ಯುವಕರು ದೇಶದ ಅಭಿವೃದ್ದಿಗೆ ಕೈ ಜೋಡಿಸಲು ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ಇಂದಿನ ಯುವ ಪೀಳಿಗೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉದ್ಯೋಗವಂತರಾಗಿ ದೇಶದ ಅಭಿವೃದ್ದಿ ಕೈ ಜೋಡಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದರು.

ವಿಜಯಪುರ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು

ಭಾರತದ ಯುವಜನತೆಯಿಂದ ದೇಶ ಹೆಚ್ಚು ಅಭಿವೃದ್ಧಿ ಪಥದತ್ತ ಸಾಗಬಲ್ಲದು. 75 ವರ್ಷ ವರ್ಷಗಳಲ್ಲಿ ಆಗದ ಸಾಧನೆ ಕಳೆದ ಎಂಟು ವರ್ಷಗಳಲ್ಲಿ ಸರ್ಕಾರ ಸಾಧನೆ ಮಾಡಿ ಯುವ ಜನತೆಗೆ ಒಂದು ಆಶಾಕಿರಣವಾಗಿದೆ.  ಇಂದಿನ ಯುವ ಪೀಳಿಗೆಯಲ್ಲಿ ಜಾಗೃತಿ ಅತ್ಯವಶ್ಯಕವಾಗಿದ್ದು, ವಿವೇಕಾಂದರ ಜೀವನ ಚರಿತ್ರೆ ಹಾಗೂ ಚಿಂತನೆ ಕುರಿತು ಕೇಂದ್ರ ಸರ್ಕಾರದ 8 ವರ್ಷದ ಸೇವೆ, ಸುಶಾಸನ, ಗರೀಬ ಕಲ್ಯಾಣ ಯೋಜನೆ, ಜಿ-20 ಅಧ್ಯಕ್ಷತೆ, ಏಕ ಭಾರತ ಶ್ರೇಷ್ಟ ಭಾರತ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸೇರಿದಂತೆ ನಾನಾ ಅಭಿವೃದ್ದಿ ಕಾರ್ಯಗಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.  ವಿದ್ಯಾರ್ಥಿಗಳು-ಯುವಕರು ಈ ಛಾಯಾಚಿತ್ರಗಳನ್ನು ವೀಕ್ಷಿಸಿ, ಅದರಲ್ಲಿರುವ ವಿಶೇಷತೆಗಳನ್ನು ಮನನ ಮಾಡಿಕೊಳ್ಳಬೇಕು.  ಯುವಜನೋತ್ಸವ ಎಲ್ಲರಿಗೂ ಕೂಡ ಪ್ರೇರಣೆ ನೀಡುವಂತಾಗಲಿ ಎಂದು ಸಂಸದರು ಹೇಳಿದರು.

ನಾನು ಈ ಶಾಲೆಯಲ್ಲಿ ಆಟಪಾಠ ಆಡಿದ್ದೇನೆ.  ಇಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯನ್ನು ಅಲಂಕರಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.  ಈ ಶಾಲೆ ತುಂಬಾ ಹಳೆಯದಾಗಿದ್ದು ಅದರ ಉನ್ನತೀಕರಣಕ್ಕೆ ಕೈ ಜೋಡಿಸುವುದಾಗಿ ರಮೇಶ ಜಿಗಜಿಣಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇಶಕ ಕೆ. ಕೆ. ಚವ್ಹಾಣ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು.  ಬಡತನ ಶಿಕ್ಷಣಕ್ಕೆ ತೊಂದರೆಯಾಗುವುದಲ್ಲದೆ ಶಿಕ್ಷಣದಲ್ಲಿ ಹಿಂದುಳಿದರೆ ಮನೆಯಲ್ಲಿ ತಮಗೆ ಮದುವೆಗೆ ಒತ್ತಡ ಮಾಡುತ್ತಾರೆ.  ಇದು ಬಾಲ್ಯವಿವಾಹಕ್ಕೆ ಕಾರಣ.   ಹೆಣ್ಣು- ಗಂಡು ತಾರತಮ್ಯದಿಂದಲೂ ಕೂಡ ಶಿಕ್ಷಣಕ್ಕೆ ಹಿನ್ನಡೆಯಾಗಬಹುದು.  ಈ ನಿಟ್ಟಿನಲ್ಲಿ ಲಿಂಗ ತಾರತಮ್ಯ ಕುರಿತು ಇಲಾಖೆಯಿಂದ ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಇದು ಹೆಣ್ಣು ಮಕ್ಕಳು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ ಮಾತನಾಡಿ, ವೈದ್ಯಕೀಯ ನೆರವನ್ನು ಪಡೆದುಕೊಳ್ಳುಲು ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಅದರ ಜೊತೆಗೆ ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್‍ಗೆ ಕೂಡ ನೊಂದಣಿ ಅಭಿಯಾಣವನ್ನು ಆರಂಭಿಸಲಾಗಿದೆ.  ಎಲ್ಲ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ವಿಶೇಷ ಉಪನ್ಯಾಸ ನೀಡಿದರು. ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ತುಕಾರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸರಕಾರಿ ಪ್ರಥಮ ದರ್ಜೇ ಮಹಿಳಾ ಕಾಲೇಜಿನ ಪ್ರಾಚಾರ್ಯ ಆರ್. ಎಸ್. ಕಲ್ಲೂರಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕಾವೇರಿ ಕಲಾತಂಡದ ವತಿಯಿಂದ ಸರಕಾರದ ಯೋಜನೆಗಳ ಕುರಿತು ಹಾಡುಗಳ ಮೂಲಕ ಮಾಹಿತಿ ನೀಡಿದರು.  ಶಾಲಾ ವಿದ್ಯಾರ್ಥಿಗಳಿಗಾಗಿ ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.  ಇದರಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ. ಬಿ. ನಾಟೀಕಾರ, ಉಪ ಪ್ರಾಂಶುಪಾಲ ಸಿ. ಎಸ್. ಕಾಂಬಳೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌