ವಿಜಯಪುರ ಕಾನಿಪ ಸಮ್ಮೇಳನ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮ್ಮೇಳನದ ನಾನಾ ಸಮಿತಿಗಳ ಸಭೆ

ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಫೆ. 4 ಮತ್ತು 5 ರಂದು ನಡೆಯಲಿರುವ ಕಾರ್ಯನಿತರ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನ ಅಂಗವಾಗಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಮ್ಮೇಳನದ ಯಶಸ್ವಿಗಾಗಿ ರಚಿಸಲಾಗಿರುವ ನಾನಾ ಸಮಿತಿಗಳ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.  ಈ ಸಭೆಯಲ್ಲಿ ಪ್ರಮುಖವಾಗಿ ವಸತಿಯ ಕುರಿತು ಚರ್ಚೆ ನಡೆಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಇದೇ ಮೊದಲ ಬಾರಿಗೆ ೩೭ನೇ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದ್ದು, ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವ ಕುರಿತು ಮಾಹಿತಿ ಲಭಿಸಿದೆ.  ಹೀಗಾಗಿ ಸಮ್ಮೇಳನ ಯಶಸ್ಸಿಗೆ ಖಾಸಗಿ ಹಾಗೂ ಸರಕಾರಿ ವಸತಿ ಗೃಹಗಳನ್ನು ಕಾಯ್ದಿರಿಸುವ ಮೂಲಕ ಜಿಲ್ಲಾಡಳಿತ ಸಂಪೂರ್ಣ ಕೈಜೋಡಿಸಲಿದೆ ಎಂದು ಅವರು ಭರವಸೆ ನೀಡಿದರು.

ಸಮ್ಮೇಳನಕ್ಕೆ ರಾಜ್ಯಾದ್ಯಂತ ಆಗಮಿಸುವ ಪತ್ರಕರ್ತರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಖಾಸಗಿ ಹಾಗೂ ಸರಕಾರಿ ವಸತಿ ಗೃಹಗಳನ್ನು ಕಾಯ್ದಿರಿಸುವಂತೆ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷರಿಗೆ ಹಾಗೂ ಆಯಾ ಸರಕಾರಿ ವಸತಿ ಗೃಹಗಳ ಮುಖ್ಯಸ್ಥರಿಗೆ ಅವರು ಸಲಹೆ ನೀಡಿದರು.

ಸಮ್ಮೇಳನ ನಡೆಯಲಿರುವ ರಂಗಮಂದಿರದ ಆವರಣದಲ್ಲಿರುವ ರಸ್ತೆಯನ್ನು ಡಾಂಬರೀಕರಣ ಮಾಡಿ ಮುಗಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಜೊತೆಗೆ ರಂಗಮಂದಿರದಲ್ಲಿ ಫೋಕಸ್ ವಿದ್ಯುತ್ ದೀಪ ಅಳವಡಿಸುವಂತೆಯೂ ಸಲಹೆ ನೀಡಿದರು.

ನಗರದ ಹೃದಯ ಭಾಗ ಸೇರಿದಂತೆ ನಗರ ಸಂಪರ್ಕಿಸುವ ರಸ್ತೆಗಳಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರವಿರುವ ಬೃಹದಾಕಾರದ ಸ್ವಾಗತ ಕಮಾನುಗಳನ್ನು ಅಳವಡಿಸಬೇಕು.  ಅಲ್ಲದೇ, ಗಾಂಧಿ ಚೌಕಿನಲ್ಲಿರುವ ಪಾದಚಾರಿಗಳ ಮೇಲ್ಸೇತುವೆಗೆ ಬೃಹತ್ ಬ್ಯಾನರ್ ಅಳಿವಡಿಸುವಂತೆ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ವಿಜಯಪುರದಲ್ಲಿ ನಡೆಯಲಿರುವ ಕಾನಿಪ ರಾಜ್ಯಮಟ್ಟದ 37ನೇ ಸಮ್ಮೇಳನದ ಅಂಗವಾಗಿ ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು

ವಾಹನ ಪೂರೈಸಲು ಸೂಚನೆ

ಇದೇ ವೇಳೆ, ನಗರಕ್ಕೆ ಆಗಮಿಸುವ ಪತ್ರಕರ್ತರ ಸಂಚಾರಕ್ಕೆ ನಗರದ ನಾನಾ ಶಿಕ್ಷಣ ಸಂಸ್ಥೆಗಳಿಂದ ಬಸ್ ಒದಗಿಸಿಕೊಡಲು ಆರ್‌ಟಿಓ ಅಧಿಕಾರಿಗೆ ಸೂಚನೆ ನೀಡಿದ ಅವರು, ನಗರಕ್ಕೆ ಆಗಮಿಸಿದ ಪತ್ರಕರ್ತರು ಜಿಲ್ಲೆಯಲ್ಲಿ ಪ್ರವಾಸಕ್ಕೆ ತೆರಳಲು ಸಾರಿಗೆ ಸಂಸ್ಥೆ ಬಸ್‌ಗಳನ್ನು ಪೂರೈಸಲು ವಿಭಾಗೀಯ ನಿಯಂತ್ರಣಾಧಿಕಗಳಿಗೆ ಹೇಳಿದರು.

ಈ ಸಭೆಯಲ್ಲಿ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ. ಬಿ. ವಡವಡಗಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಫಿರೋಜ್ ರೋಜಿನದಾರ, ರಾಜ್ಯ ಕಾರ್ಯಕಾರಿಣಿ ನಾಮನಿರ್ದೇಶಿತ ಸದಸ್ಯರಾದ ಕೆ. ಕೆ. ಕುಲಕರ್ಣಿ, ಕೌಶಲ್ಯಾ ಪನಾಳಕರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗುರು ಲೋಕುರೆ, ಸುರೇಶ ತೇರದಾಳ, ಸಮೀರ ಇನಾಂದಾರ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಸಂಘದ ಸದಸ್ಯರಾದ ಅಶೋಕ ಯಡಳ್ಳಿ, ಗುರು ಗದ್ದನಕೇರಿ, ರಶ್ಮಿ ಪಾಟೀಲ, ಆಹಾರ ಸಮಿತಿಯ ಪ್ರದೀಪ ಕುಲಕರ್ಣಿ, ವಸತಿ ಸಮಿತಿಯ ಶರಣು ಸಬರದ, ಸೀತಾರಾಮ ಕುಲಕರ್ಣಿ, ಚಿದಂಬರ ಕುಲಕರ್ಣಿ, ಶಿವಾನಂದ ಭುಂಯ್ಯಾರ, ನಿಂಗಪ್ಪ ನಾವಿ, ಶ್ರೀನಿವಾಸ ಸೂರಗೊಂಡ, ದೇವೇಂದ್ರ ಹೆಳವರ, ಸಾರಿಗೆ ಸಮಿತಿಯ ಇರ್ಫಾನ್ ಶೇಖ್, ವಿಠ್ಠಲ ಲಂಗೋಟಿ, ಇಸ್ಮಾಯಿಲ್ ಮುಲ್ಲಾ, ಎಸ್. ಬಿ. ಪಾಟೀಲ, ಗೋಪಾಲ ಕಟ್ಟಿಮನಿ, ಆರೋಗ್ಯ ಸಮಿತಿಯ ರವಿ ಜಹಾಗೀರದಾರ, ರವಿ ಕಿತ್ತೂರ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಬಾಲಪ್ಪ ಸಾರವಾಡ, ವಿಜಯಪುರ ನಗರ ಡಿವೈಎಸ್ಪಿ ಸಿದ್ಧೇಶ್ವರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌