ಸ್ವಸಾಮರ್ಥ್ಯದಿಂದ ರಾಹುಲ್ ದ್ರಾವಿಡ್ ಪುತ್ರನ ನೇತೃತ್ವದ ಕರ್ನಾಟಕ ಕಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಸವ ನಾಡಿನ ಸಮರ್ಥ ಕುಲಕರ್ಣಿ

ಮಹೇಶ ವಿ. ಶಟಗಾರ,

ವಿಜಯಪುರ: ಪ್ರತಿಭೆಯಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಸವನಾಡಿನ ಬಾಲಕ ಸಾದಿಸಿ ತೋರಿಸಿದ್ದಾನೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಮತ್ತು ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಸಾರಥ್ಯದ ಕರ್ನಾಟಕದ 14 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಈ ಬಾಲಕ ಕ್ರಿಕೆಟ್ ನಲ್ಲಿ ತಂದೆಗಿಂತಲೂ ಹೆಚ್ಚಿನ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ವಿಜಯಪುರ ನಗರ ಮೂಲದ ಸಮರ್ಥ ವಿನಯ ಕುಲಕರ್ಣಿ ಈಗ ಬೆಂಗಳೂರಿನ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಲೂಲ್ ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ.  ಇವರ ತಂದೆ ವಿನಯ ಕುಲಕರ್ಣಿ ಬಿ ಎಂ ಆರ್‌ ಸಿ ಎಲ್ ನಲ್ಲಿ ತಹಸೀಲ್ದಾರ್ ಆಗಿದ್ದು, ಇವರೂ ಕೂಡ ಬಾಲ್ಯದಲ್ಲಿ ಮದ್ಯಮ ವೇಗದ ಬೌಲಿಂಗ್ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತ ಕೆ ಎಸ್ ಸಿ ಎ ರಾಯಚೂರು ವಲಯವನ್ನು ಪ್ರತಿನಿಧಿಸಿದ್ದರು.

ಬೆಳಿಗ್ಗೆ ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಿದ ಕರ್ನಾಟಕ ಬಾಲಕರ ಕ್ರಿಕೆಟ್ ತಂಡದ ಆಟಗಾರರು

ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ವಿಜಯಪುರದಲ್ಲಿಯೇ ಕ್ರಿಕೆಟ್ ಅಭ್ಯಾಸ ನಡೆಸಿದ್ದ ಸಮರ್ಥ ಕುಲಕರ್ಣಿ ಕರ್ನಾಟಕ ಕ್ರಿಕೆಟ್ ಕ್ಲಬ್ ತರಬೇತುದಾರ ಮತ್ತು ಈ ಮುಂಚೆ ರಾಜ್ಯ ಬಾಲಕರ ವಿಭಾಗದಲ್ಲಿ ರಾಜ್ಯ ತಂಡಕ್ಕೆ ಆಡಿರುವ ಪ್ರಶಾಂತ ಹಜೇರಿ ಅವರ ಬಳಿ ತರಬೇತಿ ಪಡೆದಿದ್ದಾನೆ.  ನಂತರ ಬೆಳಗಾವಿಯ ಜೈನ್ ಸ್ಕೂಲ್ ನಲ್ಲಿ 5ನೇ ತರಗತಿ ಓದಿರುವ ಈ ವಿದ್ಯಾರ್ಥಿ, ಇವರ ತಂದೆ ವಿನಯ ಕುಲಕರ್ಣಿ ಅವರಿಗೆ ಬೆಂಗಳೂರಿಗೆ ವರ್ಗವಾಣೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಶಿಫ್ಟ್ ಆದರು.  ಅಲ್ಲದೇ, ಬೆಂಗಳೂರಿನಲ್ಲಿಯೇ 6ನೇ ತರಗತಿಯಿಂದ ಈವರೆಗೆ ಜೈನ್ ಹೆರಿಟೇಜ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ.

ಸಮರ್ಥ ಕುಲಕರ್ಣಿ ಸ್ಪಿನ್ ಬೌಲರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿದ್ದು, ಕೇರಳದಲ್ಲಿ ಜನೇವರಿ 23 ರಿಂದ ಫೆಬ್ರುವರಿ 11ರ ವರೆಗೆ ನಡೆಯಲಿರುವ ದಕ್ಷಿಣ ಭಾರತ 14 ವರ್ಷದೊಳಗಿನವರ ಬಾಲಕರ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈ ಕುರಿತು ಬಸವನಾಡು ವೆಬ್ ಜೊತೆ ಸಂತಸ ಹಂಚಿಕೊಂಡಿರುವ ಸಮರ್ಥ ಕುಲಕರ್ಣಿ ತಂದೆ ವಿನಯ ಕುಲಕರ್ಣಿ, ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.  ತಮ್ಮ ಪತ್ನಿ ವಿಜೇತಾ ಮಗನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಶಿಕ್ಷಣದ ಜೊತೆಗೆ ಕ್ರಿಕೆಟ್ ಬಗ್ಗೆಯೂ ಪ್ರೋತ್ಸಾಹ ನೀಡುತ್ತಿದ್ದಾರೆ.  ನಾನು ರಾಯಚೂರು ವಲಯವನ್ನು ಪ್ರತಿನಿಧಿಸಿದ್ದರೆ ಈಗ ಮಗ ಹೆಸರಿಗೆ ತಕ್ಕಂತೆ ತನ್ನ ಸಾಮರ್ಥ್ಯ ತೋರಿಸುತ್ತಿದ್ದು, ಕರ್ನಾಟಕ ತಂಡದಲ್ಲಿ ಸಮರ್ಥವಾಗಿ ಸಾಧನೆ ಮಾಡಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮರ್ಥ ಕುಲಕರ್ಣಿಯ ಮೊದಲ ಕೋಚ್ ಪ್ರಶಾಂತ ಹಜೇರಿ ಕೂಡ ತಮ್ಮ ಶಿಷ್ಯನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, 26 ವರ್ಷಗಳ ನಂತರ 15 ವರ್ಷದೊಳಗಿನ ರಾಜ್ಯ ತಂಡಕ್ಕೆ ವಿಜಯಪುರದ ಬಾಲಕ ಆಯ್ಕೆಯಾಗಿದ್ದಾನೆ.  ನಾನೂ ಕೂಡ ಬಾಲಕರ ರಾಜ್ಯ ತಂಡದಲ್ಲಿ ಆಡಿದ್ದೇನೆ.  ಈಗ ನನ್ನ ಕೈಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಸಮರ್ಥ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ತರಬೇತುದಾರನಾದ ನನಗೂ ಸಂತಸವನ್ನು ಇಮ್ಮಡಿಗೊಳಿಸಿದೆ.  ಸಮರ್ಥ ತನ್ನ ಸಾಧನೆಯ ಮೂಲಕ ಕ್ರಿಕೆಟ್ ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾಯಚೂರು ವಲಯ ಪ್ರತನಿಧಿಸಿದ್ದ ಸಮರ್ಥ ತಂದೆ ವಿನಯ ಕುಲಕರ್ಣಿ

ಕರ್ನಾಟಕ ಬಾಲಕರ ಕ್ರಿಕೆಟ್ ತಂಡ ಬೆಳಿಗ್ಗೆ ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಿದೆ.  ಈ ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಗೋವಾ ತಂಡಗಳು ಪಾಲ್ಗೋಳ್ಳುತ್ತಿವೆ.

ಬಸವನಾಡಿನ ಸಮರ್ಥ ವಿನಯ ಕುಲಕರ್ಣಿ ಕರ್ನಾಟಕವಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ತಂಡವನ್ನೂ ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವವಂತಾಗಿಲಿ ಎಂದು ಹಾರೈಸೋಣ.

Leave a Reply

ಹೊಸ ಪೋಸ್ಟ್‌