ಪಕ್ಷಗಳು ಜಾತಿ ಧರ್ಮದ ವಿಚಾರಗಳಿಗೆ ಪ್ರಚೋದನೆ ಕೊಡಬಾರದು- ಮೋದಿ ಕಾರ್ಯ ಶ್ಲಾಘನೀಯ- ರಂಭಾಪುರಿ ಜಗದ್ಗುರು

ವಿಜಯಪುರ: ಚುನಾವಣೆ ವರ್ಷದಲ್ಲಿ ಜಾತಿ, ಧರ್ಮದ ವಿಚಾರಗಳು ಅತಿರೇಕಕ್ಕೆ ಹೋಗುತ್ತಿರುವುದು ಸರಿಯಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ವಿಜಯ.ಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಈಗ ಎಲೆಕ್ಷನ್ ಹತ್ತಿರವಾಗುತ್ತಿದೆ.  ಈ ಸಂದರ್ಭದಲ್ಲಿ ಪಕ್ಷಗಳು ಜಾತಿ, ಮತ್ತು ಧರ್ಮದ ವಿಚಾರವನ್ನು  ಅತಿರೇಕವಾಗಿ ಸಂಘರ್ಷ ಮಾಡುತ್ತಿರುವುದನ್ನು ಜನ ನೋಡಿ ಬೇಸತ್ತಿದ್ದಾರೆ.  ಚುನಾವಣೆ ಸಂದರ್ಭದಲ್ಲೇ ಇದನ್ನು ಮಾಡಬಾರದು ಎಂದು ಹೇಳಿದರು.

ಒಂದು ಸಮಾಜ ಮತ್ತೊಂದು ಸಮಾಜದ ಸಂಘರ್ಷ ಅವನತಿಗೆ ಹಾಗೂ ಪ್ರಗತಿಗೆ ಅಡ್ಡಿಯಾಗುತ್ತದೆ.  ಇಂತದ್ದಕ್ಕೆ ರಾಜಕೀಯ ಪಕ್ಷಗಳು ಪ್ರಚೋದನೆ ಕೊಡುವುದು ಒಳ್ಳೆಯದಲ್ಲ.  ಎಲ್ಲ ವರ್ಗದ, ಎಲ್ಲ ಸಮುದಾಯದ ಜನರನ್ನ ಸಮನಾಗಿ ಕಾಣಬೇಕು ಎಂದು ಜಗದ್ಗುರುಗಳು ತಿಳಿಸಿದರು.

ಸಮಾಜದ ಅಭಿವೃದ್ಧಿಗೆ ಗಮನ ಹರಿಸಬೇಕು

ಎಲ್ಲರೂ ಸಮಾಜದ ಅಭಿವೃದ್ಧಿಗೆ ಗಮನ ಹರಿಸಬೇಕು.  ನಾಡಿಗೆ ಅನ್ನವನ್ನು ಕೊಡುವ ರೈತನ ಬಗ್ಗೆ ಕಾಳಜಿ ವಹಿಸಬೇಕು.  ಆತ ಬೆಳೆಯುವ ಬೆಳೆಗೆ ಬೆಂಬಲ ಬೆಲೆ ನೀಡುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.

ಮೀಸಲಾತಿ ಹೋರಾಟ ವಿಚಾರ

ಮೀಸಲಾತಿ ಕೇಳುವುದು ಎಲ್ಲರ ಹಕ್ಕು.  ಅದು ತಪ್ಪಲ್ಲ.  ಭಾರತದ ಸಂವಿಧಾನದಲ್ಲಿ ಯಾರಿಗೆ ಎಷ್ಟು ಕೊಡಬೇಕು ಎಂಬುದು ಸ್ಪಷ್ಟವಾಗಿದೆ.  ಅದನ್ನು ಚಾಲನೆಯಲ್ಲಿ ತರುವುದು ರಾಜಕಾರಣಿಗಳ ಕರ್ತವ್ಯ,  ಅವರು ಅದನ್ನು ಮಾಡುತ್ತಿದ್ದಾರೆ ಎನಿಸುತ್ತದೆ ಎಂದು ಅವರು ಹೇಳಿದರು.

ಆರ್ಥಿಕವಾಗಿ ದುರ್ಬಲ ಇದ್ದವರು, ಹಿಂದುಳಿದವರು ಮೀಸಲಾತಿ ಕೇಳುತ್ತಿದ್ದಾರೆ.  ಅಂಥಹವರಿಗೆ ಸರಕಾರ ಸೌಲಭ್ಯ ಕೊಡಲಿ.  ಇದರಿಂದ ನಮಗೆ ಸಂತಸವಾಗುತ್ತದೆ.  ಯಾವುದೇ ರೀತಿ ಅಸಮಾಧಾನವಾಗುವುದಿಲ್ಲ.  ಅದೇ ರೀತಿ, ಜಾತಿಯಲ್ಲಿ ಉನ್ನತವಾಗಿದ್ದು, ಬಡತನದಲ್ಲಿ ಇರುವವರ ಜಾತಿಯ ಜನತೆಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ.  ಉನ್ನತ ಜಾತಿಯಲ್ಲಿರುವ ಬಡವರ ಸಮಸ್ಯೆ ಬಗೆಹರಿಸುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು ಎಂದು ಅವರು ಹೇಳಿದರು.

ಮೋದಿಗೆ ಕಾರ್ಯಕ್ಕೆ ಮೆಚ್ಚುಗೆ 

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿದ ರಂಭಾಪುರಿ ಜಗದ್ಗುರುಗಳು, ನಾರಾಯಣಪುರ ಜಲಾಶಯದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ದೇಶದ ಉದ್ದಗಲಕ್ಕೂ ಮೋದಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಬೆಳೆಯುತ್ತಿರುವ ರಾಜಕಾರಣಿಗಳಿಗೆ ಮಾದರಿಯಾಗಿದೆ.  ದೇಶದ ಭದ್ರತೆ ಹಾಗೂ ಸಮಗ್ರತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಪ್ರಧಾನಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವುದು ಭಾರತೀಯರೆಲ್ಲರ ಸೌಭಾಗ್ಯವಾಗಿದೆ.  ರಾಜಕೀಯವಾಗಿ ಬೆಳೆಯುತ್ತಿರುವವರು ಪಕ್ಷಭೇದ ಮರೆತು ಸಮಗ್ರವಾಗಿ ಅಭಿವೃದ್ಧಿ ಮಾಡುಬೇಕು.  ಇದು ಎಲ್ಲ ಕರ್ತವ್ಯವಾಗಿದೆ.  ಅಂಥ ಆದರ್ಶ ರಾಜಕಾರಣಿಗಳ ಗುಣಧರ್ಮವನ್ನು ಅಳವಡಿಸಿಕೊಂಡು ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವಂತೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಇದೇ ವೇಳೆ ಕಿವಿಮಾತು ಹೇಳಿದರು.

Leave a Reply

ಹೊಸ ಪೋಸ್ಟ್‌