇದ್ದದ್ದು ಇದ್ದಂಗ ಇರುವುದಿಲ್ಲ ಎನ್ನುವುದು ಅವರ ಅತ್ಯಂತ ಪ್ರಿಯವಾದ ಮಾತಾಗಿತ್ತು. ನಾವು ಪೂಜ್ಯರನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಸದಾ ಖುಷಿಖುಷಿಯಾಗಿದ್ದು ಸಂತೋಷವನ್ನು ಹಂಚುತ್ತಾ ಸಂತ ಜೀವನವನ್ನು ನಡೆಸುವುದು ಯಾವುದು ಇದ್ದಂಗ ಇರೋದಿಲ್ಲ ಎನ್ನುವ ವಾಸ್ತವ ಸತ್ಯವನ್ನ ಅರಿತು ಪೂಜ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಪೂಜ್ಯರಿಗೆ ಸಲ್ಲಿಸುವ ನಿಜವಾದ ನುಡಿ ನಮನದ ಶ್ರದ್ಧಾಂಜಲಿ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.
![](https://basavanadu.com/wp-content/uploads/2023/01/WhatsApp-Image-2023-01-10-at-5.03.26-PM-300x225.jpeg)
ಮಕ್ಕಳ ಖ್ಯಾತ ಸಾಹಿತಿ ಜಂಬುನಾಥ ಕಂಚಾಣಿ ಮಾತನಾಡಿ, ಪೂಜ್ಯರ ಒಡನಾಟವನ್ನು ಸ್ಮರಿಸಿದರು.
ಮಸೂತಿಯ ಶ್ರೀ ಪ್ರಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಿದ್ದೇಶ್ವರ ಮಹಾಸ್ವಾಮಿಗಳು ನಡೆದಾಡುವ ದೇವಾಲಯ, ಮಾತನಾಡುವ ದೇವರಾಗಿದ್ದರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಎಸ್. ಆರ್. ಪಾಟೀಲ, ಚೆನ್ನಪ್ಪಗೌಡರು, ಶಂಕ್ರು ಕಳಸಕೊಂಡ, ಐಹೊಳ್ಳಿ, ವೆಂಕನಗೌಡ, ಶಿವಪ್ಪ ಸಾಹುಕಾರ ಸೇರಿದಂತೆ ಮುಳವಾಡ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಂತರ ಸರದಿಯಲ್ಲಿ ನಿಂತ ಸಾವಿರಾರು ಜನರು ಮೇಣದಬತ್ತಿ ಬೆಳಗಿಸಿ ಸರತಿಯಲ್ಲಿ ನಿಂತು ಪುಷ್ಪವೃಷ್ಠಿಗೈದದ್ದು ಮುಳವಾಡ ಗ್ರಾಮಸ್ಥರು ಶ್ರೀಗಳ ಬಗ್ಗೆ ಹೊಂದಿರುವ ಅಪಾರ ಭಕ್ತಿಗೆ ಸಾಕ್ಷಿಯಾಗಿತ್ತು.
ಭೂಸರೆಡ್ಡಿ ನಿರೂಪಿಸಿ, ವಂದಿಸಿದರು.