ಅವಧಿ ಪೂರ್ವ ಜನಿಸಿದ, ಅತೀ ಕಡಿಮೆ ತೂಕದ ಅವಳಿ ಮಕ್ಕಳಿಗೆ ಚಿಕಿತ್ಸೆ ನೀಡಿ ಪೋಷಕರ, ಜನಮನಗೆದ್ದ ಬಿ.ಎಲ್.ಡಿ.ಇ ಆಸ್ಪತ್ರೆ ವೈದ್ಯರು

ವಿಜಯಪುರ: ಪೋಷಕರೂ ನಂಬಲು ಅಸಾಧ್ಯವಾದ ಮತ್ತು ಅವಧಿಪೂರ್ವ ಜನಿಸಿದ ಹಾಗೂ ಅತೀ ಕಡಿಮೆ ತೂಕ ಹೊಂದಿದ್ದ ಅವಳಿ ಮಕ್ಕಳನ್ನು ಅಕ್ಕರೆಯ ಆರೈಕೆಯಿಂದ ವೈದ್ಯರು ಗುಣಪಡಿಸಿ ಪೋಷಕರಿಗೆ ಹಸ್ತಾಂತರಿಸಿದ ಹೃದಯಸ್ಪರ್ಶಿ ಘಟನೆಗೆ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆ ಸಾಕ್ಷಿಯಾಗಿದೆ.

ಹೆಣ್ಣು ಮಗು ಅನನ್ಯ ಮತ್ತು ಗಂಡು ಮಗು ಆಗಸ್ತ್ಯ(ಹೆಸರು ಬದಲಾಯಿಸಲಾಗಿದೆ)ರ ಆರೋಗ್ಯ ಸತತ 23 ದಿನಗಳ ಉತ್ತಮ ಆರೈಕೆಯಿಂದ ಈಗ ಸುಧಾರಿಸಿದ್ದು, ಕೆಕ್ ಕತ್ತರಿಸಿ ಪೋಷಕರಿಗೆ ಶುಭ ಕೋರಿ ಶಿಶುಗಳನ್ನು ಪೋಷಕರಿಗೆ ಆತ್ಮೀಯವಾಗಿ ಬೀಳ್ಕೋಟ್ಟಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಉಪಪ್ರಾಚಾರ್ಯ ಡಾ. ಮಲ್ಲಿಕಾರ್ಜುನ(ಆನಂದ) ಪಾಟೀಲ, ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ಕಲ್ಯಾಣಶೆಟ್ಟರ, ನವಜಾತ ಶಿಶುಗಳ ತಜ್ಞವೈದ್ಯ ಡಾ. ಸಿದ್ಧು ಮಹಾದೇವ ಚರಕಿ, ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕ ಡಾ. ಬಾಬುಬೌಡ ನ್ಯಾಮಣ್ಣವರ ಉಪಸ್ಥಿತರಿದ್ದು ಮಕ್ಕಳು ಮತ್ತು ಪೋಷಕರಿಗೆ ಶುಭ ಕೋರಿದರು.

ಅಪರೂಪದ ಪ್ರಕರಣ

ಚಿಮ್ಮಲಗಿ ಗ್ರಾಮದ ಶಿವರಾಜ ಕುಂಬಾರ ಅವರ ಪತ್ನಿ ಕಾವೇರಿ ಕುಂಬಾರ ದಂಪತಿಗೆ ಜನಿಸಿದ ಅವಳಿ ಮಕ್ಕಳು ಕೇವಲ 750 ಮತ್ತು 780 ಗ್ರಾಂ ತೂಕ ಹೊಂದಿದ್ದವು. ತುಂಬು ಗರ್ಭಿಣಿ ಮಹಿಳೆಯರಿಗೆ ಗರ್ಭ ಧರಿಸಿದ ಸುಮಾರು 40 ವಾರಗಳವರೆಗೆ ಹೆರಿಗೆಯಾಗುತ್ತದೆ. ಆದರೆ, ಈ ಮಹಿಳೆ ಕೇವಲ 29 ವಾರಕ್ಕೆ ಅವಧಿ ಪೂರ್ವ ಮತ್ತು ಅತ್ಯಂತ ಕಡಿಮೆ ತೂಕದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ನೂರರಲ್ಲಿ ಸುಮಾರು 5 ರಷ್ಟು ಇಂಥ ಹೆರಿಗೆಗಳಾಗುತ್ತಿದ್ದು, 1 ಕೆಜಿ ಅಂದರೆ 1000 ಗ್ರಾಂ ಗಳಿಗಿತಂಲೂ ಕಡಿಮೆ ತೂಕ ಹೊಂದಿರುತ್ತವೆ. ಇಂಥ ಮಕ್ಕಳಲ್ಲಿ ನಾನಾ ಕಾರಣಗಳಿಂದ ಜನಿಸಿದ ತಕ್ಷಣವೇ ಶಸ್ತ್ರಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ, ಇಂಥ ಶಿಶುಗಳಲ್ಲಿ ಶೇ. 5 ರಷ್ಟು ಮಾತ್ರ ಬದುಕುಳಿಯುವ ಸಾಧ್ಯತೆ ಇರುತ್ತವೆ. ಈ ಪ್ರಕರಣದಲ್ಲಿ ಗಂಡು ಮಗು ಆಗಸ್ತ್ಯನಿಗೆ ಜನ್ಮದಿನಂದಂಲೇ ಉದರ ಸಂಬಂಧಿ ಸಮಸ್ಯೆಯಿತ್ತು. ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕ ಡಾ. ಬಾಬುಗೌಡ ನ್ಯಾಮಣ್ಣವರ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಿದರು. ನಂತರ ಮಗುವನ್ನು 72 ಗಂಟೆಗಳ ಕಾಲ ಜೀವರಕ್ಷಕ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಯಿತು. ಅಲ್ಲಿನ ವೈದ್ಯರು ಮತ್ತು ನರ್ಸ್ ಗಳ ಪ್ರೀತಿಯ ಆರೈಕೆಯಿಂದ ಮಗು ಈಗ ಚೇರಿಸಿಕೊಂಡಿದೆ ಎಂದು ಆಸ್ಪತ್ರೆಯ ನವಜಾತ ಶಿಶುಗಳ ತಜ್ಞವೈದ್ಯ ಡಾ. ಸಿದ್ದು ಮಹಾದೇವ ಚರ್ಕಿ ತಿಳಿಸಿದರು.

ಅವಳಿ ಮಕ್ಕಳಿಗೆ ಚಿಕಿತ್ಸೆ ನೀಡಿ ಬೀಳ್ಕೋಟ್ಟ ಬಿ.ಎಲ್.ಡಿ.ಇ ಕುಲಪತಿ ಡಾ. ಆರ್. ಎಸ್. ಮುಧೋಳ, ಆಸ್ಪತ್ರೆ ವೈದ್ಯರು, ದಾದಿಯರು

ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ಕುಲಾಧಿಪತಿಯೂ ಆಗಿರುವ ಎಂ. ಬಿ. ಪಾಟೀಲರು ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಅದರಲ್ಲೂ ಚಿಕ್ಕಮಕ್ಕಳ ಚಿಕಿತ್ಸೆಯಲ್ಲಿ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಸುಸಸ್ಜಿತವಾದ ಚಿಕಿತ್ಸಾ ಸೌಲಭ್ಯಗಳಿದ್ದು, ರಾಷ್ಟ್ರೀಯ ಮಾನ್ಯತೆ ಪಡೆದ ನವಜಾತ ಶಿಶುಗಳ 3ನೇ ಹಂತದ ತೀವ್ರ ನಿಗಾ ಘಟಕವಿದೆ. ಇಲ್ಲಿ ಪ್ರತಿ ವರ್ಷ ಸುಮಾರು 2000ದ ವರೆಗೆ ನವಜಾಶ ಶಿಶುಗಳು ಆಸ್ಪತ್ರೆಗೆ ದಾಖಲಾಗುತ್ತವೆ. ಇವುಗಳಲ್ಲಿ ಒಂದು ಕೆಜಿಗೂ ಕಡಿಮೆ ತೂಕದ ಸುಮಾರು ಶೇ. 20 ರಷ್ಟು ಮಕ್ಕಳು ದಾಖಲಾಗುತ್ತವೆ. ಇವುಗಳಿಗೆ ಕಾಳಜಿಪೂರಕ ಚಿಕಿತ್ಸೆಯ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿವೆ. ಇಲ್ಲಿನ ವೈದ್ಯರು ಪಕ್ಕಾ ವೃತ್ತಿಪರರಾಗಿದ್ದು, ಎಲ್ಲ ರೀತಿಯ ಚಿಕಿತ್ಸೆಗೆ ಸದಾ ಸನ್ನದ್ಧರಾಗಿರುತ್ತಾರೆ. ನಾನಾ ಆರೋಗ್ಯ ವಿಮೆ ಯೋಜನೆಗಳಡಿಯೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಸಧ್ಯಕ್ಕೆ 100 ಜನ ನಾನಾ ಯೋಜನೆಗಳಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತೀ ಶೀಘ್ರದಲ್ಲಿ ತಾಯಿಯ ಹಾಲು ಸಂಗ್ರಹ ಘಟಕ ಕೂಡ ಕಾರ್ಯಾರಂಭ ಮಾಡಲಿದೆ. ಸಾರ್ವಜನಿಕರು ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅವಳಿ ಮಕ್ಕಳ ತಂದೆ ಶಿವರಾಜ ಕುಂಬಾರ ಮತ್ತು ತಾಯಿ ಕಾವೇರಿ ಕುಂಬಾರ ಮಾತನಾಡಿ, ನಮ್ಮ ಮಕ್ಕಳು ಬದುಕುಳಿಯುವ ಬಗ್ಗೆ ಆತಂಕವಿತ್ತು. ಆದರೆ, ಚಿಕಿತ್ಸೆಗೆ ಬಂದಾಗಿನಿಂದ ಬಿ.ಎಲ್.ಡಿ.ಇ. ಆಸ್ಪತ್ರೆಯ ವೈದ್ಯರು ಮತ್ತು ಆರೈಕೆ ಸಿಬ್ಬಂದಿ ತಮ್ಮ ಮನೆಯ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯನ್ನು ನಮ್ಮ ಮಕ್ಕಳಿಗೆ ತೋರಿಸಿದ್ದಾರೆ. ಆರಂಭದಲ್ಲಿ ತಪಾಸಣೆಗೆ ಬಂದಾಗ ಡಾ. ನೀಲಮ್ಮ ಪಾಟೀಲ ಅವರು 15 ದಿನ ಆಸ್ಪತ್ರೆಯಲ್ಲಿಯೇ ದಾಖಲಿಸಿಕೊಂಡು ಉತ್ತಮ ಚಿಕಿತ್ಸೆ ನೀಡಿದರು. ನಂತರ ಮನೆಗೆ ತೆರಳಿದ ದಿನವೇ ಆರೋಗ್ಯ ಸಮಸ್ಯೆ ಎದುರಾದಾಗ ಮಧ್ಯರಾತ್ರಿ 3.30ಕ್ಕೆ ಆಸ್ಪತ್ರೆಗೆ ಬಂದಾಗ ಕೂಡಲೇ ದಾಖಲಿಸಿಕೊಂಡರು. ಸಹಜ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದಾಗ ಎಷ್ಟು ಸಂತೋಷವಾಗಿತ್ತೋ ಅವುಗಳ ತೂಕ ಕಡಿಮೆ ಇರುವುದನ್ನು ತಿಳಿಸಿದ ಅಷ್ಟೇ ಅತಂಕವೂ ಉಂಟಾಗಿತ್ತು. ಆದರೆ, ಆಸ್ಪತ್ರೆಯ ವೈದ್ಯರಾದ ಡಾ. ಸಿದ್ದು ಚರಕಿ, ಡಾ. ಬಾಬುಗೌಡ ನ್ಯಾಮಣ್ಣವರ ಆಸ್ಪತ್ರೆಯ ನರ್ಸ್ ಗಳ ಕಾಳಜಿಪೂರಕ ಆರೈಕೆಯಿಂದ ಈಗ ಮಕ್ಕಳು ಗುಣಮುಖರಾಗಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ಈ ಅವಳಿ ಮಕ್ಕಳನ್ನು ಕಾಂಗರೂ ಮದರ್ ಕೇರ್ ಅಂದರೆ ಮಗುವನ್ನು ಕಾಂಗರೂ ಪ್ರಾಣಿಯಂತೆ ತಾಯಿ ತಮ್ಮ ಹೊಟ್ಟೆಯ ಮೇಲೆ ಇರಿಸಿಕೊಂಡು ಆರೈಕೆ ಮಾಡಲಾಯಿತು. ಇದರಿಂದಾಗಿ ಭಾವನಾತ್ಮಗ ಬೆಂಬಲ ಮತ್ತು ನೋವು ಮುಕ್ತ ಚಿಕಿತ್ಸೆ ದೊರೆಯಲು ನೆರವಾಗುತ್ತದೆ. ಈ ಚಿಕಿತ್ಸೆಯ ನಂತರ ಮಗುವನ್ನು ನವಜಾತ ಶಿಶುಗಳ ತೀವ್ರನಿಗಾ ಘಟಕದ ತಜ್ಞ ವೈದ್ಯರು ಮತ್ತು ನರ್ಸ್ ಗಳ ಆರೈಕೆಯಲ್ಲಿ ಚಿಕಿತ್ಸೆ ನೀಡಿ ಈಗ 23 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತಿರುವುದು ನಮ್ಮ ಸಂತಸ ಇಮ್ಮಡಿಯಾಗುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ಈಗ ಆಧುನಿಕ ಕಾಲಕ್ಕೆ ತಕ್ಕಂತೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಮತ್ತು ನುರಿತ ತಜ್ಞ ವೈದ್ಯರ ಸೇವೆ ಲಭ್ಯವಿರುವುದು ಬಸವನಾಡು ವಿಜಯಪುರ ಅಷ್ಟೇ ಅಲ್ಲ, ಅಕ್ಕಪಕ್ಕದ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದ ಜನರಿಗೂ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌