ಬಿಜೆಪಿ ಜನರ ಬದುಕು ಕಟ್ಟುವ ಬದಲು ಭಾವನೆ ಕೆರಳಿಸುವ ಕೆಲಸ ಮಾಡಿದೆ ಮುಂದಿನ ಚುನಾವಣೆಯಲ್ಲಿ ಮನೆಗೆ ಹೋಗಲಿದೆ- ಎಂ. ಬಿ. ಪಾಟೀಲ

ವಿಜಯಪುರ, 19: ಬಿಜೆಪಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದೆಯೇ ಹೊರತು ಜನಸಾಮಾನ್ಯರ ಬದುಕು ಕಟ್ಟಿಕೊಡುವ ಕೆಲಸ ಮಾಡಲಿಲ್ಲ.  ಭ್ರಷ್ಟ ರಾಜ್ಯ ಸರಕಾರದ ಪಾಪದ ಕೊಡ ತುಂಬಿ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಮನೆಗೆ ಹೋಗಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಾರ್ಚ್ 20ರ ನಂತರ ಏಪ್ರಿಲ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.  ಈ ಹಿನ್ನೆಲೆಯಲ್ಲಿ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ನೇತೃತ್ವದಲ್ಲಿ ರಾಜ್ಯದ ದಕ್ಷಿಣ ಮತ್ತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ.  ಈ ಯಾತ್ರೆಯಲ್ಲಿ ಕಾಂಗ್ರೆಸ್ ಸಾಧನೆಗಳು ಮತ್ತು ಬಿಜೆಪಿಯ ವೈಫಲ್ಯಗಳು ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಲಿರುವ ಯೋಜನೆಗಳ ಕುರಿತು ಜನಜಾಗೃತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 411 ಇತ್ತು.  ಆದರೆ, ಈಗ ಅದರ ಬೆಲೆ 1170 ರೂಪಾಯಿಗೆ ಹೆಚ್ಚಳವಾಗಿದೆ.  ಅಷ್ಟೇ ಅಲ್ಲ, ಗೊಬ್ಬರ, ಸ್ಟೀಲ್, ಸಿಮೆಂಟ್ ದರ, ಆಹಾರ ಧಾನ್ಯಗಳ ಬೆಲೆಗಳು ಹೆಚ್ಚಾಗಿದೆ.  ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾಗಿರುವ ನೋಟ್ ಬುಕ್ ಮತ್ತು ಪೆನ್ಸಿಲ್ ಮೇಲೂ ಕೇಂದ್ರ ಸರಕಾರ ಶೇ. 18 ಜಿ.ಎಸ್.ಟಿ ಹಾಕಿದೆ.  ರೈತರ ಆದಾಯ ದ್ವಿಗುಣಗೊಳಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ.  ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು.  ಆದರೆ, ಅಧಿಕಾರಕ್ಕೆ ಬಂದು ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಠಿಯಾಗಲಿಲ್ಲ.  ಬದಲಾಗಿ ಈ ಹಿಂದೆ ಇದ್ದ ಒಂದು ಕೋಟಿ ಉದ್ಯೋಗ ಕಡಿತವಾಗಿವೆ.  ಎಲ್ಲರ ಖಾತೆಗೆ ರೂ. 15 ಲಕ್ಷ ಹಾಕುವುದಾಗಿ ಹೇಳಿದ್ದ ಭರವಸೆಯೂ ಹುಸಿಯಾಗಿದೆ.  ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಮನೆ ನಿರ್ವಹಣೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಯ ಖಾತೆಗೆ ಪ್ರತಿ ತಿಂಗಳು ರೂ. 2000ದಂತೆ ವಾರ್ಷಿಕವಾಗಿ ರೂ. 24000 ಹಣ ನೀಡಲಿದೆ.  ಅಲ್ಲದೇ, ವಿದ್ಯುತ್ ಹೊರೆ ತಪ್ಪಿಸಲು ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ತಿಳಿಸಿದರು.

ಬಬಲೇಶ್ವರ ಪ್ರಜಾಧ್ವನಿ ಕಾರ್ಯಕ್ರಮ ಪೂರ್ವಭಾವಿಯಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಎಂ. ಬಿ. ಪಾಟೀಲ ಮಾತನಾಡಿದರು

ಫೆ. 22 ರಂದು ಬಬಲೇಶ್ವರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ

ಬಬಲೇಶ್ವರದಲ್ಲಿ ಫೆ. 22 ರಂದು ಮಧ್ಯಾಹ್ನ 3 ಗಂಟೆಗೆ ಐತಿಹಾಸಿಕ ಪ್ರಜಾಧ್ವನಿ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಡೊಳ್ಳು ಬಾರಿಸುವ ಮೂಲಕ ಪ್ರಚಾರಕ್ಕೆ ಭರ್ಜರಿಯಾಗಿ ಚಾಲನೆ ನೀಡಲಿದ್ದಾರೆ.  ಈ ಕಾರ್ಯಕ್ರಮದಲ್ಲಿ 50 ಸಾವಿರ ಜನ ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.

ಸಿದ್ಧರಾಮಯ್ಯ ಸರಕಾರದಲ್ಲಿ ತಾವು ಜಲಸಂಪನ್ಮೂಲ ಸಚಿವರಾಗಿ ರಾಜ್ಯದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಕೆಲಸ ಮಾಡಿದ್ದೇನೆ.  ಸಮ್ಮಿಶ್ರ ಸರಕಾರದಲ್ಲಿ ಗೃಹ ಸಚಿವನಾಗಿ ಸಿಕ್ಕ ಸ್ವಲ ಅವಧಿಯಲ್ಲಿಯೇ ಅತೀ ಹೆಚ್ಚು ಕೆಲಸ ಮಾಡಿದ್ದೇನೆ.  ಈ ಬಾರಿ ಬಬಲೇಶ್ವರ ಮತಕ್ಷೇತ್ರದಲ್ಲಿ 50 ಸಾವಿರ ಮತಗಳಿಗಿಂತಲೂ ಹೆಚ್ಚು ಅಂತರದಿಂದ ಗೆಲ್ಲಿಸಲು ಮತರಾದರರು ಕಾತುರದಿಂದ ಕಾಯುತ್ತಿದ್ದಾರೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ವಿ. ಎಸ್. ಪಾಟೀಲ, ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಎಚ್. ಎಸ್. ಕೊರಡ್ಡಿ, ಎಂ. ಕೆ. ಶಿವಣ್ಣವರ, ರವಿ ಬಿರಾದಾರ, ಗುರು ಕವಟಗಿ, ರಾಮಣ್ಣ ಮೆಂಡೆಗಾರ, ರಂಗನಾಥ ಅರ್ಜುಣಗಿ, ಆಯತವಾಡ, ಚನ್ನಪ್ಪ ಕೊಪ್ಪದ, ಯಾಕೂಬ್ ಜತ್ತಿ, ಮತ್ತು ಇತರ ನಾಯಕರು ಮಾತನಾಡಿ, ಎಂ. ಬಿ. ಪಾಟೀಲರು ಈಗ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವುದರಿಂದ ಅವರಿಗೆ ರಾಜ್ಯಾದ್ಯಂತ ಕಾಂಗ್ರೆಸ್ ಪರ ಪ್ರಚಾರ ಮಾಡುವ ಹೆಚ್ಚುವರಿ ಜವಾಬ್ದಾರಿಯಿದೆ.  ಹೀಗಾಗಿ ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಾನೂ ಎಂ. ಬಿ. ಪಾಟೀಲ ಎಂಬ ಹೆಮ್ಮೆಯ ಭಾವನೆಯಿಂದ ತಂತಮ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪರ ಹೆಚ್ಚಿನ ಮತಗಳು ಚಲಾವಣೆಯಾಗಲು ಕಂಕಣಬದ್ಧರಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಖಂಡಕಿ ಗ್ರಾಮದ ಬಿಜೆಪಿ ಮುಖಂಡರು ಕಮಲ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಕಾರ್ಯಕ್ರಮದಲ್ಲಿ ಬಬಲೇಶ್ವರ ಮತಕ್ಷೇತ್ರದ ಬಬಲೇಶ್ವರ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಕೆಎಂಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ ನಿಡೋಣಿ, ಆರ್. ಜಿ. ಯರನಾಳ, ಎ. ಎಂ. ಪಾಟೀಲ ಬಿಜ್ಜರಗಿ, ಡಿ. ಎಲ್. ಚವ್ಹಾಣ, ಶಿವನಗೌಡ ಪಾಟೀಲ, ಕೆ. ಎಚ್. ಮುಂಬಾರೆಡ್ಡಿ, ಬಾಪುಗೌಡ ಪಾಟೀಲ ಶೇಗುಣಶಿ, ರಾಜು ಕಂಬಾಗಿ, ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳ ಹಿರಿಯ ಮುಖಂಡರು, ಯುವಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಶಂಕರ ಸಿದರೆಡ್ಡಿ ಪ್ರಾರ್ಥಿಸಿದರು.  ನಾಗು ಹೊಳೆಪ್ಪಗೋಳ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌