ಹೊಗಳಿ ನನ್ನನ್ನು ಹೊನ್ನ ಶೂಲಕ್ಕೇರಿಸಬೇಡಿ- ಬಸವಣ್ಣನವರ ಕಾಲಿನ ಧೂಳಿಗೂ ನಾನು ಸಮನಲ್ಲ- ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ- ಸಿಎಂ ಬೊಮ್ಮಾಯಿ

ವಿಜಯಪುರ: ನನಗೆ ಹೊಗಳಿಕೆ ಎಂದರೆ ಬಹಳ ಭಯ.  ತೆಗಳಿಕೆ ಎಂದರೆ ಬಹಳ ಇಷ್ಟ.  ತೆಗಳಿಕೆ, ಟೀಕೆಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಯಶಸ್ಸು ಹೇಗೆ ಸಾಧಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಸಮುದಾಯದ ಜನ ಜಾಗೃತಿ ಸಮಾವೇಶ ಮತ್ತು ಸಮುದಾಯ ಭವನಕ್ಕೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ಹೊಗಳಿಕೆಗಳು ಬಹಳ ದಾರಿ ತಪ್ಪಿಸುತ್ತವೆ.  ದಯವಿಟ್ಟು ನಾನು ಭೂಮಿಯ ಮೇಲೆ ಇದ್ದೇನೆ.  ಭೂಮಿಯ ಮೇಲೆಯೇ ಇರಲು ಬಿಡಿ ಎಂದು ತಮ್ಮನ್ನು ಆಧುನಿಕ ಬಸವಣ್ಣ ಎಂದು ಬಹುಪರಾಕ್ ಘೋಷಣೆ ಹಾಕಿದವರಿಗೆ ಕಿವಿಮಾತು ಹೇಳಿದರು.

ತಂಗಡಗಿ ಗ್ರಾದಮಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು

ಆಧುನಿಕ ಬಸವಣ್ಣ ಎನ್ನುವುದು ಬಹಳ ದೊಡ್ಡ ತಪ್ಪು.  ಬಸವಣ್ಣನವರು ದೇವ ಮಾನವರು.  ಅವರ ಕಾಲಿನ ಧೂಳಿಗೂ ನಾನು ಸಮನಲ್ಲ.  ಆಧುನಿಕ ಬಸವಣ್ಣ ಎಂದು ಯಾರೂ ತಮ್ಮನ್ನು ಸಂಭೋಧಿಸಬಾರದು.  ಬಸವಣ್ಣನವರೇ ಹೇಳಿದಂತೆ ಹೊಗಳಿ, ಹೊಗಳಿ ನನ್ನನ್ನು ಶೂಲಕ್ಕೆ ಏರಿಸಬೇಡಿ ಎಂದು ಸಿಎಂ ಮನವಿ ಮಾಡಿದರು.

ಸಮಾಜವನ್ನು ಎಸ್ಸಿಗೆ ಸೇರಿಸುವ ವಿಚಾರ

ನಿಮ್ಮ ಸಂಘಟನೆಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ.  ಕಳೆದ ಒಂದು ವರ್ಷದಿಂದ ನೋಡುತ್ತಿದ್ದೇನೆ.  ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿರುವುದನ್ನು ನೋಡಿದರೆ ವಿಸ್ಮಯ ಎನಿಸುತ್ತದೆ.  ಇಷ್ಟು ದಿನ ಈ ಸಣ್ಣ ಸಮಾಜ ಎಲ್ಲಿತ್ತು? ಯಾರು ಅವರನ್ನು ಏನೂ ಕೇಳಲಿಲ್ಲ? ಅವರಿಗೆ ಯಾಕೆ ಸಹಾಯ ಮಾಡಲಿಲ್ಲ? ಅನ್ಯಾಯವಾದರೂ ಸುಮ್ಮನಿದ್ದರು.  ನಾನು ಸಿಎಂ ಆದ ಮೇಲೆ ಎಲ್ಲ ಸಣ್ಣ ಸಮುದಾಯಗಳು ಸಂಘಟಿತರಾಗುತ್ತಿರುವುದನ್ನು ನೋಡಿದರೆ, ಇದರಲ್ಲಿ ಭಗವಂತನಿಂದ ಏನೋ ಸಂದೇಶವಿದೆ ಎಂದು ಅನಿಸುತ್ತದೆ.  ದೈವವೇ ದೇವರು ಎಂದು ನಾನು ನಂಬಿಕೊಂಡಿದ್ದೇನೆ.  ಹೀಗಿರುವಾಗ ಸಣ್ಣ ಸಣ್ಣ ಸಮಾಜಗಳು ಜಾಗೃತಿಯಾಗುತ್ತಿರುವುದು ದೈವೇಚ್ಛೆ.  ಈ ಸಂಘಟನೆಯ ಮುಖಾಂತರ ಸಮಾಜಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.

2016ಕ್ಕೂ ಮುಂಚೆ, ನಾಯಿಂದ ಎಂಬ ಪದದ ಅಡಿಯಲ್ಲಿ ಎಲ್ಲರೂ ಬರುತ್ತಿದ್ದರು.  ಅದನ್ನು ಏಕಾಏಕಿ ತೆಗೆದು ಹಾಕಿದರು.  ಈ ಮೂಲಕ ನಿಮ್ಮನ್ನು ವಿಂಗಡಿಸಿದರು.  ನನ್ನ ಪ್ರಕಾರ ತಾವೆಲ್ಲರೂ ಅಂದೇ ಸಂಘಟಿತರಾಗಬೇಕಿತ್ತು.  ಆದರೆ, ಆ ಸಮಯದಲ್ಲಿ ನಿಮ್ಮನ್ನು ಸಂಘಟಿತರಾಗಲು ಬಿಡದ ವಾತಾವರಣವಿತ್ತು.  ಇಂದಿನ ರೀತಿ ಸಂಘಟಿತರಾಗಲು ಪ್ರೋತ್ಸಾಹದ ವಾತಾವರಣ ಇರಲಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು.  ಸಮಾಜದಲ್ಲಿ ಕೆಲವು ವಿಕಾರ ವ್ಯಕ್ತಿಗಳು ಈ ಸಣ್ಣ ಸಮಾಜಗಳು ಸಂಘಟನೆಯಾದರೆ, ಅವರ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಭಯವಿದೆ.  ಈ ಹಿನ್ನೆಲೆಯಿಂದ ಬಸವಣ್ಣನವರ ಕಾಲದಿಂದಲೂ ಈ ರೀತಿ ಸಂಘಟನೆಯಾಗದಂತೆ ನೋಡಿಕೊಳ್ಳುವ ಪ್ರಯತ್ನಗಳು ನಡೆದುಕೊಂಡು ಬಂದಿವೆ.  ಆದರೆ ಇಂದು ಅವೆಲ್ಲವ್ನನು ತೊಡೆದು ಹಾಕಿ, ರಾಜ್ಯದಲ್ಲಿ ಸಣ್ಣ ಸಣ್ಣ ಸಮಾಜಕ್ಕೆ ಧ್ವನಿ, ಗುರುಗಳು, ಮಠ, ಸಂಘಟನೆ ಸಿಕ್ಕಿದೆ.  ಇನ್ಯಾರು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ತಿಳಿಸಿದರು.

ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ

ಸಮಾಜ ಪರ ಕೆಲಸ ಮಾಡಲು ಈ ಎಲ್ಲ ಗುರುಗಳ ಮಾರ್ಗದರ್ಶನ ನನಗಿದೆ.  ಕಾಲಕಾಲಕ್ಕೆ ಮಾರ್ಗದರ್ಶನ ಇದೆ.  ನೇತೃತ್ವ ಇದೆ.  ಹೀಗಾಗಿ ನಾನೂ ಕೂಡ ಧೈರ್ಯದಿಂದ ಮುಂದುವರೆಯುತ್ತಿದ್ದೇನೆ.  ಯಾವುದಾದರೂ ಬದಲಾವಣೆ, ಪರಿವರ್ತನೆಯಾಗಬೇಕಾದರೆ, ಹೊರಗಡೆ ವಿರೋಧವಾಗುತ್ತದೆ.  ಒಳಗಡೆ ಕುತಂತ್ರ ಇದ್ದೆ ಇರುತ್ತದೆ.  ಇವೆರನ್ನು ಮೆಟ್ಟಿ ನಿಂತಾಗ ಆ ಬದಲಾವಣೆಾಯಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪರಮಪೂಜ್ಯರ ಆಶೀರ್ವಾದದಿಂದ ಸಮಾಜದ ಕೆಲಸ ಮಾಡಲು ಸಿದ್ದನಿದ್ದೇನೆ.  ಹಡಪದ ಅಪ್ಪಣ್ಣ ದೇವರು ಮುಗ್ದ ದೇವರು.  ಅವರಂಥ ಮುಗ್ದ ಗುರುಗಳನ್ನು ನಾನು ನೋಡಿಲ್ಲ.  ಅವರ ಮುಗ್ದತೆಯಲ್ಲಿ, ಅವರ ಪ್ರೀತಿ, ವಿಶ್ವಾಸದಲ್ಲಿ ಶಕ್ತಿಯಿದೆ.  ನಾನು ದಿನನಿತ್ಯ ಹಲವಾರು ಗುರುಗಳನ್ನು ಭೇಟಿಯಾಗುತ್ತೇನೆ.  ಆದರೆ, ಈ ಗುರುಗಳು ಬಂದಾಗ ನನ್ನ ಮನಸ್ಸು ಸಂಪೂರ್ಣವಾಗಿ ಕರಗುತ್ತದೆ.  ಸಮಾಜದ ಬಗ್ಗೆ ಎಷ್ಟು ಕಳಕಳಿ ಇದೆ ಎಂದರೆ, ನಾವು ಯಾರೂ ಕೂಡ ಅದನ್ನು ಯೋಚಿಸಲು ಸಾಧ್ಯವಿಲ್ಲ.  ಇಡೀ ತಮ್ಮ ಬದುಕನ್ನು ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದಾರೆ.  ಈ ಸಮಾಜಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸಮಾಜದ ಸ್ಥಿತಿಗತಿ ಬಗ್ಗೆ ನನಗೆ ಅರಿವಿದೆ.  12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ಅತ್ಯಂತ ಆತ್ಮೀಯರು.  ಅವರ ವಚನಗಳು ಇಂದಿಗೂ ಮಾರ್ಗದರ್ಶನವಾವೆ.  ಹಡಪದ ಅಪ್ಪಣ್ಣ ಇಲ್ಲದೇ ಬಸವಣ್ಣನವರು ಹಲವಾರು ಬಾರಿ ಯಾವುದೇ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ.

ತಮ್ಮ ಸಮಾಜದ ಆಶೋತ್ತರಗಳನ್ನು ಈಡೇರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ತಮ್ಮ ಬೇಡಿಕೆಯಂತೆ ಕುಲಶಾಸ್ತ್ರವನ್ನು ಅಧ್ಯಯನವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾಮಾಜಿಕ ಮಾಡಿ ಸಾಮಾಜಿಕ ನ್ಯಾಯ ಕೊಡಬೇಕು ಎಂಬುದು ಪೂಜ್ಯರ ಪ್ರಥಮ ಬೇಡಿಕೆ.  ಆ ಕುಲಶಾಸ್ತ್ರ ಅಧ್ಯಯನವನ್ನು ಆದಷ್ಟು ಬೇಗನೆ ಮಾಡಿ ನಿಮಗೆ ನ್ಯಾಯ ಕೊಡಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.  ಈ ಸಮಾಜದ ಹೆಸರಿನಲ್ಲಿ ಈಗಾಗಲೇ ಒಂದು ನಿಗಮ ಇದೆ.  ಆದರೆ, ಅದರಲ್ಲಿ ತಮ್ಮನ್ನು ಸೇರಿಸಿಲ್ಲ.  ವೃತ್ತಿ ಆಧಾರಿತವಾಗಿರುವ ಕುಲ ಕಸಬುಗಳಿವೆ, ಕಾರ್ಮಿಕರಿದ್ದಾರೆ ಅವರಿಗೊಸ್ಕರ ವಿಶೇಷ ಕಾರ್ಯಕ್ರಮ ಮಾಡಿ ಅವುಗಳನ್ನು ನಿಗಮದ ಮೂಲಕ ಕೊಡುವ ಕೆಲಸ ಮಾಡುವ ತೀರ್ಮಾನ ಮಾಡಿದ್ದೇನೆ.  ನಮ್ಮ ಸರಕಾರ ನಿಗಮ ರಚಿಸುವ ಘೋಷಣೆಯನ್ನು ಮಾಡಲಿದೆ ಎಂದು ಅವರು ತಿಳಿಸಿದರು.

ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ

ಶಿವಶರಣ ಹಡಪದ ಅಪ್ಪಣ್ಣ ಅವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಮತ್ತು ಶಿವಶರಣೆ ಹಡಪದ ಲಿಂಗಮ್ಮ ಅವರ ಜನ್ಮಸ್ಥಳ ನೇಗಿನಾಳ ಗ್ರಾಮಗಳ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸುವ ಕೆಲಸವನ್ನು ಮುಂದಿನ ಮೀಟಿಂಗ್ ನಲ್ಲಿ ಮಾಡುತ್ತೇವೆ.  ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ಈ ಮೊದಲು ಯಡಿಯೂರಪ್ಪ ರೂ. 1 ಕೋಟಿ ನೀಡಿದ್ದರು.  ನಾನು ಮರೂ. 3 ಕೋ. ನೀಡಿದ್ದೇನೆ.  ಮುಂದೆಯೂ ಸಹಾಯ ಮಾಡುತ್ತೇನೆ.  ಶಾಸಕ ಎ. ಎಸ್.ಪಾಟೀಲ ನಡಹಳ್ಳಿ ಅವರ ಬೇಡಿಕೆಯಂತೆ ಕಾಯಕ ಯೋಜನೆಯಡಿ ಕಾಯಕ ಆಧಾರಿತ ಕರಕುಶಲಗಳಿಗೆ ಅನುದಾನ ಮನ್ನಣೆ ನೀಡಿದ್ದೇವೆ.  ತಂಗಡಗಿ, ರಕ್ಕಸಗಿ, ತಾಳಿಕೋಟೆಯಂಥ ಐತಿಹಾಸಿಕ ಸ್ಥಳಗಳನ್ನು ರಕ್ಷಣೆ ಮಾಡುವುದಷ್ಟೇ ಅಲ್ಲ, ಅಭಿವೃದ್ಧಿಯನ್ನೂ ಮಾಡುತ್ತೇವೆ.  ಈ ಭಾಗದ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡಲಿದ್ದೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಡಪದ ಸಮಾಜದ ಗುರುಗಳು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ. ಪಂ. ಸಿಇಓ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌